ರಾಜಕೀಯ

ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ, ಆದರೆ ಬಿಜೆಪಿ ಗೆಲುವು ಖಂಡಿತ : ಸಿಎಂ ಬೊಮ್ಮಾಯಿ 

Sumana Upadhyaya

ಹುಬ್ಬಳ್ಳಿ: ಕಿತ್ತೂರು ಕರ್ನಾಟಕ ಭಾಗಕ್ಕೆ ಕೇಂದ್ರ ಗೃಹ ಸಚಿವ ಬಿಜೆಪಿಯ ಚಾಣಕ್ಯ ಅಮಿತ್ ಶಾ ಬಂದು ಹೋಗಿದ್ದಾರೆ, ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿದ್ದಾರೆ. 

ಈ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಾರತೀಯ ಜನತಾ ಪಾರ್ಟಿ ಗಟ್ಟಿಯಾಗಿದೆ. ನಿನ್ನೆ ದಿನ ಅಮಿತ್ ಶಾ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ. ಯಾರು ಏನೇ ಹೇಳಲಿ ಬಿಜೆಪಿ ಗೆಲುವು ಖಂಡಿತ ಎಂದು ಭವಿಷ್ಯ ನುಡಿದರು.

ಅಮಿತ್ ಶಾ ಕೊಟ್ಟಿರುವ ಸೂಚನೆ ಏನು?: ಅಮಿತ್ ಶಾ ರಾಜ್ಯ ನಾಯಕರಿಗೆ ಚುನಾವಣೆಗೆ ತಯಾರಿ ‌ಮಾಡಿಕೊಳ್ಳಲು ಸೂಚಿಸಿದ್ದಾರೆ. ಕರ್ನಾಟಕ ರಾಜಕೀಯ ವ್ಯಕ್ತಿ ಆಧಾರಿತ ಹಾಗೂ ದ್ವೇಷ ಆಧಾರಿತ ಇಲ್ಲ. ಕಾರ್ಯಕ್ರಮದ ಮೂಲಕ ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಹತಾಶೆಯಾಗಿದೆ, ಅದು ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಯಾವತ್ತೂ ಬಳಸದ ಕೀಳು‌ಮಟ್ಟದ ಪದಗಳನ್ನು ಅವರು ಬಳಸುತ್ತಿದ್ದಾರೆ. ನಾನು ಮಾತ್ರ ಸಂಯಮದಿಂದ ಇದ್ದೇನೆ. ಬಿ.ಎಲ್.ಸಂತೋಷ್ ಸಂಘಟನಾತ್ಮಕ ವಿಷಯವಾಗಿ ಇಂದು ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಸರ್ವೆ ಕಾರ್ಯ ನಡೆಯುತ್ತಿದೆ, ಆದರೆ ಯಾವುದೂ ಅಂತಿಮ ಅಲ್ಲ. ಗೋ ಬ್ಯಾಕ್ ಅಶೋಕ್ ವಿಚಾರವಾಗಿ ಯಾರೋ ನಾಲ್ಕ ಜನ ಮಾಡುತ್ತಾರೆ. ನೀವು ಹೈಲೆಟ್ ಮಾಡುತ್ತೀದ್ದೀರಿ ಎಂದು ಮಾಧ್ಯಮಗಳ ವಿರುದ್ಧ ಸಿಎಂ ಬೊಮ್ಮಾಯಿ ಆರೋಪಿಸಿದರು.

SCROLL FOR NEXT