ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಯತ್ನವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನೀವೇ ಮುಖ್ಯಮಂತ್ರಿಯಾಗಲು ಹೈಕಮಾಂಡ್ಗೆ ಏನೇನು ಭರವಸೆ ಕೊಟ್ಟಿದ್ದೀರೋ ಗೊತ್ತಿಲ್ಲ. ಆದರೆ, ಆ ಭರವಸೆಗಳನ್ನು ಈಡೇರಿಸಲು ಬಿಡದಿಯ ರೈತರ ಬದುಕನ್ನೇ ಬಲಿಕೊಡಬೇಡಿ. ರೈತರ ಜಮೀನನ್ನು ಟೌನ್ಶಿಪ್ ಹೆಸರಿನಲ್ಲಿ ಕಸಿದುಕೊಂಡು ನಿಮ್ಮ ಮಾತು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಡಿ" ಎಂದು ಕಿಡಿಕಾರಿದ್ದಾರೆ.
ಹೈಕಮಾಂಡ್ಗೆ ಕೊಟ್ಟ ಮಾತುಗಳನ್ನು ಈಡೇರಿಸಲು ನಿಮಗೆ ಇನ್ನೂ ಹಲವು ಮಾರ್ಗಗಳಿವೆ. ಆದರೆ, ರೈತರ ಜೀವನೋಪಾಯವನ್ನು ನಾಶ ಮಾಡುವ ದಾರಿಯನ್ನು ಆಯ್ಕೆ ಮಾಡಬೇಡಿ. ರೈತರ ಬದುಕಿನೊಂದಿಗೆ ಆಟವಾಡಬೇಡಿ ಎಂದು ಹೇಳಿದ್ದಾರೆ.
ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಬೆಂಬಲಕ್ಕೆ ತಾವು ಕೂಡ ಇಳಿಯಬೇಕಾದ ಪರಿಸ್ಥಿತಿ ನಿರ್ಮಿಸಬೇಡಿ, "ನನ್ನನ್ನು ರೈತರೊಂದಿಗೆ ಪ್ರತಿಭಟನಾ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಬೇಡಿ. ಅಗತ್ಯ ಬಿದ್ದರೆ ರೈತರ ಪರವಾಗಿ ನಾನು ಕೂಡ ಹೋರಾಟಕ್ಕೆ ಇಳಿಯುತ್ತೇನೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರ ರೈತರ ಆತಂಕವನ್ನು ಅರ್ಥಮಾಡಿಕೊಂಡು ಟೌನ್ಶಿಪ್ ಯೋಜನೆಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.