ಬಾಗಲಕೋಟೆ: ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸಭ್ಯ ಪದ ಬಳಸಿದ ಬಿಜೆಪಿ ನಾಯಕ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.
ಯುಗಾದಿ, ದೀಪಾವಳಿ, ಶಿವರಾತ್ರಿಯಂತಹ ಹಬ್ಬದ ಸಮಯದಲ್ಲಿ ನಾನು ಮಾಂಸ ತಿನ್ನುವುದು ನಿಜ, ಆಹಾರ ಸೇವನೆ ನನ್ನ ಹಕ್ಕು, ನಾನು ಯಾಕೆ ತಿನ್ನಬಾರದು, ಅದರಲ್ಲೇನು ತಪ್ಪು ಎಂದು ಕೇಳಿದರು. ಬಿಜೆಪಿ ಪರ ಪ್ರಚಾರದ ವೇಳೆ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಗಳನ್ನೂ ಖಂಡಿಸಿದರು. ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳು ಮತ್ತು ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಮತ ಕೇಳುವುದಾಗಿ ಹೇಳಿದರು.
ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ, ತಾವು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ 3000 ರೂಪಾಯಿ. ನೀಡುವುದಾಗಿ ಮತ್ತು ಕಲ್ಲು ತೂರಾಟ ನಡೆಸಿದರೆ ಅಂತಹ ಮತ್ತು ಅಕ್ರಮವಾಗಿ ಕಟ್ಟಿದ ಮಸೀದಿಯನ್ನು ಬುಲ್ಡೋಜರ್ ಮೂಲಕ ಕೆಡವುದಾಗಿ ಹೇಳಿಕೆಯನ್ನು ಸಿದ್ದರಾಮಯ್ಯ ಖಂಡಿಸಿದರು.
ಇಂತಹ ಹೇಳಿಕೆಗಳು ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿವೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ಅಸಮಂಜಸವಾಗಿವೆ, ಮುಸಲ್ಮಾನರು ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನ ಪಾಲು ಹೊಂದಿದ್ದು, ಅವರನ್ನು ದೇಶದಿಂದ ಹೊರಹಾಕಲು ಸಾಧ್ಯವಿಲ್ಲ. ದ್ವೇಷದ ರಾಜಕಾರಣ ಸಹಿಸಲಾಗದು ಎಂದರು.
ಮುಸಲ್ಮಾನರು 14 ಶೇಕಡಾಕ್ಕಿಂತ ಹೆಚ್ಚು ಇದ್ದಾರೆ
ನಮ್ಮ ರಾಜ್ಯದಲ್ಲಿ ಶೇಕಡಾ 14ಕ್ಕಿಂತ ಹೆಚ್ಚು ಜನ ಮುಸಲ್ಮಾನರಿದ್ದಾರೆ. ಬಜೆಟ್ ಗಾತ್ರ 4 ಲಕ್ಷದ 48 ಸಾವಿರದ 4 ಕೋಟಿ ರೂಪಾಯಿ, ಬಜೆಟ್ ಓದದೆ ಬಿಜೆಪಿ ನಾಯಕರು ಹೇಳಿಕೆ ಕೊಡುತ್ತಾರೆ. ನಾನು ನಾಲ್ಕೂವರೆ ಗಂಟೆ ಅಸೆಂಬ್ಲಿಯಲ್ಲಿ ಮತ್ತು ಮೂರೂವರೆ ಗಂಟೆ ಕೌನ್ಸಿಲ್ ನಲ್ಲಿ ಉತ್ತರ ಕೊಟ್ಟಿದ್ದೇನೆ, ವಿಜಯೇಂದ್ರ ಶ್ವೇತಪತ್ರ ಮಂಡಿಸಿ ಎನ್ನುತ್ತಾರೆ, ಬಜೆಟ್ ನಲ್ಲಿ ಎಲ್ಲ ಹೇಳಿರುತ್ತೇವೆ ಎಂದರು. ವಿಜಯೇಂದ್ರ ಮತ್ತು ಯಡಿಯೂರಪ್ಪನವರನ್ನು ಯಾವಾಗಲೂ ಬೈಯುವ ಪಕ್ಷದಿಂದ ಉಚ್ಛಾಟನೆ ಮಾಡಿರುವ ಯತ್ನಾಳ್ ರನ್ನು ಕರೆತಂದು ಪ್ರಚಾರ ಮಾಡಿಸುತ್ತಾರೆ ಎಂದರು.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಆರಂಭಿಸುವ ಮುನ್ನ ಮುಚಖಂಡಿಯ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಮೋದಿ 165 ಲಕ್ಷ ಕೋಟಿ ಸಾಲ ಮಾಡವ್ರೆ
ಜಿಡಿಪಿಯಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ಸಾಲ ಆಗಬಾರದು, ನಮ್ಮದು 24.94ರಲ್ಲಿದೆ, ಸಾಲ ನಿಗದಿ ಮಾಡುವವರು ಕೇಂದ್ರ ಸರ್ಕಾರ, ರಾಜ್ಯಗಳು ಸಿಕ್ಕಾಪಟ್ಟೆ ಮಾಡಲಾಗುವುದಿಲ್ಲ. ಸಿದ್ದರಾಮಯ್ಯ ಸಾಲ ಮಾಡಿದ್ದಾರೆ ಎಂದು ಬಿಜೆಪಿಯವರು ಹೇಳುವುದು ಹಸಿ ಸುಳ್ಳು. ವಿತ್ತೀಯ ಜವಬ್ದಾರಿ ಕಾಯ್ದೆ ಪ್ರಕಾರವೇ ನಾನು ಸಾಲ ಮಾಡಿರುವುದು. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ, ಕೇಂದ್ರ ಸರ್ಕಾರದಿಂದ ಉತ್ತಮವಾಗಿದೆ.
ಕೇಂದ್ರ ಸರ್ಕಾರದ ಜಿಡಿಪಿ 7.14 ಶೇಕಡಾದಷ್ಟಿದ್ದರೆ ಕರ್ನಾಟಕದ ಜಿಡಿಪಿ 8.1 ಶೇಕಡಾ ಇದೆ. ನಾವು ಕೇಂದ್ರ ಸರ್ಕಾರದಿಂದ ಉತ್ತಮ ಮಟ್ಟದಲ್ಲಿದ್ದೇವೆ. ಮೋದಿ ಸರ್ಕಾರ 165 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ.
2014ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರದ ಸಾಲ 53 ಲಕ್ಷದ 11 ಸಾವಿರ ಕೋಟಿ ರೂಪಾಯಿ, ಈಗ ಅದು 2027 ಮಾರ್ಚ್ ಗೆ 218 ಲಕ್ಷ ಕೋಟಿ ರೂಪಾಯಿ ಆಗಬಹುದು. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ ಮಾಡಿದ ಸಾಲ 165 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಸಿದ್ದರಾಮಯ್ಯ ಅಂಕಿಅಂಶ ನೀಡಿದರು.