ಬೆಂಗಳೂರು: ಆಮ್ ಆದ್ಮಿ ಪಕ್ಷವು ಶುಕ್ರವಾರ ಬಿಡುಗಡೆ ಮಾಡಿದ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಸಾರ್ವತ್ರಿಕ ಉಚಿತ ಆರೋಗ್ಯ ಸೇವೆ ಒದಗಿಸುವ ಭರವಸೆಯನ್ನು ಮತದಾರರಿಗೆ ನೀಡಿದೆ.
ಬೆಂಗಳೂರಿನಲ್ಲಿ ಶುಕ್ರವಾರ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಅಶ್ವಿನ್ ಮಹೇಶ್, ರಾಜ್ಯ ಮಾಧ್ಯಮ ಸಂಚಾಲಕಿ ಉಷಾ ಮಹೇಶ್ ಬಿಡುಗಡೆ ಮಾಡಿದರು.
ಪ್ರಣಾಳಿಕೆಯಲ್ಲಿ ನವದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ರಾಜ್ಯದಲ್ಲಿ ದ್ವಿಭಾಷಾ ನೀತಿ, ಆಡಳಿತದಲ್ಲಿ ಪಾದರ್ಶಕತೆ ಕಾಯ್ದುಕೊಳ್ಳಲು ಮೊಬೈಲ್ ಸೇವಗೆ ಮೊದಲ ಆದ್ಯತೆ ಸೇರಿ ಹಲವು ಭರವಸೆಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ಎಎಪಿ ನೀಡಿದೆ.
ಕಮಿಷನ್ ಅಥವಾ ಲಂಚಕ್ಕಾಗಿ ಯಾವುದೇ ಬೇಡಿಕೆಯನ್ನೂ ಪಕ್ಷ ಸಹಿಸುವುದಿಲ್ಲ. ಸರ್ಕಾರಿ ಸೇವೆ, ನೇಮಕಾತಿ, ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ 100ರಷ್ಟು ಪಾರದರ್ಶಕತೆ ತರಲಾಗುವುದು. ಸಣ್ಣ ಭ್ರಷ್ಟಾಚಾರಕ್ಕೂ ಆಸ್ಪದ ನೀಡುವುದಿಲ್ಲ. ಆರ್ಟಿಐ ಕಾಯ್ದೆ ಇನ್ನಷ್ಟು ಬಲಪಡಿಸಲಾಗುವುದು. ಸ್ಥಳೀಯ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರ, ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಸಮಾನ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಾಗಿದೆ ಎಂದು ಪೃಥ್ವಿ ರೆಡ್ಡಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮೂರು ಪಕ್ಷಗಳ ಅಬ್ಬರದ ನಡುವೆ ರಾಜ್ಯದಲ್ಲಿ ಅಸ್ತಿತ್ವದ ಹುಡುಕಾಟದಲ್ಲಿ ಎಎಪಿ
ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡುವ ಜತೆಗೆ, ಅಗತ್ಯ ಅನುದಾನ ಒದಗಿಸುವುದು, ಮೊಬೈಲ್ ಸೇವೆಗೆ ಆದ್ಯತೆ, ಮನೆ ಬಾಗಿಲಿಗೆ ಪಡಿತರ ವಿತರಣೆ, ಜನರ ಬಳಿಗೆ ಸರ್ಕಾರಿ ಸೇವೆಗಳು, ಪ್ರತಿ ಜಿಲ್ಲೆಯಲ್ಲೂ ಬೆಳೆಗಾರರ ಸಂಘ ರಚನೆ, ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದು, ಗುತ್ತಿಗೆ ಶಿಕ್ಷಕರ ಸೇವೆ ಕಾಯಂ, ರಾಜ್ಯದ ಎಲ್ಲ ಜನರಿಗೂ ಕುಡಿಯುವ ನೀರು ಉಚಿತ ಪೂರೈಕೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ, ದ್ವಿಭಾಷಾ ನೀತಿಯ ಅಳವಡಿಕೆ, ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ. ಪ್ರತಿ ವರ್ಷ 2 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಜಿಲ್ಲಾವಾರು ಪ್ರಣಾಳಿಕೆಯನ್ನೂ ರೂಪಿಸಲಾಗಿದ್ದು, ಆಯಾ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ.
ಪ್ರಣಾಳಿಕೆಯ ಭರವಸೆಗಳು ಇಂತಿವೆ.