ಬೆಂಗಳೂರು: ಕೇವಲ ತಪ್ಪು ಮಾಹಿತಿಯ ತುಣುಕುಗಳನ್ನು ನೀಡುತ್ತಾ, ನಾನು ಹೇಳುವುದೆಲ್ಲವೂ ಸತ್ಯವೆಂದು ಬಿಂಬಿಸುವುದು ಜಾಣತನವಲ್ಲ, ಸತ್ಯದ ಅರಿವಿರುವುದು ಮುಖ್ಯ. ಮಾಹಿತಿ ನೀಡುವಾಗ ಕೇವಲ 'ಗೂಗಲ್ ಬೇಬಿ'ಯಂತೆ ವರ್ತಿಸಿದರೆ ಸಾಲದು, ಮಾಹಿತಿ ಸ್ಪಷ್ಟ ಮತ್ತು ಸತ್ಯವಾಗಿರಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಹರಿಹಾಯ್ದಿದ್ದಾರೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚರಿತ್ರೆಯ ಪುಟಗಳನ್ನು ತಿರುವಿ ನೋಡಿದರೆ ಸತ್ಯ ತಿಳಿಯುತ್ತದೆ. ಬಾಬಾಸಾಹೇಬರನ್ನು ಕಾಂಗ್ರೆಸ್ ಪಕ್ಷವು ಹಂತ ಹಂತವಾಗಿ ಅಪಮಾನ ಮಾಡಿದ್ದಲ್ಲದೆ, ಅವರ ಚುನಾವಣಾ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದಕ್ಕೆ ನಿಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶ್ರೀ ರಮೇಶ್ ಕುಮಾರ್ ಅವರೇ ಸದನದಲ್ಲಿಯೇ ಸಾಕ್ಷಿ ನುಡಿದಿದ್ದಾರೆ.
ಬಾಸಾಹೇಬರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷವೇ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯವಿರಬೇಕು. ಬಾಬಾಸಾಹೇಬರ ಸೋಲು ನಮ್ಮ ಕಾಂಗ್ರೆಸ್ ಕುತಂತ್ರದಿಂದಲೇ ಆಗಿದ್ದು ಎಂದು ಹೆಮ್ಮೆಯಿಂದ ಒಪ್ಪಿಕೊಂಡ ನೀವೇ ನಿಜವಾದ ಧೈರ್ಯಶಾಲಿಗಳು ಎಂದು ಲೇವಡಿ ಮಾಡಿದ್ದಾರೆ.
ಬಾಬಾಸಾಹೇಬರನ್ನು ಚುನಾವಣೆಯಲ್ಲಿ ಸೋಲಿಸಿದ್ದು, ಅವರನ್ನು ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದ್ದು ಕುತಂತ್ರಿ ಕಾಂಗ್ರೆಸ್ ಎಂಬುದು ಅಜರಾಮರ ಸತ್ಯ. ಇದು ಇತಿಹಾಸದಲ್ಲಿ ದಾಖಲಾಗಿರುವ ಕಟು ಸತ್ಯ. ಸತ್ಯವನ್ನು ಎಷ್ಟೇ ಮರೆಮಾಚಿದರೂ, ತಿರುಚಿದರೂ ಅದು ಸಾಯುವುದಿಲ್ಲ ಎಂಬ ಅರಿವಿರಲಿ ನಿಮಗೆ ಎಂದು ಛಾಟಿ ಬೀಸಿದ್ದಾರೆ.
ಸಹೋದರ, ಇನ್ನಾದರೂ ನೀವು ವಾಸ್ತವವನ್ನು ಅರಿತು ಪ್ರಬುದ್ಧತೆಯಿಂದ ವರ್ತಿಸುವುದನ್ನು ಕಲಿಯಿರಿ. ನಿಮ್ಮ ಎಲ್ಲಾ ಮಾತುಗಳು, ನಡವಳಿಕೆಗಳು ಅಪಹಾಸ್ಯಕ್ಕೆ ಗುರಿಯಾಗುತ್ತಿರುವುದನ್ನು ಕಂಡು ನನಗೆ ತುಂಬಾ ಬೇಸರವಿದೆ.
ನನ್ನ ಸಹೋದರ ಪ್ರಿಯಾಂಕ್ ಖರ್ಗೆ ರವರೇ...ವಿತಂಡವಾದ ಬಿಡಿ, ಸಾಧ್ಯವಾದರೆ ಮೊದಲು ನನ್ನ ಸವಾಲನ್ನು ಸ್ವೀಕರಿಸಿ ನಿಮ್ಮ ಸುಳ್ಳನ್ನು ಸತ್ಯವೆಂದು ಸಾಬೀತುಪಡಿಸಿ. ಬಾಬಾಸಾಹೇಬರ ಸೋಲನ್ನು ಸನ್ಮಾನ್ಯ ನೆಹರೂ ರವರು ವಿದೇಶಿ ಮಹಿಳೆಗೆ ಪತ್ರ ಬರೆಯುವ ಮೂಲಕ ಸಂಭ್ರಮಿಸಿದ್ದು ನಿಜವಲ್ಲವೇ? ಇದನ್ನು ನೀವು ಒಪ್ಪಿಕೊಳ್ಳುತ್ತೀರಾ?
ಇವೆಲ್ಲವನ್ನೂ ಮೊದಲು ಸಾಬೀತುಪಡಿಸಿ, ಅಲ್ಲಿಯವರೆಗೆ ನನ್ನ ರಾಜೀನಾಮೆಯ ಬಗ್ಗೆ ನೀವು ಕಾಣುತ್ತಿರುವ ಕನಸು 'ಹಗಲುಗನಸಾಗಿಯೇ' ಉಳಿಯುತ್ತದೆ. ಸಹೋದರನಾಗಿ ನಿಮಗೆ ನನ್ನದೊಂದು ಕೊನೆಯ ಮಾತು: ಅನಗತ್ಯ ವಿತಂಡವಾದ ಕೈಬಿಟ್ಟು, ನಿಮ್ಮ ಇಲಾಖೆಯನ್ನು ದಕ್ಷತೆಯಿಂದ ಮುನ್ನಡೆಸುವ ಕಡೆಗೆ ಗಮನ ಕೊಡಿ ಎಂದು ಟೀಕಿಸಿದ್ದಾರೆ.