ಹುಬ್ಬಳ್ಳಿ: ಬೆಳಗಾವಿ ಅಧಿವೇಶನವನ್ನು ಕಾಟಾಚಾರಕ್ಕೆ ನಡೆಸಿದಂತಿದೆ. ಉತ್ತರ ಕರ್ನಾಟಕ ಈ ಸರಕಾರದ ನಕ್ಷೆಯಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆ ಜನರಲ್ಲಿತ್ತು. ಆದರೆ, ಕಾಟಾಚಾರಕ್ಕೆ ಈ ಸರಕಾರ ಅಧಿವೇಶನ ನಡೆಸಿತು. ಯಾವ ಸಮಸ್ಯೆ ಕುರಿತು ಸಹ ಚರ್ಚಿಸಲು ಸರ್ಕಾರ ಅವಕಾಶ ಕೊಡಲಿಲ್ಲ. ಕಾಂಗ್ರೆಸ್ ಈ ಭಾಗದ ಜನರ ಕಣ್ಣಿಗೆ ಪದೇಪದೇ ಮಣ್ಣೆರಚುವ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಪತ್ಯೇಕ ಸಭೆ ನಡೆಸಿ, ಆಗಬೇಕಿರುವ ಯೋಜನೆಗಳು, ಸಮಸ್ಯೆಗಳ ಕುರಿತು ಚರ್ಚಿಸಿ ಸರ್ಕಾರಕ್ಕೆ ಆಗ್ರಹ ಪೂರಕವಾಗಿ ಗಮನ ಸೆಳೆಯಲು ಹೋರಾಟ ಮಾಡಬೇಕಿದೆ ಎಂದು ಹೇಳಿದರು.
ಅಧಿವೇಶನದಲ್ಲಿ ಆಡಳಿತ ಮತ್ತು ಅಭಿವೃದ್ಧಿ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಲಿಲ್ಲ. ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಯಾರೂ ಸಹ ಉತ್ತರ ನೀಡಿಲ್ಲ. ಇದು ನಾಚಿಕೆ ಸಂಗತಿ. ಈ ಸರ್ಕಾರದ ನಕ್ಷೆಯಲ್ಲಿ ಉತ್ತರ ಕರ್ನಾಟಕವೇ ಇಲ್ಲ ಎಂಬ ಅನುಮಾನ ಮೂಡಿದೆ. ಉತ್ತರ ಕರ್ನಾಟಕದ ಜನರ ಕಣ್ಣಿಗೆ ಮಣ್ಣುಹಾಕುವ ಕಾರ್ಯ ಪದೇ ಪದೆ ಈ ಸರ್ಕಾರದಲ್ಲಿ ನಡೆಯುತ್ತಿದೆ. ಹುಡುಗಾಟದ ರೀತಿಯಲ್ಲಿ ಅಧಿವೇಶನ ನಡೆದಿದೆ. ಹೀಗಾಗಿ ಉತ್ತರ ಕರ್ನಾಟಕದ ಜನ ಭ್ರಮನಿರಸನರಾಗಿದ್ದಾರೆ. ನಮ್ಮ ಪಕ್ಷದ ನಾಯಕರು ಸಮರ್ಥವಾಗಿ ಸದನ ನಿಭಾಯಿಸಿದ್ದಾರೆ. ಆದರೆ ಸರ್ಕಾರ ಸ್ಪಂದನೆ ಮಾಡಿಲ್ಲ. ಮುಖ್ಯಮಂತ್ರಿಗಳು ಅನುಭವಿಗಳಾಗಿದ್ದರೂ ವಿಧಾನಸಭೆ ಅಧಿವೇಶನವನ್ನು ಪರಿಣಾಮಕಾರಿಯಾಗಿ ನಡೆಸುವಲ್ಲಿ ವಿಫಲರಾಗಿದ್ದಾರೆಂದು ತಿಳಿಸಿದರು.
ಇದೇ ವೇಳೆ ರಾಜ್ಯದ ಹಣಕಾಸು ನಿರ್ವಹಣೆಯನ್ನು ಟೀಕಿಸಿದ ಅವರು, ಸರ್ಕಾರವು ಬಜೆಟ್ನಲ್ಲಿ ಹೆಚ್ಚುವರಿ 15,000 ಕೋಟಿ ತೆರಿಗೆ ವಿಧಿಸಿದೆ. ಭೂಮಿ ಮತ್ತು ವಾಹನಗಳ ಮೇಲಿನ ಹೆಚ್ಚಿನ ತೆರಿಗೆ ಸೇರಿದಂತೆ 8 ರಿಂದ 10 ಹೊಸ ತೆರಿಗೆಗಳನ್ನು ಜಾರಿಗೆ ತಂದಿದೆ. ಸುಮಾರು 40,000 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಿಸಲಾಗಿದ್ದು, ಪಶ್ಚಿಮ ಘಟ್ಟದ ನೀರಿಗೂ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ, ಮುಂದೊಂದು ದಿನ ಸರ್ಕಾರ ಉಸಿರಾಡುವ ಗಾಳಿಗೂ ತೆರಿಗೆ ವಿಧಿಸಬಹುದು ಎಂದು ವ್ಯಂಗ್ಯವಾಡಿದರು.
ಬಳಿಕ ನನ್ನ ಅಧಿಕಾರಾವಧಿಯಲ್ಲಿ ಆರಂಭಿಸಿದ ಯೋಜನೆಗಳನ್ನು ಸರ್ಕಾರ ಉದ್ಘಾಟನೆ ಮಾಡುತ್ತಿದೆ ಎಂದು ಹೇಳಿದ ಅವರು, ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿಚಾರವನ್ನು ಉದಾಹರಣೆಯಾಗಿ ನೀಡಿದರು. ಯೋಜನೆಗೆ ನನ್ನ ಸರ್ಕಾರ ರೂ.70-80 ಕೋಟಿ ಬಿಡುಗಡೆ ಮಾಡಿತ್ತು ಎಂದು ಹೇಳಿದರು.
ಉಳಿದ ಹಣವನ್ನು ಬಿಡುಗಡೆ ಮಾಡಿ 6ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಿ ಉತ್ತರ ಕರ್ನಾಟಕ ಭಾಗದ ಹೃದ್ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಂತರ ವಿಧಾನಸಭೆ ಅಧಿವೇಶನದಲ್ಲಿ ಪೊಲೀಸರ ವರ್ತನೆಯನ್ನು ಖಂಡಿಸಿದ ಅವರು, ‘ಪಂಚಮಸಾಲಿ ಸಮುದಾಯದವರ ಮೇಲೆ ಲಾಠಿ ಬೀಸುವುದರಿಂದ ಹಿಡಿದು, ಸದನದಲ್ಲಿ ನಡೆದ ಘಟನೆಗೆ ಪೊಲೀಸರು ತಮ್ಮ ವ್ಯಾಪ್ತಿಮೀರಿ ಸಿ.ಟಿ. ರವಿ ಅವರನ್ನು ಬಂಧನ ಮಾಡಿ, ಅವರಿಗೆ ಹಿಂಸೆ ನೀಡುವವರೆಗೂ ಅಧಿವೇಶನ ನಡೆಯಿತು.
ಸಿ.ಟಿ. ರವಿ ಜೊತೆ ಪೊಲೀಸರು ನಡೆದುಕೊಂಡ ರೀತಿ, ವರ್ತನೆ ಸಹ ತನಿಖೆಯಾಗಬೇಕು. ಹಿರಿಯ ಅಧಿಕಾರಿಗಳು ಕಾನ್ಸ್ಟೆಬಲ್ ರೀತಿ ನಡೆದುಕೊಂಡಿದ್ದಾರೆ. ಕರ್ನಾಟಕದ ಪೊಲೀಸರಿಗೆ ದಕ್ಷ ಪೊಲೀಸರು ಎಂಬ ಹೆಸರಿದೆ. ಅದಕ್ಕೆ ಮಸಿ ಬಳಿಯುವ ರೀತಿಯಲ್ಲಿ ಸರ್ಕಾರ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದರು.