ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಮಗನೇ' ಎಂದು ಸಂಬೋಧಿಸಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಟ್ಟ ಹುಳು ಇದ್ದಂತೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಸರಣಿ ಟ್ವೀಟ್ ಮಾಡಿದ್ದು, 'ಕುಲವಂ ನಾಲಗೆ ನುಡಿಯಿತು' ಎಂಬಂತೆ ಉತ್ತರ ಕನ್ನಡ ಸಂಸದರ ಸಂಸ್ಕಾರ ಅವರ ಮಾತುಗಳಲ್ಲೇ ತಿಳಿಯುತ್ತದೆ. ವಯಸ್ಸಿನಲ್ಲಿ ಹಾಗೂ ಅನುಭವದಲ್ಲಿ ಸಿದ್ದರಾಮಯ್ಯರ ಮುಂದೆ ಅನಂತ್ ಕುಮಾರ್ ಹೆಗಡೆ ಹುಲ್ಲು ಕಡ್ಡಿಗೂ ಸಮಾನರಲ್ಲ. ಶೋಷಿತ ಸಮುದಾಯದ ದ್ವನಿಯಾಗಿರುವ ಸಿದ್ದರಾಮಯ್ಯರನ್ನು ಮತಾಂಧತೆಯ ವಿಷ ತುಂಬಿಕೊಂಡಿರುವ ಹೆಗಡೆ ಏಕವಚನದಲ್ಲಿ 'ಮಗನೇ' ಎಂದಿರುವುದು ಅವರ ಕೊಳಕು ಮನಸ್ಥಿತಿಯ ಅನಾವರಣ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಾಬ್ರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಾಶ; ಸಿದ್ದರಾಮಯ್ಯಗೆ ಏಕವಚನದಲ್ಲಿ ಅನಂತಕುಮಾರ್ ಹೆಗಡೆ ನಿಂದನೆ
ಅನಂತ್ ಕುಮಾರ್ ಹೆಗಡೆ ಹಿಂದೂ ಸಮಾಜದ ಕಳಂಕವಿದ್ದಂತೆ. ವಯಸ್ಸಿನಲ್ಲಿ ಹಿರಿಯರಾದವರಿಗೆ ಮರ್ಯಾದೆ ಕೊಡುವುದು ನಮ್ಮ ಹಿಂದೂ ಧರ್ಮ ಕಲಿಸಿರುವ ಸಂಸ್ಕಾರ.ಅನಂತ್ ಕುಮಾರ್ ಹೆಗಡೆಯವರು ಯಾವ ಧರ್ಮದಿಂದ ಈ ರೀತಿ ಕೊಳಕು ಭಾಷೆ ಮಾತನಾಡುವ ಸಂಸ್ಕಾರ ಕಲಿತಿದ್ದಾರೆ.? ಬಾಯಿ ಬಿಟ್ಟರೆ ಹೊಡಿ, ಬಡಿ, ಕೊಚ್ಚು, ಕೊಲ್ಲು, ದ್ವೇಷ, ಸೇಡು ಎನ್ನುವ ಅನಂತ್ ಕುಮಾರ್ ಹೆಗಡೆಯಂತಹವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಟ್ಟ ಹುಳು ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಂತ್ ಕುಮಾರ್ ಹೆಗಡೆಯವರೇ, ಸಾರ್ವಜನಿಕವಾಗಿ ಹೇಗೆ ಮಾತಾಡಬೇಕು ಹಾಗೂ ಹೇಗೆ ವರ್ತಿಸಬೇಕು ಎಂಬ ಕನಿಷ್ಟ ಜ್ಞಾನವನ್ನು ದಯವಿಟ್ಟು ಬೆಳೆಸಿಕೊಳ್ಳಿ. ನಿಮ್ಮಂತೆ ಹಿಂದುತ್ವದ ಅಮಲು ತುಂಬಿಕೊಂಡಿರುವ ಕೆಲವರಿಗೆ ಮಾತ್ರ ನಿಮ್ಮ ಅಸಹ್ಯದ ಮಾತುಗಳು ರುಚಿಸಬಹುದೇನೋ.? ಆದರೆ ಪ್ರಜ್ಞಾವಂತ ಹಿಂದೂಗಳು ಯಾವತ್ತಿಗೂ ನಿಮ್ಮ ಮಾತು ಒಪ್ಪಲಾರರು. ಬಸವಣ್ಣ, ಕುವೆಂಪು, ನಾರಾಯಣ ಗುರು ಹಾಗೂ ಕನಕದಾಸರಂತಹ ಅನೇಕ ಮಹಾನ್ ವ್ಯಕ್ತಿಗಳು ಬದುಕಿ ಬಾಳಿದ ನೆಲವಿದು. ನಿಮ್ಮ ಕೊಳಕು ಮಾತುಗಳಿಂದ ಈ ನೆಲದ ಪಾವಿತ್ರ್ಯವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.