ಬೆಂಗಳೂರು: ಜೆಡಿಎಸ್ ನಾಯಕ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳೋಕೆ ಆಗಲಿಲ್ಲ ಇನ್ನೇನು ಮಾಡ್ತಾರೆ ಅವರು ಎಂದು ಮಾಗಡಿ ಕ್ಷೇತ್ರದ ಶಾಸಕ ಹೆಚ್ ಸಿ ಬಾಲಕೃಷ್ಣ ಟಾಂಗ್ ಕೊಟ್ಟಿದ್ದಾರೆ.
ನಿನ್ನೆ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನಲ್ಲಿ ಅಡ್ಡ ಮತದಾನದಿಂದ ಅಭ್ಯರ್ಥಿಗೆ ಸೋಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಕೇಳಿದಂತೆ ಎಲ್ಲರೂ ಆತ್ಮಸಾಕ್ಷಿಯಿಂದ ಕಾಂಗ್ರೆಸ್ಗೆ ಮತ ಹಾಕಿದ್ದಾರೆ. ಆತ್ಮಸಾಕ್ಷಿಗೆ ಮತ ಕೇಳಿದ ಮೇಲೆ ಈಗ ಕುದುರೆ ವ್ಯಾಪಾರದ ಬಗ್ಗೆ ಮಾತನಾಡಬಾರದು. ಕುದುರೆ ವ್ಯಾಪಾರದ ಬಗ್ಗೆ ಮಾತನಾಡಿದರೆ ಅವರ ಶಾಸಕರಿಗೆ ಅವರೇ ಅವಮಾನ ಮಾಡಿದಂತೆ ಆಗುತ್ತದೆ. ಇರುವ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಕೊಳ್ಳೊಕೆ ಆಗ್ಲಿಲ್ಲ ಇನ್ನೇನೂ ಮಾಡ್ತೀರಾ ಎಂದು ವ್ಯಂಗ್ಯವಾಡಿದರು.
ಇಲ್ಲಿ ಯಾರದ್ದು ತಪ್ಪಿಲ್ಲ. ಕುಮಾರಸ್ವಾಮಿ ಕೇಳಿದಂತೆ ಎಲ್ಲರೂ ಆತ್ಮಸಾಕ್ಷಿಯಿಂದ ಮತ ಹಾಕಿದ್ದಾರೆ. ಶಾಸಕರು ಅವರ ಆತ್ಮಸಾಕ್ಷಿಗೆ ಅನ್ನಿಸಿದಂತೆ ಮತ ಹಾಕಿದ್ದಾರೆ. ಅದನ್ನು ಗೌರವಿಸಬೇಕು. ನಾವು ನಮ್ಮ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಕೊಟ್ಟಿದ್ದರು. ಅದರಂತೆ ಸರಿಯಾಗಿ ಇಟ್ಟುಕೊಂಡು ಮತ ಹಾಕಿಸಿ ನಮ್ಮ ಅಭ್ಯರ್ಥಿಗಳೆಲ್ಲರನ್ನೂ ಗೆಲ್ಲಿಸಿದ್ದೇವೆ ಎಂದರು.