ಬೆಂಗಳೂರು: ಮೈಸೂರು ಸಮೀಪದ ಟಿ. ನರಸೀಪುರದಲ್ಲಿರುವ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (KSIC) ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ 5 ಎಕರೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ರಾಜ್ಯ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, ಕನ್ನಡ ನಾಡಿನ ಹೆಮ್ಮೆಯ 'ಮೈಸೂರು ಸಿಲ್ಕ್' ಸಂಸ್ಥೆಯನ್ನು ಮುಚ್ಚಲು ಹೊರಟಿರುವ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಕನ್ನಡಿಗರ ಅಸ್ಮಿತೆ, ಮೈಸೂರು ಮಹಾರಾಜರು ನೀಡಿದ ಕೊಡುಗೆ, ವಿಶ್ವವಿಖ್ಯಾತ 'ಮೈಸೂರು ಸಿಲ್ಕ್' (KSIC) ಇಂದು ಈ ಅಸಮರ್ಥ, ನಾಲಾಯಕ್ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಿಮಾಣವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಮೈಸೂರು ಸಿಲ್ಕ್ ಎಂಬ ಈ ಪರಂಪರೆ ಕನ್ನಡಿಗರ ಪಾಲಿನ ಭಾವನೆ ಮಾತ್ರವಲ್ಲ, ಸಾವಿರಾರು ಕುಟುಂಬಗಳ ಬದುಕು. ಆದರೆ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಪರಂಪರೆಯ ಬೆಲೆಯೂ ಗೊತ್ತಿಲ್ಲ, ರೈತರ ನೋವೂ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಕೆ.ಎಸ್.ಐ.ಸಿ ಸಂಸ್ಥೆಯನ್ನು ವ್ಯವಸ್ಥಿತವಾಗಿ ಹಳ್ಳ ಹಿಡಿಸುತ್ತಿರುವುದು ಯಾರ ಲಾಭಕ್ಕಾಗಿ? ಗ್ಯಾರಂಟಿ ಹೆಸರಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ನಮ್ಮ ಹೆಮ್ಮೆಯ ಸಾರ್ವಜನಿಕ ಉದ್ಯಮಗಳನ್ನು ಮಾರಾಟಕ್ಕಿಟ್ಟಿದ್ದೀರಾ? ಮೈಸೂರು ರೇಷ್ಮೆ ನಂಬಿ ಬದುಕುತ್ತಿರುವ ಸಾವಿರಾರು ನೇಕಾರರ ಕುಟುಂಬಗಳು ಇಂದು ಆತಂಕದಲ್ಲಿವೆ. ರೇಷ್ಮೆ ಬೆಳೆಗಾರರಿಗೆ ಸಿಗಬೇಕಾದ ಪ್ರೋತ್ಸಾಹಧನ ಎಲ್ಲಿ? ನೇಕಾರರ ಶ್ರಮಕ್ಕೆ ಬೆಲೆ ಎಲ್ಲಿ?
ಮೈಸೂರು ಸಿಲ್ಕ್ ಎಂಬುದು ಕೇವಲ ಬ್ರ್ಯಾಂಡ್ ಅಲ್ಲ, ಅದು ಕನ್ನಡ ನಾಡಿನ ಮಣ್ಣಿನ ಗುಣ. ಈ ಪರಂಪರೆಯನ್ನು ಉಳಿಸುವ ಯೋಗ್ಯತೆ ನಿಮಗಿಲ್ಲದಿದ್ದರೆ, ಅಧಿಕಾರ ಬಿಟ್ಟು ತೊಲಗಿ ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾನಾ ಎಚ್ಚರಿಕೆ. ನೆನಪಿರಲಿ, ಮೈಸೂರು ಸಿಲ್ಕ್ ಎನ್ನುವುದು ಕನ್ನಡಿಗರ ಪಾಲಿಗೆ ಕೇವಲ ಒಂದು ವಸ್ತ್ರವಲ್ಲ, ಅದು ನಮ್ಮ ಸ್ವಾಭಿಮಾನದ ಶಕ್ತಿ. ಈ ಸಂಸ್ಥೆಯನ್ನು ಉಳಿಸಲು, ನೇಕಾರರ ಹಿತ ಕಾಯಲು ಬಿಜೆಪಿ ಉಗ್ರ ಹೋರಾಟ ನಡೆಸಲಿದೆ. ನಮ್ಮ ನಾಡಿನ ಹೆಮ್ಮೆಯ ಪರಂಪರೆಯನ್ನು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ, ಅಸಮರ್ಥತೆಗೆ ಆಹುತಿ ಕೊಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.