ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಅವರ ಆಯ್ಕೆ ಬಗ್ಗೆ ಇಂದು ಶುಕ್ರವಾರ ಬೆಳಗ್ಗೆ ಕಟುವಾಗಿ ಟೀಕಿಸಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಟ್ಟು ಶಮನವಾದಂತೆ ಕಂಡುಬರುತ್ತಿಲ್ಲ. ವಿಜಯೇಂದ್ರ ಆಯ್ಕೆ ಬಗ್ಗೆ ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಯತ್ನಾಳ್ ಅವರ ಆಕ್ರೋಶ ಇಂದು ಮಾಧ್ಯಮಗಳ ಮುಂದೆ ಸ್ಫೋಟಗೊಂಡವು.
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ ಶಾಸಕಾಂಗ ಪಕ್ಷದ ಸಭೆ ಆರಂಭವಾಗಲಿದೆ. ಅದರಲ್ಲಿ ಭಾಗವಹಿಸದೇ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿಯವರು ಏಕಾಏಕಿ ಹೊರನಡೆದು ಕಾರನ್ನೇರಿ ಹೋಗುತ್ತಿರುವುದು ಕಂಡುಬಂತು.
ಬಸನಗೌಡ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಚಹಾ ಕುಡಿಯಲು ಹೊರಹೋಗುತ್ತಿದ್ದೇನೆ, ಇದು ಬಡವರು ಚಹಾ ಕುಡಿಯುವ ಸ್ಥಳವಲ್ಲ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಲಿಲ್ಲ. ಇವರ ಜೊತೆ ಆರಂಭದಲ್ಲಿ ಹೊಟೇಲ್ ನಿಂದ ಹೊರಬಂದಿದ್ದ ಅರವಿಂದ ಬೆಲ್ಲದ್ ನಂತರ ಒಳಹೋಗಿದ್ದಾರೆ.
ಇದನ್ನೂ ಓದಿ:ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು; ವರಿಷ್ಠರು ಚೇಲಾಗಳ ಮಾತು ಕೇಳಿ ನಿರ್ಧಾರ ಮಾಡಬಾರದು: ಯತ್ನಾಳ್
ಅಂದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಟ್ಟು ಶಮನವಾಗಿಲ್ಲ, ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿಯೂ ಅವರ ಒಮ್ಮತವಿಲ್ಲ ಎಂಬುದು ಕಂಡುಬರುತ್ತಿದೆ. ಶಾಸಕಾಂಗ ಪಕ್ಷದ ಸಭೆಗೆ ಮುನ್ನ ಬೆಂಗಳೂರಿನಲ್ಲಿ ಇದೀಗ ತಾನೇ ಹಿರಿಯ ನಾಯಕರ ಸಭೆ ನಡೆದಿದೆ, ಅಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಚರ್ಚೆಯಾಗಿದೆ. ಹೈಕಮಾಂಡ್ ವೀಕ್ಷಕರ ಸಭೆಯಲ್ಲಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದ್ದು ಅವರ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.
ಆರ್ ಅಶೋಕ್ ಗೆ ವಿರೋಧ ಪಕ್ಷ ನಾಯಕನ ಪಟ್ಟ?: ಇನ್ನು ಇಷ್ಟು ದಿನ ನೆನೆಗುದಿಗೆ ಬಿದ್ದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆರ್ ಅಶೋಕ್ ಅವರ ಹೆಸರು ಅಂತಿಮವಾಗಿ ಎಂದು ಹೇಳಲಾಗುತ್ತಿದೆ.