ರಾಜಕೀಯ

'ಬೇರೆಯವರ ಕೆರೆಗಳಲ್ಲಿ ಮೀನು ಹಿಡಿಯುವುದೇ ಬಿಜೆಪಿಯವರ ಕೆಲಸ; ವಿರೋಧ ಪಕ್ಷದ ನಾಯಕನ ಆಯ್ಕೆಯಾಗದಿರುವುದು ವಿಪರ್ಯಾಸ'

Shilpa D

ಬೆಳಗಾವಿ: ಆಪರೇಷನ್ ಕಮಲವನ್ನು ಅಸ್ತ್ರವನ್ನಾಗಿಸಿಕೊಂಡು ಏಳೆಂಟು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ, ಆದರೆ, ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕ ಘಟಕದಲ್ಲಿ ನಾಯಕತ್ವದ ರೇಸ್ ಇಲ್ಲ, ಬಿಜೆಪಿಯವರಿಗೆ ಬೇರೆಯವರ ಕೆರೆಯಲ್ಲಿ‌ ಮೀನು ಹಿಡಿಯುವುದೇ ಕೆಲಸ. ಅವರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗದಿರುವುದು ವಿಪರ್ಯಾಸ' ಎಂದರು‌.

ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ, ಸರಕಾರ ಗಟ್ಟಿಯಾಗಿ ನಿಂತಿದೆ, ಚುನಾವಣೆ ವೇಳೆ ಘೋಷಿಸಿದ್ದ ಖಾತ್ರಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ, ಎರಡೂವರೆ ವರ್ಷದ ಬಳಿಕ ಸಿ.ಎಂ ಬದಲಾಗುತ್ತಾರಾ' ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ. ಈಗ ಸರ್ಕಾರ ಸುಭದ್ರವಾಗಿದೆ. ನಾವು ಯಾವುದೇ ವದಂತಿಗಳಿಗೆ ಕಿವಿಗೊಡುವುದಿಲ್ಲ ಎಂದು ಉತ್ತರಿಸಿದರು.

ಚುನಾವಣೆಯಲ್ಲಿ ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ. ಮಂತ್ರಿ ಆಗುವ ಆಸೆಯಿಂದ ಒಂದಿಬ್ಬರು ಶಾಸಕರು ಸಿ.ಎಂ ಬದಲಾವಣೆ ಬಗ್ಗೆ ಹೇಳಿಕೆ ನೀಡಿರಬಹುದು. ಅದು ಸರಿಯಲ್ಲ. ಅವರು ಹೇಳಿಕೆ ಕೊಟ್ಟಮಾತ್ರಕ್ಕೆ ಮುಖ್ಯಮಂತ್ರಿ ಬದಲಾಗುವುದಿಲ್ಲ. ಶಾಸಕರು ಹೀಗೆ ಕೊಡುವುದನ್ನು ನಿಲ್ಲಿಸಬೇಕು ಎಂದು ಕೋರಿದರು.
 
ಜಿ.ಪರಮೇಶ್ವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಡಿನ್ನರ್ ಪಾರ್ಟಿ ಆಯೋಜಿಸಿರುವ ಮತ್ತು ಅದಕ್ಕೆ ಡಿ.ಕೆ.ಶಿವಕುಮಾರ ಆಹ್ವಾನಿಸದ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, 'ಇದು ಸೌಹಾರ್ದಯುತ ಭೇಟಿ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಎಲ್ಲ ನಾಯಕರನ್ನೂ ಇದಕ್ಕೆ ಆಹ್ವಾನಿಸಬೇಕು ಎಂದೇನೂ ಇಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ' ಎಂದು ಉತ್ತರಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಬಣ್ಣ ಈಗ ಬಯಲಾಗಿದೆ. ತಾವಿಬ್ಬರೂ ಸೇರದಿದ್ದರೆ ಉಳಿಗಾಲವಿಲ್ಲ ಎಂದು ಹೆದರಿ ಒಂದಾಗಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಅನುಕೂಲವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

SCROLL FOR NEXT