ಬಿ.ಎಸ್ ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ 
ರಾಜಕೀಯ

ಮಗನಿಗೆ ಟಿಕೆಟ್ ತಪ್ಪಲು ಬಿ.ಎಸ್ ಯಡಿಯೂರಪ್ಪ ಕಾರಣ: ಬಿಜೆಪಿ ಶಾಸಕ ಚಂದ್ರಪ್ಪ ಆರೋಪ

Shilpa D

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಎಂಸಿ ರಘುಚಂದನ್‌ಗೆ ಟಿಕೆಟ್ ತಪ್ಪಲು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಕಾರಣ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ನೇರ ಆರೋಪ ಮಾಡಿದ್ದಾರೆ.

ಚಿತ್ರದುರ್ಗ ಲೋಕಸಭೆ ಬಿಜೆಪಿ ಟಿಕೆಟ್ ಬಾಗಲಕೋಟೆ ಜಿಲ್ಲೆಯ ಯಡಿಯೂರಪ್ಪ ನಿಷ್ಠಾವಂತ ಗೋವಿಂದ್ ಕಾರಜೋಳ ಅವರಿಗೆ ನೀಡಲಾಗಿದೆ. ಗುರುವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚಂದ್ರಪ್ಪ, ಚಿತ್ರದುರ್ಗ ಕ್ಷೇತ್ರಕ್ಕೆ ಪುತ್ರನೇ ಪ್ರಬಲ ಆಕಾಂಕ್ಷಿಯಾಗಿದ್ದರು, ಅವರು ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ನಿನ್ನೆ (ಬುಧವಾರ) ಮಧ್ಯಾಹ್ನದವರೆಗೂ ನನ್ನ ಮಗನಿಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆಯಿತ್ತು, ಆದರೆ ಈ ಹಂತದಲ್ಲಿ ಯಡಿಯೂರಪ್ಪ ಮಧ್ಯಪ್ರವೇಶಿಸಿ ಕಾರಜೋಳ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಗೋವಿಂದ ಕಾರಜೋಳ ಜೊತೆ ಅದೇನು ಹೊಂದಾಣಿಕೆ ಇದೆಯೋ ಗೊತ್ತಿಲ್ಲ. ಹೀಗಾಗಿ ಅವರಿಗೆ ಟಿಕೆಟ್ ನೀಡದಿದ್ರೆ ನಾನು ರಾಜ್ಯಾದ್ಯಂತ ಬಿಜೆಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ದಂಬಾಲು ಬಿದ್ದು, ಕಾರಜೋಳ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ ನಾನು ಯಡಿಯೂರಪ್ಪ ಕುಟುಂಬಕ್ಕೆ ತೋರಿದ ನಿಷ್ಠೆ ಸಾರ್ಥಕವೆನಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಚಂದ್ರಪ್ಪ, 2019ರಲ್ಲೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೆ. ನಂತರ, ಯಡಿಯೂರಪ್ಪ ಅವರು 2024 ರಲ್ಲಿ ರಘುಚಂದನ್ ಅವರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಕೂಡ ರಘುಚಂದನ್ ಅವರಿಗೆ 2024 ರಲ್ಲಿ ಟಿಕೆಟ್ ನೀಡುವ ಭರವಸೆ ನೀಡಿದರು.

ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ರಘು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆಗೆ ಬಂದವರೂ ಹೇಳಿದ್ದಾರೆ. ಸಿಇಸಿ ಸಭೆಯಲ್ಲಿ ನನ್ನ ಮಗನ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ, ನನ್ನ ಮಗನಿಗೆ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪ ಅವರೇ ಕಾರಣ ಎಂದು ಆರೋಪಿಸಿದರು.

2013ರಲ್ಲಿ ಯಡಿಯೂರಪ್ಪ ಅವರು ಕೆಜೆಪಿ ಪಕ್ಷವನ್ನು ಸ್ಥಾಪಿಸಿದಾಗ ಅವರನ್ನು ಬೆಂಬಲಿಸಿದ ಮೊದಲ ವ್ಯಕ್ತಿ ನಾನು ಮತ್ತು ನನ್ನ ಅವಧಿ ಪೂರ್ಣಗೊಳ್ಳುವ ಆರು ತಿಂಗಳ ಮೊದಲು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. 2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಾಗ ಯಡಿಯೂರಪ್ಪ ಸಿಎಂ ಆಗಲು ಬೆಂಬಲ ನೀಡಿದ್ದು ಭೋವಿ ಸಮುದಾಯ.

ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಡಿ ಶೇಖರ್ ಅವರು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಸಿಎಂ ಮಾಡಿದ್ದು, ಯಡಿಯೂರಪ್ಪ ಅವರು ಮೂವರನ್ನೂ ವಂಚಿಸಿ ಸಂಪುಟದಿಂದ ಹೊರಹಾಕಿದ್ದಾರೆ. ಆದರೆ ನಾನು ಇನ್ನೂ ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಲೇ ಇದ್ದೇನೆ ಎಂದು ಅವರು ಹೇಳಿದರು.

ತನಗೆ, ಮಗನಿಗೆ ಹಾಗೂ ಭೋವಿ ಸಮುದಾಯಕ್ಕೆ ಅನ್ಯಾಯವಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನವನ್ನೂ ನೀಡಿಲ್ಲ. ನಾನು ಪ್ರಧಾನಿ ಮೋದಿಯನ್ನು ಬಲವಾಗಿ ನಂಬುತ್ತೇನೆ, ಆದರೆ ನನ್ನ ಮಗನಿಗೆ ಮತ್ತು ನನಗೆ ಆಗಿರುವ ಅನ್ಯಾಯದ ವಿರುದ್ಧ ನಾನು ಹೋರಾಡುತ್ತೇನೆ ಎಂದು ಅವರು ಹೇಳಿದರು. ಶುಕ್ರವಾರ ಹೊಳಲ್ಕೆರೆಯಲ್ಲಿ ಬೆಂಬಲಿಗರ ಸಭೆ ನಡೆಸುವುದಾಗಿಯೂ ತಿಳಿಸಿದರು.

SCROLL FOR NEXT