ಮೈಸೂರು: ಚುನಾವಣೆಗಳು ಬಂದಾಗ ಮಾತ್ರ ನನ್ನನ್ನು ಬಳಸಿಕೊಳ್ಳುತ್ತಾರೆಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರು ಬುಧವಾರ ಹೇಳಿದ್ದು, ಮತ್ತೆ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಹೋರಾಡಿದಂತೆಯೇ ವಿಧಾನಸಭಾ ಚುನಾವಣೆಗೂ ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಬರಲಿವೆ. ಎರಡೂ ಪಕ್ಷಗಳ ನಾಯಕರು ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಪಕ್ಷ ಮತ್ತು ಕಾರ್ಯಕರ್ತರನ್ನು ಬಲಪಡಿಸಲು ಸುತ್ತಾಡುತ್ತಿದ್ದಾರೆ ಎಂದು ಹೇಳಿದರು.
ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರಿಗೆ ಪಕ್ಷವನ್ನು ಸಂಘಟಿಸುವುದು ಎಷ್ಟು ಕಷ್ಟ ಎಂದು ತಿಳಿದಿದೆ. "ನಾನು ಕೂಡ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದೇನೆ. ಆದರೆ, ಚುನಾವಣೆಯ ಸಮಯದಲ್ಲಿ ಮಾತ್ರ ನನ್ನನ್ನು ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮತ ಕಳ್ಳತನದ ಆರೋಪದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಪ್ರತಿಭಟನೆ ಕುರಿತು ಮಾತನಾಡಿ, ಚುನಾವಣೆ ಆಯೋಗದವರು ನಾವು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಮತಗಳನ್ನು ಕದ್ದಿದ್ದಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಪ್ರತಿಭಟನಾ ಧರಣಿ ಮಾಡಲು ಮುಂದಾಗಿದ್ದಾರೆ. ಅದರ ಬಗ್ಗೆ ವೈಯುಕ್ತಿಕವಾಗಿ ನಾನು ಪರಿಶೀಲನೆ ಮಾಡಿಲ್ಲ. ಸಾಮಾನ್ಯವಾಗಿ ನನ್ನ ಕ್ಷೇತ್ರದಲ್ಲೂ ನನಗೆ ಎಲ್ಲೆಲ್ಲಿ ಎಷ್ಟು ಮತಗಳು ಸಿಕ್ಕಿವೆ ಎಂದು ನೋಡಲ್ಲ. ಚುನಾವಣೆ ವ್ಯವಸ್ಥೆಯ ಮೇಲೆ ಎಲ್ಲರೂ ನಂಬಿಕೆ ಇಟ್ಟಿದ್ದಾರೆ. ಸತ್ಯಾಸತ್ಯತೆ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ಕೆಆರ್ಎಸ್ ಅಣೆಕಟ್ಟು ವಿವಾದದ ಕುರಿತು, ಹಿರಿಯ ಜೆಡಿಎಸ್ ನಾಯಕರು ಮೈಸೂರು ರಾಜಮನೆತನ ಕೃಷ್ಣರಾಜ ಸಾಗರ ಜಲಾಶಯವನ್ನು ನಿರ್ಮಿಸಿದೆ ಎಂದು ಜಗತ್ತಿಗೆ ತಿಳಿದಿದೆ ಎಂದು ಹೇಳಿದರು.
ಕೆಆರ್'ಎಸ್ ಅಣೆಕಟ್ಟು ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಮಹದೇವಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ಮಹದೇವಪ್ಪ ಒಂದು ಶಿಲಾ ಶಾಸನ ಇದೆ ಅಂತ ಹೇಳಿದ್ದಾರೆ. ಅಡಿಗಲ್ಲು ಹಾಕಿದ್ದಾರೆ ಅಂತ ಹೇಳಿರೋದನ್ನು ನಾನು ಕೇಳಿಲ್ಲ. ಕೆಆರ್ಎಸ್ ಅಣೆಕಟ್ಟೆಯನ್ನು ಮೈಸೂರು ಮಹಾರಾಜರು ಕಟ್ಟಿಸಿರೋದು ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದರು.
ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪತ್ರಿಕಾ ರಂಗ, ಶಾಸಕಾಂಗ, ನ್ಯಾಯಾಂಗ ಸೇರಿದಂತೆ ಯಾವುದೇ ಹಂತದಲ್ಲಿ ತಪ್ಪಾದಾಗ ಸರಿಪಡಿಸುವಂತಹದ್ದು ನ್ಯಾಯಾಂಗ. ನ್ಯಾಯಾಂಗದ ತೀರ್ಪು ಒಂದು ದೇವರ ತೀರ್ಪು ಎಂದು ಜನ ಈಗಲೂ ನಂಬಿದ್ದಾರೆ. ಮೇಲ್ಮಟ್ಟದ ನ್ಯಾಯಾಲಯಕ್ಕೆ ಹೋಗಲು ಅವಕಾಶ ಕೊಟ್ಟಿದ್ದಾರೆ. ನ್ಯಾಯಾಲಯದ ತೀರ್ಪನ್ನು ಪರಾಮರ್ಶೆ ಮಾಡುವಷ್ಟು ಶಕ್ತಿ ನನಗಿಲ್ಲ ಎಂದು ತಿಳಿಸಿದರು.