ಮೈಸೂರು: ಡಿ.ಕೆ. ಶಿವಕುಮಾರ್ ಇನ್ನೂ 15 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ಈ ಅವಧಿಯನ್ನೇ ಮುಗಿಸಲಿ ಸಾಕು. ಅವರೇ ಇದ್ದರೆ ವಿಧಾನಸೌಧವನ್ನೇ ಮಾರಿಬಿಡುತ್ತಾರೆ.1 ಲಕ್ಷ ಕೋಟಿ ಸಾಲ ಮಾಡಲು ಹುನ್ನಾರ ನಡೆಸಿದ್ದು, ರಾಜ್ಯವನ್ನು ಸಾಲದ ಪ್ರಪಾತಕ್ಕೆ ತಳ್ಳಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಧಾನಸೌಧ ಕೂಡ ನಮ್ಮಪ್ಪನ ಆಸ್ತಿ ಎಂದುಬಿಡುತ್ತಾರೆ. ಇಂಥವರಿಗೆಲ್ಲ ಬುದ್ಧಿ ಕಲಿಸಬೇಕಿದೆ ಎಂದರು. ಬೆಂಗಳೂರಿನಲ್ಲಿ ಕಸ ಎತ್ತುವುದಕ್ಕೂ ಸಾಲ, ಬಿಡದಿ ಟೌನ್ಶಿಪ್ಗೂ ಸಾಲ ಎತ್ತುತ್ತಿದ್ದಾರೆ.
ಪ್ರತಿಯೊಂದಕ್ಕೂ ಸಾಲ. ಹೀಗಿರುವಾಗ, ಭಾರತ್ ಜೋಡೊ ಸಂಘಗಳಿಗೆ ಸಾವಿರ ಕೋಟಿ ರೂಪಾಯಿ ಕೊಡಲು ಹಣ ಎಲ್ಲಿತ್ತು? ಎಂದು ಪ್ರಶ್ನಿಸಿದರು.
ತೀವ್ರ ಬರಗಾಲ ಇರುವುದರಿಂದ ದಸರೆಯನ್ನು ಅದ್ದೂರಿ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಲಿ. ಈ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಜನರ ಬಳಿಗೆ ಸುಳಿಯುತ್ತಿಲ್ಲ ಎಂದು ದೂರಿದರು.
ಈ ಸರ್ಕಾರ ಜನರ ತೆರಿಗೆ ದುಡ್ಡನ್ನು ಅನಗತ್ಯವಾಗಿ ಬಳಸಿ, ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರತಿ ಪಂಚಾಯಿತಿಗೆ ಭಾರತ್ ಜೋಡೊ ಸಂಘದ ಹೆಸರಿನಲ್ಲಿ 10 ಲಕ್ಷ ಕೊಡುತ್ತಿದೆ. ಆ ಹಣ ಯಾರಪ್ಪನದು? ಇಸ್ಪೀಟ್ ಆಡಿಸಲು ನೀವು ಮಾಡುತ್ತಿದ್ದ ದಂಧೆಗಳನ್ನು ಮುಂದುವರಿಸಲು ಈ ಸಂಘ ಕಟ್ಟುತ್ತಿದ್ದೀರಾ? ಎಂದು ಡಿಕೆಶಿ ಅವರನ್ನು ಕೇಳಿದರು.
ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಬರಪೀಡಿತ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಅಲ್ಲಿನ ಅನೇಕ ಕಡೆಗಳಲ್ಲಿ ಜನರು ಕಂಗೆಟ್ಟು ಗುಳೇ ಹೋಗಿದ್ದಾರೆ. ಅಧಿಕಾರ ಹಂಚಿಕೆಯ ಗಲಾಟೆಯಲ್ಲಿ ಸರ್ಕಾರ ಮೈಮರೆತಿದೆ ಎಂದು ದೂರಿದರು.