ಬೆಂಗಳೂರು: ಉಪ ಚುನಾವಣೆ ವೇಳೆ ಗೃಹಲಕ್ಷ್ಮೀ ಖಾತೆಗಳಿಗೆ ಹಣ ಜಮೆ ಮಾಡಿರುವ ರಾಜ್ಯ ಸರ್ಕಾರ, ಇದಕ್ಕಾಗಿ ಸರ್ಕಾರಿ ನೌಕರರ ವೇತನದ ಹಣವನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ನೀತಿಗಳ ವೈಫಲ್ಯ ಹಾಗೂ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿರುವ ಪರಿಣಾಮವಾಗಿ ರಾಜ್ಯದ ಸರಿಸುಮಾರು 5 ಲಕ್ಷ ಸರಕಾರಿ ನೌಕರರ ಪೈಕಿ ಬಹುತೇಕ ನೌಕರರಿಗೆ ಏಪ್ರಿಲ್ ತಿಂಗಳ 22 ರವರೆಗೆ ರಾಜ್ಯ ಸರ್ಕಾರ ಸಂಬಳವನ್ನೇ ನೀಡಿಲ್ಲ.
ಕಳೆದ ವರ್ಷ ಎರಡು ತಿಂಗಳ ಅವಧಿಗೆ ಗ್ರಹಲಕ್ಷ್ಮಿ ಹಣವನ್ನೇ ನುಂಗಿ ಹಾಕಿದ ರಾಜ್ಯ ಸರ್ಕಾರ ಈ ವರ್ಷ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಕಾರಣಕ್ಕಾಗಿ ಮಾರ್ಚ್ ಅಂತ್ಯಕ್ಕೆ ಖಜಾನೆಯಲ್ಲಿದ್ದ ಹಣವನ್ನು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂಚಿಕೆ ಮಾಡಿದೆ. ಪರಿಣಾಮವಾಗಿ ರಾಜ್ಯ ಸರ್ಕಾರದ 5 ಲಕ್ಷ ಸರ್ಕಾರಿ ನೌಕರರಿಗೆ ತಿಂಗಳು ಕಳೆಯುತ್ತಾ ಬಂದರೂ ಸಂಬಳ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಬದಲಾವಣೆ, ಸಂಪುಟ ಪುನರ್ ರಚನೆ, ಮುಸ್ಲಿಮರ ತುಷ್ಟಿಕರಣ ಹೀಗೆ ಹಲವು ಆಂತರಿಕ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ವೈಯಕ್ತಿಕ ಪ್ರತಿಷ್ಠೆಯಲ್ಲಿ ಮುಳುಗಿ ಹೋಗಿದ್ದಾರೆ. ಇದರ ನೇರ ಪರಿಣಾಮ ರಾಜ್ಯದ ಜನರ ಮೇಲೆ ಉಂಟಾಗುತ್ತಿದೆ. ಸರ್ಕಾರಿ ನೌಕರರಿಗೆ ಸಂಬಳವನ್ನೇ ಕೊಡಲು ಸಾಧ್ಯವಾಗದ ಈ ಸರಕಾರ ಈ ವರ್ಷ ಬಿರು ಬೇಸಿಗೆ ಹಾಗೂ ಬರದ ಛಾಯೆಯಲ್ಲಿ ಈಗಾಗಲೇ ಬಸವಳಿದು ಹೋಗಿರುವ ರಾಜ್ಯದ ಜನರನ್ನು ದೇವರೇ ಕಾಪಾಡಬೇಕು. ಪ್ರತಿಪಕ್ಷವಾಗಿ ಬಿಜೆಪಿ ಸರ್ಕಾರವನ್ನು ಬಡಿದೆಬ್ಬಿಸಿ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಜನ , ಜಾನುವಾರು ನೆರವಿಗೆ ಮುಂದಾಗುವಂತೆ ಹೋರಾಟ ನಡೆಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.