ದಾವಣಗೆರೆ: ಏಪ್ರಿಲ್ 9 ರಂದು ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿಯಾಗಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಎರಡು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಮಾಜಿ ಕ್ರಿಕೆಟಿಗ ಮತ್ತು ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಮಂಗಳವಾರ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪ್ರಚಾರದಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಮತ ಚಲಾಯಿಸುವಂತೆ ಮತದಾರರಿಗೆ ಮನವಿ ಮಾಡಿದರು.
ವಿಧಾನಸಭೆ ಮತ್ತು ಸಂಸತ್ತಿಗೆ ಚುನಾವಣಾ ಹೋರಾಟಗಳಲ್ಲಿ ಅನುಭವಿಯಾಗಿರುವ ಅಜರುದ್ದೀನ್, ಕಾಂಗ್ರೆಸ್ ಗೆಲುವಿಗೆ ಬೂತ್ ನಿರ್ವಹಣೆ ನಿರ್ಣಾಯಕವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರ ಖಾತರಿ ಯೋಜನೆಗಳನ್ನು ಪೂರೈಸಿದೆ ಮತ್ತು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅಜರುದ್ದೀನ್ ಹೇಳಿದರು.
ಕಾಂಗ್ರೆಸ್ ಜನಪರ ಆಡಳಿತ ನೀಡಲು ಹೆಸರುವಾಸಿಯಾಗಿದೆ ಮತ್ತು ಅದು ದೇಶದ ಎಲ್ಲಾ ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಸೆಕ್ಯುಲರ್ ಪಕ್ಷ, ಅಲ್ಪಸಂಖ್ಯಾತ ವರ್ಗ ಸೇರಿ ಎಲ್ಲರನ್ನೂ ಒಗ್ಗೂಡಿಸಿ ಒಯ್ಯುವ ಪಕ್ಷ, ಕಾಂಗ್ರೆಸ್ ಪಕ್ಷ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವಿವಿಧ ರಾಜ್ಯಗಳಿಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ರಾಹುಲ್ ಗಾಂಧಿ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೆ.
ದಾವಣಗೆರೆಗೆ ಬಂದಿದ್ದೇನೆ, ನನ್ನ ರನ್ ಔಟ್ ಮಾಡಬೇಡಿ, ಮ್ಯಾಚ್ ಗೆಲ್ಲಿಸಿ, ಕಾಂಗ್ರೆಸ್ ಗೆಲ್ಲುತ್ತದೆ, ಸಮರ್ಥ ಶಾಮನೂರು ಗೆಲ್ಲುತ್ತಾನೆ. ಆದರೆ ಬಹುಮತದಿಂದ ಗೆಲ್ಲಬೇಕು ಎಂದು ಮೊಹಮ್ಮದ್ ಅಜರುದ್ದೀನ್ ಹೇಳಿದರು.
ಕೈಪೇಟ್ನ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿ ಪ್ರಾರಂಭವಾಯಿತು. ದೊಡ್ಡಪೇಟೆ, ವಿಠಲ ಮಂದಿರ ರಸ್ತೆ, ಮದೀನ ವೃತ್ತ, ಆಜಾದ್ ನಗರ ಮತ್ತು ಬಾಷಾನಗರ ಮುಂತಾದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಯಿತು. ಜನರ ಆಶೀರ್ವಾದದಿಂದ ಸಮರ್ಥ್ ಅವರ ಗೆಲುವು ಖಚಿತ ಎಂದು ಶಿವಕುಮಾರ್ ಹೇಳಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಇತರ ಹಲವಾರು ನಾಯಕರು ರೋಡ್ ಶೋನಲ್ಲಿ ಭಾಗವಹಿಸಿದ್ದರು.