ದಿಂಗಾಲೇಶ್ವರ ಸ್ವಾಮೀಜಿ ಮತ್ತು ಪ್ರಹ್ಲಾದ್ ಜೋಶಿ 
ರಾಜಕೀಯ

ಜೋಶಿಗೆ ಬಿಸಿತುಪ್ಪವಾದ ಸ್ವಾಮೀಜಿ: 30 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿಗೆ ಲಿಂಗಾಯತ ಸಮುದಾಯದ ವಿರೋಧ!

2021 ರಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ದಿಂಗಾಲೇಶ್ವರ ಸ್ವಾಮಿ ಅವರು "ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿಹೋಗುತ್ತದೆ" ಎಂದು ಹೇಳಿದ್ದರು

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಜಯಿಸಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಆದರೆ ಲಿಂಗಾಯತ ಸಮುದಾಯದ ಸಮೀಕರಣದ ಲೆಕ್ಕಾಚಾರದಲ್ಲಿ ತಪ್ಪಾಗಿ ಕಾಣುತ್ತಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಕಣಕ್ಕಿಳಿಸಿದರೆ ಸೋಲಿಸುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಶಿರಹಟ್ಟಿ ಫಕೀರೇಶ್ವರ ಮಠದ ಮಠಾಧೀಶರಾದ ದಿಂಗಾಲೇಶ್ವರ ಸ್ವಾಮಿಗಳು ಏಪ್ರಿಲ್ 2 ರಂದು ಮಠಾಧೀಶರ ಸಭೆ ಕರೆದಿದ್ದಾರೆ. ಅವರ ಅಭಿಪ್ರಾಯ ಪಡೆಯಲು ಸ್ವಾಮೀಜಿಗಳ ಸಭೆ ನಡೆಸಲಾಗಿದ್ದು, ಈಗ ಭಕ್ತರ ಸಭೆಯನ್ನು ಕರೆಯಲಾಗುತ್ತಿದೆ, ಅಂತಿಮ ನಿರ್ಧಾರ ಕೈಗೊಳ್ಳಲು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ಅವರು ದೂರವಾಣಿ ಮೂಲಕ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು

ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೇ ತಮ್ಮ ಗುರಿ ಎಂದು ದಿಂಗಾಲೇಶ್ವರ ಸ್ವಾಮಿ ಬಹಿರಂಗವಾಗಿಯೇ ಹೇಳಿದ್ದು, ಧಾರವಾಡ ಸಂಸದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಕರೆ ನೀಡಿದ್ದಾರೆ. ನಾನು ಸ್ವಂತವಾಗಿ ಮಾತನಾಡುತ್ತಿಲ್ಲ, ಪ್ರಲ್ಹಾದ್ ಜೋಶಿಯವರ ಕೈಯಲ್ಲಿ ನೋವು ಅನುಭವಿಸಿದ ಜನರ ಧ್ವನಿಗಾಗಿ ನಾನು ಹೋರಾಟ ನಡೆಸುತ್ತಿದ್ದೆನೆ. ಅವರ ಆಡಳಿತ ವಿನಾಶಕಾರಿಯಾಗಿದೆ, ತಮ್ಮ ನಿಲುವು ಬದಲಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪ್ರಬಲ ಲಿಂಗಾಯತ ಪಂಚಮಸಾಲಿಗಳು, ಲಿಂಗಾಯತ ನೊಳಂಬ ಸಮುದಾಯ ಮತ್ತು ಲಿಂಗಾಯತ ಬನಿಜ ಸಮುದಾಯದಂತಹ ಇತರ ಲಿಂಗಾಯತ ಸಮುದಾಯದ ಮುಖಂಡರು ಸರಿಯಾದ ಪ್ರಾತಿನಿಧ್ಯ ಸಿಗದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮತ್ತು ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳದ ಹಿನ್ನೆಲೆಯಲ್ಲಿ ದಿಂಗಾಲೇಶ್ವರ ಸ್ವಾಮಿ ರೊಚ್ಚಿಗೆದ್ದಿದ್ದಾರೆ.

ವೀರಶೈವ ಮಹಾಸಭಾ, ಧಾರವಾಡ ಘಟಕವು ಸ್ವಾಮೀಜಿಗೆ ಬೆಂಬಲ ನೀಡುವುದಾಗಿ ಹೇಳಿದ್ದು, ರಾಜ್ಯ ಘಟಕ ನೀಡುವ ಕರೆಗೆ ಬೆಂಬಲ ನೀಡುವುದಾಗಿ ಅಖಿಲ ಭಾರತ ವೀರಶೈವ ಸಮಾಜದ ಕಾರ್ಯದರ್ಶಿ ರೇಣುಕಾ ಪ್ರಸನ್ನ ತಿಳಿಸಿದ್ದಾರೆ. ಜೋಶಿ ಅವರ ಕ್ಷೇತ್ರದಲ್ಲಿ 6.5 ರಿಂದ 7 ಲಕ್ಷ ಲಿಂಗಾಯತರು ಇರುವುದರಿಂದ ಇದು ಅವರಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಸ್ವಾಮೀಜಿಗಳು ಬಿಜೆಪಿ ವಿರುದ್ಧ ಮಾತನಾಡುತ್ತಿರುವುದು ಸುಮಾರು 30 ವರ್ಷಗಳ ನಂತರ ಇದೇ ಮೊದಲು. ಅವರ ಅಸಮಾಧಾನವು ಉತ್ತರ ಕರ್ನಾಟಕದ ಐದು ಸ್ಥಾನಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂದು ರಾಜಕೀಯ ವಿಶ್ಲೇಷಕ ಬಿ ಎಸ್ ಮೂರ್ತಿ ಹೇಳಿದ್ದಾರೆ.

2021 ರಲ್ಲಿ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ದಿಂಗಾಲೇಶ್ವರ ಸ್ವಾಮಿ ಅವರು "ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿಹೋಗುತ್ತದೆ" ಎಂದು ಹೇಳಿದ್ದರು. ಆಗ ಬಿಜೆಪಿಯವರು ನನ್ನ ಮಾತನ್ನು ಕೇಳಲಿಲ್ಲ ಮತ್ತು ಅದಕ್ಕಾಗಿ ಬೆಲೆ ತೆತ್ತರು. ಅವರು ಈಗ ನನ್ನ ಮಾತನ್ನು ಕೇಳುತ್ತಾರೆಯೇ ಎಂದು ನೋಡೋಣ. ನಾನು ರಾಜ್ಯವನ್ನು ಸುತ್ತುತ್ತೇನೆ ಮತ್ತು ಜನರ ನಾಡಿಮಿಡಿತ ನನಗೆ ತಿಳಿದಿದೆ ಎಂದು ಅವರು ಹೇಳಿದರು.

ಪ್ರಲ್ಹಾದ್ ಜೋಶಿ ಬೆಂಬಲಿಗರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಪ್ರಲ್ಹಾದ್ ಜೋಶಿ ಅವರ ಅನೇಕ ಬೆಂಬಲಿಗರು ಕರೆ ಮಾಡಿ ಮನವೊಲಿಸಲು ಯತ್ನಿಸಿದರು ಆದರೆ ನಾನು ಅವರ ಮಾತನ್ನು ಕೇಳಲು ನಿರಾಕರಿಸಿದಾಗ ಅವರು ನನಗೆ ಬೆದರಿಕೆ ಹಾಕಿದರು ಸ್ವಾಮೀಜಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT