ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ಅವರನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರವು "ದಲಿತ ಅಸ್ಮಿತೆ"ಯ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಹಿರಿಯ ಬಿಜೆಪಿ ನಾಯಕ ಆರ್. ಅಶೋಕ್ ಶನಿವಾರ ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ದಾಖಲೆ ಸಹಿತ ಸಾಕ್ಷ್ಯಗಳನ್ನು ಮಂಡಿಸಿದ ನಂತರವಷ್ಟೇ ಸಚಿವರು ಹುದ್ದೆಗೆ ರಾಜೀನಾಮೆ ನೀಡಿದರು ಎಂದು ಅವರು ಹೇಳಿದ್ದಾರೆ.
ಸುಮಾರು 89 ಕೋಟಿ ರೂ.ಗಳ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಹಿನ್ನೆಲೆಯಲ್ಲಿ, ತಮ್ಮನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಬೇಕೆಂದು ವಿರೋಧ ಪಕ್ಷಗಳು ನಡೆಸಿದ ನಿರಂತರ ಪ್ರತಿಭಟನೆಯ ನಂತರ ನಾಗೇಂದ್ರ ಶುಕ್ರವಾರ ರಾಜೀನಾಮೆ ನೀಡಿದ್ದರು.
ಜೂನ್ 2024ರಲ್ಲಿ ನಿಗಮದ ಲೆಕ್ಕಪತ್ರ ಅಧೀಕ್ಷಕ ಪಿ. ಚಂದ್ರಶೇಖರನ್ ಅವರ ಸಾವಿನ ಮೂಲಕ ಈ ಹಗರಣದ ವಿಷಯ ಬೆಳಕಿಗೆ ಬಂದಿತ್ತು. ಆದರೆ, ಅವರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ನಂತರ ನಾಗೇಂದ್ರ ಅವರನ್ನು ಸಂತ್ರಸ್ತರೆಂಬಂತೆ ಯಾಕೆ ಬಿಂಬಿಸಲಾಗುತ್ತಿದೆ ಎಂದೂ ಅವರು ಪ್ರಶ್ನಿಸಿದರು. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ನಿಂದ ತೀವ್ರ ಒತ್ತಡದ ಕಾರಣ ನಾಗೇಂದ್ರ ರಾಜೀನಾಮೆ ನೀಡಿದರು. ಆದರೆ, ಈ ಸಂದರ್ಭದಲ್ಲಿ 'ದಲಿತ' ವ್ಯಕ್ತಿಯೊಬ್ಬರಿಗೆ ಅವಮಾನ ಮಾಡಲಾಗಿದೆ ಎಂದು ಅವರು ವಿರೋಧ ಪಕ್ಷಗಳ ವಿರುದ್ಧವೇ ಆರೋಪ ಹೊರಿಸಿದರು. ಅಲ್ಲದೆ, ತಾವು ಪಕ್ಷಕ್ಕೆ ಮುಜುಗರ ಉಂಟುಮಾಡಲು ಅಥವಾ 'ಮನುವಾದಿ'ಗಳಿಗೆ ಮೇಲುಗೈ ಸಿಗುವಂತೆ ಮಾಡಲು ಬಯಸುವುದಿಲ್ಲ ಎಂದೂ ಅವರು ಹೇಳಿದ್ದರು.
ಪಿ. ಚಂದ್ರಶೇಖರನ್ ಕೂಡ ಒಬ್ಬ ದಲಿತರಾಗಿದ್ದರು ಮತ್ತು ಹಗರಣವನ್ನು ಬಯಲಿಗೆಳೆದ ನಂತರ ಆತ್ಮಹತ್ಯೆ ಮಾಡಿಕೊಂಡರು. ಅವರಿಗೆ ನೀವು ನ್ಯಾಯ ಒದಗಿಸುತ್ತಿಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ಅವರ ಮಕ್ಕಳು ಬೀದಿ ಪಾಲಾಗಿದ್ದಾರೆ ಎಂದು ಅಶೋಕ್ ಆರೋಪಿಸಿದರು. ಚಂದ್ರಶೇಖರನ್ ಅವರ ಸಾವಿನಿಂದಲೇ ಹಣದ ದುರ್ಬಳಕೆಯ ವಿಷಯ ಬೆಳಕಿಗೆ ಬಂದಿತು. ಇಲ್ಲದಿದ್ದರೆ ಬಿಲ್ ಹೊಂದಾಣಿಕೆಗಳ ಮೂಲಕ ಈ ವಿಷಯವನ್ನು ಮುಚ್ಚಿಹಾಕಲಾಗುತ್ತಿತ್ತು ಎಂದು ಪ್ರತಿಪಾದಿಸಿದರು.