ಡಿವಿ ಸದಾನಂದ ಗೌಡ
ಡಿವಿ ಸದಾನಂದ ಗೌಡ 
ರಾಜಕೀಯ

BJP ಶುದ್ಧೀಕರಣ ನನ್ನ ಗುರಿ; ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ: ಡಿವಿ ಸದಾನಂದ ಗೌಡ ಸ್ಪಷ್ಟನೆ

Manjula VN

ಬೆಂಗಳೂರು: ಕಾಂಗ್ರೆಸ್'ನಿಂದ ಆಹ್ವಾನ ಬಂದಿದ್ದು ನಿಜ, ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಆಹ್ವಾನ ಬಂದಿತ್ತು. ಆದರೆ ನಾನು, ಕಾಂಗ್ರೆಸ್‌ ಸೇರಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶುದ್ಧೀಕರಣ ಮಾಡುವುದಾಗಿ ಶಪಥ ಮಾಡಿದರು, ಅಲ್ಲದೆ, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದು ಹೇಳಿದರು,

ರಾಜ್ಯದಲ್ಲಿ ಪ್ರಧಾನಿ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು. ಅವರು ಪರಿವರ್ತನೆಯ ಹರಿಕಾರ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಜನರ ಪರವಾದ ಹಾಗೂ ಜನರು ಒಪ್ಪಿಕೊಳ್ಳುವ ಪಕ್ಷವಾಗಬೇಕು, ಮೋದಿ, ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಪರಿವಾರವಾದ, ಭ್ರಷ್ಟಾಚಾರವಾದ, ಜಾತಿವಾದ ಮುಕ್ತವಾದ ಪಕ್ಷ ಬಿಜೆಪಿ ಆಗಬೇಕು. ಶುದ್ದೀಕರಣದ ಅಭಿಯಾನಕ್ಕೆ ವೇಗ ಕೊಡಲು ನನ್ನಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ನಾನು ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತ. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ಪಕ್ಷದಲ್ಲಿ ಒಂದಷ್ಟು ಜನರು ಶುದ್ಧೀಕರಣ ಬಯಸುತ್ತಿದ್ದಾರೆ. ಅವರನ್ನು ಕ್ರೋಢೀಕರಿಸಲಾಗುತ್ತದೆ. ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ,‌ ಮಕ್ಕಳು, ಜಾತಿ, ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು. ಆದರೆ, ಅದು ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.

ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಸರ್ವಾಧಿಕಾರ ರಾಜಕೀಯದಲ್ಲಿ ನಡೆಯುವುದಿಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನಾನು ವಿರಮಿಸುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಶುದ್ದೀಕರಣ ಕಾರ್ಯಕ್ಕೆ ವೇಗ ಕೊಡಲಾಗುವುದು. ಯಾವುದೇ ಬೆಲೆ ತೆತ್ತಾದರೂ ನಾನು ಪಕ್ಷ ಶುದ್ದೀಕರಣ ಕೆಲಸ ಮಾಡುತ್ತೇನೆ. ಆಡಳಿತ ಮಾಡುವವರು ಸತ್ಯವಂತರಾಗಬೇಕು. ಸುಳ್ಳು ಹೇಳಬಾರದು. ಬೆಂಗಳೂರು ಉತ್ತರದಲ್ಲಿ ಟಿಕೆಟ್‌ಗಾಗಿ ಒಬ್ಬನ ಹೆಸರು ಮಾತ್ರ ಇತ್ತು. 142 ಜನರು ನನ್ನ ಹೆಸರನ್ನು ಆಯ್ಕೆ ಮಾಡಿದ್ದರು. ಆದರೆ, ಇದನ್ನು ಕೇಂದ್ರದಲ್ಲಿ ಮಂಡನೆ ಮಾಡಲು ಸಾಧ್ಯವಾಗದವರು ನಮ್ಮ ನಾಯಕರಲ್ಲ. ಕೆಎಸ್ ಈಶ್ವರಪ್ಪ ಈಗಾಗಲೇ ಹಲವಾರು ಸಂಗತಿಗಳನ್ನು ಹೇಳಿದ್ದಾರೆಂದು ತಿಳಿಸಿದರು.

ಶೋಭಾ ಕರಂದ್ಲಾಜೆ ಅವರಿಗೆ ಬೆಂಬಲ ಕೊಡುತ್ತೀರಾ?' ಎಂಬ ಪ್ರಶ್ನೆಗೆ ಉತ್ತರಿಸಿ, ಶೋಭಾ ಕರಂದ್ಲಾಜೆ ಪರವಾಗಿ ನಾನು ಈಗಾಗಲೇ ಪ್ರಚಾರ ಮಾಡಿದ್ದೇನೆ. ಅವರಿಗೆ ಬೆಂಬಲ ಕೊಡದೆ ಇರುವ ಪ್ರಶ್ನೆ ಇಲ್ಲಿ ಉದ್ಭವವೇ ಆಗಲ್ಲ ಎಂದರು.

ಇದೇ ವೇಳೆ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ನನ್ನನ್ನು ಚೆಂದ ಆರತಿ ಎತ್ತಿ, 'ಬನ್ನಿ, ಸ್ಪರ್ಧೆ ಮಾಡಿ' ಎಂದು ಕರೆದರು. ಆದರೆ ಈಗ ಮಂಗಳಾರತಿ ಮಾಡಿ ಕಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕಲಿಗ ಸಂಘದ ಭೇಟಿ ವಿಚಾರವಾಗಿ ಮಾತನಾಡಿ, ಒಕ್ಕಲಿಗ ಸಂಘದವರು ನಮ್ಮ ಸಮಾಜಕ್ಕೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ಕಡಿಮೆ ಆಗ್ತಿದೆ ಎಂದಿದ್ದಾರೆ. ದೇವೇಗೌಡರ ಮೆಟೀರಿಯಲ್‌ಗೆ ಬಿಜೆಪಿ ತನ್ನ ಸ್ಟಿಕ್ಕರ್ ಅಂಟಿಸುತ್ತಿದೆ ಎಂದು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.

SCROLL FOR NEXT