ಬೆಂಗಳೂರು: ಸಂಸದ ಡಾ.ಕೆ.ಸುಧಾಕರ್ ಶನಿವಾರ (ಜೂ.27) ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಹಮ್ಮಿಕೊಂಡಿರುವುದು ಡಾ.ಕೆ.ಸುಧಾಕರ್ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನಡುವಿನ ವೈಮನಸ್ಸು ಸ್ಪೋಟಕ್ಕೆ ಕಾರಣವಾಗಿದೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್, ಚಿಕ್ಕಬಳ್ಳಾಪುರ ಕ್ಷೇತ್ರದ ಜನರು ಒಪ್ಪಿಕೊಂಡು ನನಗೆ ಅನುಮತಿ ಕೊಟ್ಟರೆ ನಾನೇ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಂದು ಚುನಾವಣೆಗೆ ನಿಲ್ಲುವೆ ಎಂದು ಶಾಸಕ ವಿಶ್ವನಾಥ್ ಹೇಳಿದ್ದಾರೆ.
2008ರಿಂದ ನಾನು ಯಲಹಂಕ ಶಾಸಕನಾಗಿದ್ದೇನೆ. ಅಂದಿನಿಂದ ಪ್ರತಿ ವರ್ಷವೂ ಎಲ್ಲರನ್ನೂ ಸೇರಿಸಿಕೊಂಡು ನಾಡಪ್ರಭು ಕೆಂಪೇಗೌಡ ಅವರ ಜಯಂತಿ ಆಚರಿಸುತ್ತಿದ್ದೇನೆ. ಆದರೆ ಈಗ ನಮ್ಮ ಪಕ್ಷದ ಸಂಸದರೇ ಆದ ಡಾ.ಕೆ.ಸುಧಾಕರ್ ನಮ್ಮನ್ನು ಹೊರಗಿಟ್ಟು ಕೆಂಪೇಗೌಡ ಅವರ ಜಯಂತಿ ಮತ್ತು ವಾಕಥಾನ್ ಮಾಡುತ್ತಿದ್ದಾರೆ. ಒಂದೇ ಪಕ್ಷದಲ್ಲಿ ಇದ್ದರೂ ಈ ಕಾರ್ಯಕ್ರಮ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಆದ ಕಾರಣ ನಾನು ಇಲ್ಲಿಗೆ ಬಂದು ಮಾತನಾಡುತ್ತಿದ್ದೇನೆ’ ಎಂದರು.
ನನ್ನ ವಿಷಯಕ್ಕೆ ಬಂದರೆ ಸುಧಾಕರ್ ಅವರ ಬುಡಕ್ಕೆ ಕೈ ಹಾಕುವೆ. ಚಿಕ್ಕಬಳ್ಳಾಪುರದಲ್ಲಿಯೇ ಕೆಂಪೇಗೌಡರ ಜಯಂತಿ ಮಾಡುವೆ. ನಾವೂ ನಾಳೆ ಕೆಂಪೇಗೌಡರ ಜಯಂತಿ ಮಾಡುತ್ತೇವೆ. ಯಾರ ಕಾರ್ಯಕ್ರಮಕ್ಕೆ ಹೆಚ್ಚು ಜನರು ಸೇರುವರೊ ನೀವು (ಮಾಧ್ಯಮ) ಬಂದು ನೋಡಿ. ಯಲಹಂಕದಲ್ಲಿ ಈಗ ಒಕ್ಕಲಿಗರ ಸಂಘ ಎಚ್ಚರವಾಗಿದೆ. ರಾಜಕೀಯವಾಗಿ ಕೆಂಪೇಗೌಡರ ಜಯಂತಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಸುಧಾಕರ್ ಕೇಂದ್ರ ಸಚಿವರಾಗಲಿ ಅಂತ ನಮ್ಮ ಆಸೆ. ಆದರೂ ನನ್ನ ಮೇಲೆಯೇ ಬೀಳುತ್ತಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂದೀಪರೆಡ್ಡಿಗೆ ಎಂಎಲ್ಎ ಟಿಕೆಟ್ ಕೊಡಬೇಕೆಂದು ವರಿಷ್ಠರಿಗೆ ಒತ್ತಾಯಿಸುವೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಸುಧಾಕರ್ ಪರ ಕೆಲಸ ಮಾಡಿಲ್ಲ ಅಂತ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ. ನಾನೂ ಮಾಡುತ್ತೇನೆಂದು ಸವಾಲು ಹಾಕಿದರು. ಸುಧಾಕರ್ ವಿಧಾನಸಭೆಗೆ ಸ್ಪರ್ಧಿಸುವುದಾದರೆ ಯಲಹಂಕ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.