ರಾಜಕೀಯ

ರಾಜಕೀಯದಲ್ಲಿ ದೂರದೃಷ್ಟಿ, ತಾಳ್ಮೆ ಅಗತ್ಯ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿಲ್ಲ: ಲಕ್ಷ್ಮಣ ಸವದಿ

Manjula VN

ಬೆಳಗಾವಿ: ದೂರದೃಷ್ಟಿ ಮತ್ತು ತಾಳ್ಮೆ ರಾಜಕೀಯದಲ್ಲಿ ಬಹಳ ಮುಖ್ಯ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗಂತೂ ನಿರಾಸೆ ಆಗಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಸೋಮವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರೀಕ್ಷೆ ಯಾರಿಗೆ ಇರಲ್ಲ, ಎಲ್ಲರಿಗೂ ಸಹ ನಿರೀಕ್ಷೆ ಇದ್ದೇ ಇರುತ್ತದೆ. ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ. ಎಲ್ಲರೂ ಸಚಿವರಾಗಬೇಕು, ನಂತರ ಡಿಸಿಎಂ ಆಗಬೇಕು, ಬಳಿಕ ಸಿಎಂ ಆಗಬೇಕು ಎಂದು ನಿರೀಕ್ಷೆ ಇಟ್ಟಿರುತ್ತಾರೆ. ಆಸೆಗಳಿಗೆ ಕೊನೆ ಯಾವತ್ತೂ ಇರುವುದಿಲ್ಲ. ಅದು ಮನುಷ್ಯನ ಸ್ವಾಭಾವಿಕ ಮನಸ್ಥಿತಿ ಎಂದು ಹೇಳಿದರು.

ಈ ಬಾರಿ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಗೆಲುವು ಸಾಧಿಸಿದ್ದಾರೆ. ಹಿರಿಯರು ಸಚಿವ ಸ್ಥಾನಕ್ಕೆ ಬಂದಾಗ ಹೊಸಬರು ಬದಿಗೆ ಸರಿಯಬೇಕು. ಸಚಿವ ಸ್ಥಾನ ತಪ್ಪಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ಮೇಲಾಗಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವ ಅವಕಾಶ ಸಿಕ್ಕಿದೆ, ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ತರುವ ಕೆಲಸ ಮಾಡುತ್ತೇನೆಂದು ತಿಳಿಸಿದರು.

ರಾಜ್ಯದ ಜನತೆಗೆ ಘೋಷಿಸಿರುವ ಐದು ಭರವಸೆಗಳನ್ನು ಜಾರಿಗೊಳಿಸುವುದು ನಮ್ಮ ಸರ್ಕಾರದ ಮೊದಲ ಉದ್ದೇಶ ಮತ್ತು ಜವಾಬ್ದಾರಿಯಾಗಿದೆ. ಈ ಯೋಜನೆಗಳಿಗೆ ನಿಯಮಾವಳಿ ಮತ್ತು ಷರತ್ತುಗಳನ್ನು ರೂಪಿಸಲು ಮುಖ್ಯಮಂತ್ರಿ ಮತ್ತು ಸಚಿವರು ಶ್ರಮಿಸುತ್ತಿದ್ದಾರೆ. ವಿರೋಧ ಪಕ್ಷವು ಈಗಾಗಲೇ ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರವನ್ನು ದೂಷಿಸಲು ಪ್ರಾರಂಭಿಸಿದೆ. ನಾವು ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ, ಆದರೆ, ನಾವು ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣ ನಡೆದಿದೆ. ವೀರಶೈವ ಲಿಂಗಾಯತರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದು ಪಕ್ಷದ ಗೆಲುವಿಗೆ ಒಂದು ಕಾರಣವಾಗಿದೆ. ರಾಜ್ಯದ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಾಯಕರೊಬ್ಬರು ಕಾರಣ ಎಂಬ ಊಹಾಪೋಹಗಳನ್ನು ಸವದಿಯವರು ನಿರಾಕರಿಸಿದರು.

SCROLL FOR NEXT