ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸುವ ವಿಪಕ್ಷಗಳ ಪ್ರಯತ್ನ ಯಶಸ್ವಿಯಾಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಾಳೆಯಿಂದ ನಡೆಯಲಿರುವ ಎರಡು ದಿನಗಳ ವಿಪಕ್ಷಗಳ ಸಭೆ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳಿಗೆ ಸ್ವಂತ ಬಲವಿಲ್ಲ. ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲ,. ಬೆಂಗಳೂರಿನಲ್ಲಿ ನಡೆಯುವ ಸಭೆಯಿಂದ ಅವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಪಕ್ಷಗಳು ದೇಶದ ಹಿತದೃಷ್ಟಿಯಿಂದ ಒಂದಾಗುತ್ತಿಲ್ಲ. ವಂಶಪಾರಂಪರ್ಯ ರಾಜಕೀಯ ಆಡಳಿತಕ್ಕೆ ಈಗ ಕುತ್ತು ಬಂದಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಹಲವು ಮಂದಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಮೋದಿ ಮತ್ತೆ ಪ್ರಧಾನಿಯಾದರೆ ನಮ್ಮ ಕುಟುಂಬದ ಕನಸು ಭಗ್ನವಾಗುತ್ತದೆ. ರಾಜಕೀಯ ಹಿತಾಸಕ್ತಿಗೆ ಕಂಟಕರಾಗುತ್ತಾರೆ ಎಂಬ ಭಯದಿಂದ ಒಂದುಗೂಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆಯಿಂದ ಎರಡು ದಿನ ವಿಪಕ್ಷಗಳ ಸಭೆ: ಭರ್ಜರಿ ತಯಾರಿ, ಎಲ್ಲೆಡೆ ರಾರಾಜಿಸುತ್ತಿರುವ ಫೋಸ್ಟರ್ ಗಳು!
ದೇಶ ವಿಶ್ವಗುರು ಆಗಬೇಕು ಎಂಬುದು ಬಿಜೆಪಿಯ ಅಜೆಂಡಾವಾಗಿದೆ. ಆದರೆ, ಬೆಂಗಳೂರಿನಲ್ಲಿ ಸಭೆ ಸೇರುತ್ತಿರುವ ವಿಪಕ್ಷಗಳ ಅಜೆಂಡಾ ಏನು ಏಂದು ಪ್ರಶ್ನಿಸಿದರು.