ಸಿ.ಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ 
ರಾಜಕೀಯ

ಹ್ಯಾಟ್ರಿಕ್ ಸೋಲು ಯಾರಿಗೆ? ಇಬ್ಬರು ಕಲಾವಿದರಲ್ಲಿ ವಿಜಯಮಾಲೆ ಯಾರ ಕೊರಳಿಗೆ? ಯೋಗೇಶ್ವರ್ ಸಾಂಪ್ರದಾಯಿಕ ಮತಬ್ಯಾಂಕ್‌ಗೆ HDK ಹೊಡೆತ!

ಚನ್ನಪಟ್ಟಣದ ಮತದಾರರ ರಾಜಕೀಯ ನಾಡಿಮಿಡಿತ ಅಧ್ಯಯನ ಮಾಡಲು ನ್ಯೂ ಸಂಡೆ ಎಕ್ಸ್‌ಪ್ರೆಸ್ ಕ್ಷೇತ್ರಕ್ಕೆ ಭೇಟಿ ನೀಡಿತ್ತು. ಈ ವೇಳೆ ಹಲವು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚನ್ನಪಟ್ಟಣ: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ನಡುವೆ ನೆಲೆಸಿರುವ ಚನ್ನಪಟ್ಟಣ, ಬೊಂಬೆ ನಾಡು, ರಾಜಕೀಯ ಕದನಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ನವೆಂಬರ್ 13 ರಂದು, ಇಬ್ಬರು ನಟ ಮತ್ತು ರಾಜಕಾರಣಿಗಳಾದ ನಿಖಿಲ್ ಕುಮಾರಸ್ವಾಮಿ ಮತ್ತು ಸಿಪಿ ಯೋಗೇಶ್ವರ್ ಒಕ್ಕಲಿಗ ಪ್ರಾಬಲ್ಯವಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸೆಣೆಸಾಟ ನಡೆಸಲಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳಲು ಡಿಕೆಶಿ ಸಹೋದರರು ಮುಂದಾಗಿದ್ದರೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ತಮ್ಮ ಪುತ್ರ ನಿಖಿಲ್‌ಗೆ ಮೂರನೇ ಬಾರಿಯಾದರು ಅದೃಷ್ಟ ಒಲಿಯುವಂತೆ ಮಾಡಲು ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಹಗಲು ರಾತ್ರಿ ಬೆವರು ಹರಿಸುತ್ತಿದ್ದಾರೆ.

ಚನ್ನಪಟ್ಟಣದ ಮತದಾರರ ರಾಜಕೀಯ ನಾಡಿಮಿಡಿತ ಅಧ್ಯಯನ ಮಾಡಲು ನ್ಯೂ ಸಂಡೆ ಎಕ್ಸ್‌ಪ್ರೆಸ್ ಕ್ಷೇತ್ರಕ್ಕೆ ಭೇಟಿ ನೀಡಿತ್ತು. ಈ ವೇಳೆ ಹಲವು ಮಂದಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯೋಗೇಶ್ವರ ಮತ್ತು ನಿಖಿಲ್ ಇಬ್ಬರೂ ಬಲಿಷ್ಠರು... ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕುತ್ತೇನೆ ಎಂದು ಚನ್ನಪಟ್ಟಣ ಪಟ್ಟಣದ ತರಕಾರಿ ಮಾರಾಟಗಾರ್ತಿ 72 ವರ್ಷದ ದೇವರಮ್ಮ ಹೇಳಿದರು. ಹೂವಿನ ವ್ಯಾಪಾರಿ ಮನು ಕೂಡ ಇದೇ ರೀತಿಯ ಭಾವನೆ ವ್ಯಕ್ತಪಡಿಸಿದ್ದಾರೆ.

ವಾರದ ಹಿಂದಿನವರೆಗೂ ಯೋಗೇಶ್ವರ ಪರ ಏಕಪಕ್ಷೀಯವಾಗಿ ಸ್ಪರ್ಧೆ ಕಾಣುತ್ತಿತ್ತು. ಆದರೆ ದೇವೇಗೌಡರ ರಂಗಪ್ರವೇಶದ ನಂತರ ಇಡೀ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿ ಹೋಗಿದೆ. ಕುಮಾರಸ್ವಾಮಿ ತಮ್ಮ 92 ವರ್ಷದ ತಂದೆ ಹಾಗೂ ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡರನ್ನು ಕರೆತಂದು ತಮ್ಮ ಮಗನ ಪರ ಪ್ರಚಾರ ಮಾಡಿಸುತ್ತಿದ್ದಾರೆ, ಹೀಗಾಗಿ ಒಕ್ಕಲಿಗ ಮತಗಳನ್ನು ಧೃವೀಕರಿಸುವಲ್ಲಿ ಕುಮಾರಸ್ವಾಮಿ ತಂತ್ರ ಫಲ ನೀಡುತ್ತಿದೆ ಎನ್ನಲಾಗುತ್ತಿದೆ. ಕುಮಾರಸ್ವಾಮಿ ಅಹಿಂದ ಮತಬ್ಯಾಂಕ್ ಮತ್ತು ಯೋಗೇಶ್ವರ್ ಅವರ ಸಾಂಪ್ರದಾಯಿಕ ಮತಬ್ಯಾಂಕ್‌ಗೂ ಹೊಡೆತ ನೀಡಿದ್ದಾರೆ. ಯೋಗೇಶ್ವರ ಅವರು ಹಲವು ಬಾರಿ ಪಕ್ಷ ಬದಲಾಯಿಸಿದರೂ ಹಿಂದುಳಿದ ತಿಗಳ, ಅರಸ್ ಮತ್ತು ಬೆಸ್ತ (ಮೀನು) ಸಮುದಾಯಗಳು ಸದಾ ಅವರನ್ನು ಬೆಂಬಲಿಸುತ್ತಾ ಬಂದಿವೆ. ಆದರೆ ಈ ಬಾರಿ ಅವರಲ್ಲಿ ಸ್ವಲ್ಪ ಭಾಗ ನಿಖಿಲ್ ಕಡೆಗೆ ಒಲವು ತೋರುತ್ತಿದೆ ಎಂದು ಜೆಡಿಎಸ್ ಒಳಗಿನವರು ವಿಶ್ಲೇಷಿಸಿದ್ದಾರೆ.

ನಾವು ಸಾಂಪ್ರದಾಯಿಕವಾಗಿ ಜೆಡಿಎಸ್ ಬೆಂಬಲಿಗರು ಮತ್ತು ನಿಖಿಲ್ ಅವರನ್ನು ಬೆಂಬಲಿಸುತ್ತೇವೆ ಎಂದು ಎವಿ ಅಗ್ರಹಾರದ ಬಸವರಾಜ ಅರಸ್ ಹೇಳಿದರು. ಆದರೆ ಬಹುಪಾಲು ಅರಸ್ ಸಮುದಾಯವು ಯೋಗೇಶ್ವರರನ್ನು ಬೆಂಬಲಿಸುತ್ತದೆ, ಏಕೆಂದರೆ ಅವರು ದೀರ್ಘಕಾಲದವರೆಗೆ ಸಮುದಾಯದ ಬೆಂಬಲಕ್ಕೆ ಯೋಗೇಶ್ವರ್ ನಿಂತಿದ್ದಾರೆ, ಮತ್ತು ನಮಗೆ ಸಹಾಯ ಮಾಡಿದ್ದಾರೆ ಎಂದು ಹೊಂಗನೂರಿನ ಅಂಗಡಿಯ ಶ್ರೀನಿವಾಸ್ ರಾಜ್ ಅರಸ್ ಪ್ರತಿಪಾದಿಸುತ್ತಾರೆ, ಅಲ್ಲಿ ಅತ್ಯಾಧುನಿಕ ಉರ್ಸ್ ಸಮುದಾಯ ಭವನವಿದ್ದು, ಈಗ ಅರೆಸೇನಾ ಪಡೆಗಳಿಗೆ ಆಶ್ರಯ ನೀಡುತ್ತಿದೆ.

ನಿಖಿಲ್‌ಗೆ ಮತ ಹಾಕಬೇಕೋ ಅಥವಾ ಯೋಗೇಶ್ವರ್‌ಗೆ ಮತ ಹಾಕಬೇಕೋ ಎಂಬುದನ್ನು ಕೊನೆ ಗಳಿಗೆಯಲ್ಲಿ ಸಮುದಾಯ ನಿರ್ಧರಿಸಲಿದೆ ಎಂದು ಕುರುಬ ಸಮುದಾಯದ ದೊಡ್ಡಯ್ಯ ಸುಳಿವು ನೀಡಿದ್ದಾರೆ. ಗೃಹ ಲಕ್ಷ್ಮಿ ಖಾತ್ರಿ ಯೋಜನೆಯಡಿ ಎರಡು ಕಂತು ಹಣ ಇನ್ನೂ ಬಂದಿಲ್ಲ ಎಂದು ಜೆಡಿಎಸ್ ನ ಸಾಂಪ್ರದಾಯಿಕ ಮತದಾರರಾದ ಗುಣಮ್ಮ ಹಾಗೂ ಕಾಂಗ್ರೆಸ್ ಬೆಂಬಲಿತ ಜಯಮ್ಮ ಖಚಿತಪಡಿಸಿದ್ದಾರೆ. ಒಂದು ಕುಟುಂಬದಲ್ಲಿ ನಾಲ್ಕು ಮತದಾರರಿದ್ದರೆ ಇಬ್ಬರು ನಿಖಿಲ್ ಮತ್ತು ಇಬ್ಬರು ಯೋಗೇಶ್ವರ ಅವರನ್ನು ಬೆಂಬಲಿಸುತ್ತಾರೆ ಎಂದು ಗುಣಮ್ಮ ಜಯಮ್ಮ ತಿಳಿಸಿದ್ದಾರೆ.

ಎ.ವಿ.ಪಾಳ್ಯದ ತಿಗಳ ರೈತ ಮಹೇಶ್ ಅವರಿಗೆ ಯೋಗೇಶ್ವರ್ ಅಚ್ಚುಮೆಚ್ಚು. ರಾಜಕಾರಣಿಗಳ ಪ್ರಮುಖ ವಿಷಯವಾಗಿದ್ದ ಕೆರೆಗಳನ್ನು ತುಂಬಿಸುವ ಯೋಗೇಶ್ವರ ಅವರ ಕೆಲಸದ ಬಗ್ಗೆ ಬೆಸ್ತ ಸಮುದಾಯದ ವೆಂಕಟಯ್ಯ ಕೊಂಡಾಡಿದ್ದಾರೆ. ಇಗ್ಗಲೂರು ಬ್ಯಾರೇಜ್‌ ನಿರ್ಮಾಣದ ಕ್ರೆಡಿಟ್ ದೇವೇಗೌಡರು ತೆಗೆದುಕೊಳ್ಳಲು ಬಯಸುತ್ತಿದ್ದಾರೆ. ಆದರೆ ಇದು ಯೋಗೇಶ್ವರ ಅವರ ಯೋಜನೆ ಎಂದು ಹೇಳುವ ಮಧ್ಯವಯಸ್ಕ ರೈತರಲ್ಲಿ ಪರಿಣಾಮ ಬೀರಲಿಲ್ಲ. ಅದೇ ರೀತಿ, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಭಾವವು ಅರಸ್ ಸಮುದಾಯದ ಮೇಲೆ ಹಾಗೂ ಎನ್‌ಡಿಎ ಅಭ್ಯರ್ಥಿ ಮೇಲೆ ನಿರೀಕ್ಷಿತ ಮಟ್ಟದಲ್ಲಿಲ್ಲ ಪರಿಣಾಮ ಬೀರುತ್ತಿಲ್ಲ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಹೊಂಗನೂರಿನಲ್ಲಿ, ದಲಿತರ ಒಂದು ವರ್ಗವು ಯೋಗೇಶ್ವರ ಅವರನ್ನು ನಿರಾಶೆಗೊಳಿಸಿದೆ ಎಂದು ಅವರು ಭಾವಿಸುತ್ತಾರೆ, ಏಕೆಂದರೆ ಅವರು ತಮ್ಮನ್ನು ಸಾಂಪ್ರದಾಯಿಕ ಕಾಂಗ್ರೆಸ್ ಮತದಾರರೆಂದು ಲಘುವಾಗಿ ಪರಿಗಣಿಸಿದ್ದಾರೆ, ತಮ್ಮ ಕುಂದುಕೊರತೆಗಳಿಗೆ ಗಮನ ಕೊಡಲಿಲ್ಲ, ವಿಶೇಷವಾಗಿ ದೇವಸ್ಥಾನದ ಜಮೀನಿನ ವಿವಾದದ ಸಂದರ್ಭದಲ್ಲಿ ಯೋಗೇಶ್ವರ್ ತಮ್ಮ ಪರ ನಿಲ್ಲಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮುದಾಯದ ಪ್ರಬಲ ನಾಯಕ ಯೋಗೇಶ್ವರ್ ಪರ ಪ್ರಚಾರ ಮಾಡಿದರೂ ದಲಿತ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ. 1,000 ಮುಸ್ಲಿಂ ಯುವಕರು ನಿಖಿಲ್ ಪರ ಪ್ರಚಾರ ಮಾಡುತ್ತಿದ್ದರು, ಆದರೆ ಸಮುದಾಯದ ಮುಖಂಡರು ತಮ್ಮ ಸಂದೇಶವನ್ನು ನೀಡಿದ ನಂತರ ಅವರು ಕಾಂಗ್ರೆಸ್‌ಗೆ ಮರಳುತ್ತಾರೆ ಎಂದು ಭಾವಿಸುತ್ತಾರೆ. ಯೋಗೇಶ್ವರ ಕಾಂಗ್ರೆಸ್ ಸೇರಲು ಕಾರಣಕರ್ತರಾದ ವಸತಿ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಕೂಡ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರದ ಉಂಟಾಗಿರುವ ಗೊಂದಲ ನಿವಾರಿಸಲು ಆಗಮಿಸಬಹುದು ಎಂದು ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿ ಇಬ್ಬರೂ ಒಕ್ಕಲಿಗ ನಾಯಕರಾಗಿ ಅಧಿಕಾರ ನಡೆಸುವ ಪಣತೊಟ್ಟಿದ್ದಾರೆ. ಆದರೆ ಒಕ್ಕಲಿಗರ ಪರಮೋಚ್ಚ ನಾಯಕರಾಗಿರುವ ದೇವೇಗೌಡರು ಪ್ರಚಾರ ನಡೆಸುತ್ತಿರುವುದು ನಿಖಿಲ್‌ಗೆ ನೆರವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೋಡಿಪುರದ ಪ್ರದೀಪ್ ಮತ್ತು ವಿಟಲೇನಹಳ್ಳಿಯ ನಂಜೇಗೌಡ. 150 ಕಾಂಗ್ರೆಸ್ ಪದಾಧಿಕಾರಿಗಳ ತಂಡ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದು, ನೇರವಾಗಿ ಶಿವಕುಮಾರ್ ಅವರಿಗೆ ವರದಿ ನೀಡುತ್ತಿದೆ. ಪ್ರಚಾರಾಂದೋಲನದಲ್ಲಿ ನಿಖಿಲ್ಅ ಳುವುದರ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್ ಇದನ್ನು ರಾಜಕೀಯ ಗಿಮಿಕ್ ಎಂದು ಕರೆದಿದೆ. ಈಗ, ಎಲ್ಲರ ಕಣ್ಣುಗಳು ನವೆಂಬರ್ 23 ರಂದು ಎಣಿಕೆಯ ದಿನದ ಮೇಲೆ ಕೇಂದ್ರೀಕೃತವಾಗಿದೆ. ಬೊಂಬೆ ನಾಡಿನ ಮತದಾರ ಅಂತಿಮವಾಗಿ ಯಾರ ಕೊರಳಿಗೆ ವಿಜಯ ಮಾಲೆ ಹಾಕುತ್ತಾನೆ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT