ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ನೀಡಿರುವ ಲೋಕಾಯುಕ್ತ ಪೊಲೀಸರನ್ನು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಸೋಮವಾರ ಲೇವಡಿ ಮಾಡಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಾಯುಕ್ತ ವರದಿಯನ್ನು ತಮಗಿಷ್ಟ ಬಂದ ರೀತಿ ಬರೆಸಿಕೊಂಡಿದ್ದಾರೆ. ಅವರನ್ನು ದೇವರೇ ಕಾಪಾಡಬೇಕು ಎಂದು ಟೀಕಿಸಿದರು.
ಈ ವಿಚಾರದಲ್ಲಿ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಾರೆ. ಲೂಟಿ ಹೊಡೆದವರು ತಪ್ಪಿಸಿಕೊಳ್ಳುತ್ತಾರೆ. ಮುಡಾ ಹಗರಣ ಕಣ್ಣಿಗೆ ಕಟ್ಟಿದಂತಿದೆ. ಸಾಕಷ್ಟು ಪ್ರಕರಣಗಳನ್ನು ತೆಗೆದರೆ ಮುಖ್ಯಮಂತ್ರಿಗಳ ಬಂಡವಾಳ ಗೊತ್ತಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ತಮ್ಮ ವಿರುದ್ಧ ಕೇಳಿ ಬಂದಿರುವ ಭೂಕಬಳಿಕೆ ಆರೋಪ ಕುರಿತು ಮಾತನಾಡಿದ ಅವರು, 40 ವರ್ಷದ ಹಿಂದೆ ಸ್ವಂತ ದುಡ್ಡಿನಲ್ಲಿ ಖರೀದಿಸಿದ ಬಿಡದಿಯ ನನ್ನ ಜಮೀನನ್ನು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ಎಸ್ಐಟಿಯಿಂದ ಅಳತೆ ಮಾಡಿಸುತ್ತಿದ್ದಾರೆ. ಆ ಜಮೀನಿನ ಮೂಲ ದಾಖಲೆಗಳೇ ಇಲ್ಲ ಎಂದವರು, ಈಗ ಅಳತೆ ಮಾಡಿಸುತ್ತಿದ್ದಾರೆ. ಇದರಿಂದ ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಎಂಇಎಸ್ ಪುಂಡರ ಹಾವಳಿ ಕುರಿತು ಮಾತನಾಡಿ, ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ. ಮರಾಠಿಯವರು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರದಿಂದ ಆಗುತ್ತಿಲ್ಲ ಎಂದು ಟೀಕಿಸಿದರು.
ಸರ್ಕಾರ ಜಾತಿ ಗಣತಿ ಇಟ್ಟುಕೊಂಡು ಸರ್ಕಾರ ಗುಮ್ಮ ಬಿಡುತ್ತೇನೆ ಎನ್ನುತ್ತಿದೆ. ಆದರೆ, ವರದಿ ಸೋರಿಕೆಯಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹಲವು ನಾಯಕರೇ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಜನಗಣತಿಯ ಸಮಯದಲ್ಲಿ ಗಣತಿದಾರರು ತಮ್ಮ ಮನೆಗಳಿಗೆ ಭೇಟಿ ನೀಡಿಲ್ಲ ಎಂದು ಹಲವರು ಹೇಳಿದ್ದಾರೆ. ಸರ್ಕಾರದ ಮಾತ್ರ ವರದಿ ಬಿಡುಗಡೆ ಮಾಡುತ್ತೇನೆಂದು ಹೇಳುತ್ತಿದೆ. ವರದಿ ಇಟ್ಟುಕೊಂಡು ಪೂಜೆ ಮಾಡುವುದನ್ನು ಬಿಟ್ಟು ಬಿಡುಗಡೆ ಮಾಡಲಿ. ಆಗ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ನೋಡಲಿ ಟಾಂಗ್ ಕೊಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ಚುನಾವಣೆಯೆಂದು ಹೇಳುತ್ತಿದ್ದಾರೆ. ಇದರಿಂದ ಮುಖ್ಯಮಂತ್ರಿಯಾಗುತ್ತೇನೆ ಎಂದು ನಿದ್ದೆಗೆಟ್ಟು ಕುಳಿತಿರುವ ನಮ್ಮ ಸ್ನೇಹಿತರಿಗೆ ನಿದ್ದೆಗೆಟ್ಟಿದೆ, ಮುಂದಿನ ಐದು ವರ್ಷವಲ್ಲ, 50 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿ, ಮುಂದಿನ ಚುನಾವಣೆ ಬರಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.