ಬೆಂಗಳೂರು: ಪ್ರದೀಪ್ ಈಶ್ವರ್ ಬೋಗಸ್ ಟ್ಯೂಷನ್ ನಡೆಸುತ್ತಾನೆ. ಅವನ ಬಗ್ಗೆ ನೀವು ಏಕೆ ಪ್ರಚಾರ ಕೊಡ್ತಿದೀರಿ ಎಂದು ಮಾಧ್ಯಮದವರ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.ೆ
ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಿ.ವೈ.ವಿಜಯೇಂದ್ರ ಅಂತಾ ಧೀಮಂತ ನಾಯಕ ಇದ್ದಾರೆ. ಅವರ ತಂದೆ ಬಿ.ಎಸ್.ಯಡಿಯೂರಪ್ಪನವರು ರೈತಪರ ಹೋರಾಟ ಮಾಡಿದ್ದಾರೆ. ಅವರು ಭ್ರಷ್ಟಾಚಾರ ಮಾಡದೇ ಜೈಲಿಗೆ ಹೋಗಿದ್ದಾರೆ. ಹೀಗಾಗಿ ನೀವು ಅವರನ್ನೇ ಕೇಳಿ ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ, ಗಡಿ ಬಿಡಿ ಮಾಡಬೇಡಿ ಎಂದ ಯತ್ನಾಳ್, ಬಿಜೆಪಿ ಸೇರ್ಪಡೆಗೆ ನಾನು ಯಾರನ್ನ ಭೇಟಿಯಾಗಲ್ಲ. ಬಿಜೆಪಿ ಸೇರ್ಪಡೆಗೆ ಯಾರದ್ದೂ ಕೈಕಾಲು ಹಿಡಿಯಲ್ಲ. ಯಾರಿಗಾದರೂ ಅವಶ್ಯಕತೆ ಬಿದ್ದಾಗ ಕರೆಯುತ್ತಾರೆ. ಇಲ್ಲವಾದ್ರೇ ಪಕ್ಷ ಕಟ್ಟೋದು ಅಂತಾ ಹೇಳಿದೀನಿ. ಉಪ ಚುನಾವಣೆ ಪ್ರಚಾರಕ್ಕೆ ಹೋಗೋದರ ಬಗ್ಗೆ ನೋಡೋಣ. ಅಲ್ಲಿ ಕಾರ್ಯಕರ್ತರ ಜೊತೆಗೆ ಮಾತಾಡ್ತಿದೀನಿ. ನಮಗೆ ಭ್ರಷ್ಟ ಕಾಂಗ್ರೆಸ್ ಪಕ್ಷವನ್ನ ಸೋಲಿಸಬೇಕಿದೆ. ಸಾಬರ ಕಾಂಗ್ರೆಸ್ ಸೋಲಿಸಬೇಕಾಗಿದೆ ಎಂದು ಯತ್ನಾಳ್ ಟೀಕಿಸಿದ್ದಾರೆ.
ಸಿಎಂ ಸಿದ್ದರಾಮಯ್ಯರ ಸರ್ಕಾರ ಪಾಕಿಸ್ತಾನದೊಳಗಿನ ಒಂದು ಸರ್ಕಾರ ಇದ್ದಂಗಿದೆ ಎಂದ ಯತ್ನಾಳ್, ಕಾಂಗ್ರೆಸ್ ಸರ್ಕಾರವನ್ನ ಪಾಕಿಸ್ತಾನದ ಸರ್ಕಾರಕ್ಕೆ ಹೋಲಿಸಿ ಟೀಕಿಸಿದ್ದಾರೆ. ಬಜೆಟ್ನಲ್ಲಿ ಎಲ್ಲಾ ಅವರಿಗೆ ಕೊಟ್ಟಿದ್ದಾರೆ.
ಅವರ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಾರೆಂತೆ, ಪಿಎಸ್ಐ ಟ್ರೈನಿಂಗ್, ಸಿಬಿಎಸ್ಸಿ ಶಾಲೆ ಮಾಡೋದು, ಉರ್ದು ಶಾಲೆಗೆ ಪ್ರೋತ್ಸಾಹ ಕೊಡೊದು. ಇದೇನಾ ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾಡುವ ಬಜೆಟ್? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.
ರಾಜ್ಯದ ಬಜೆಟ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ಅನುದಾನ ನೀಡಿರುವಷ್ಟು ಪಾಕಿಸ್ತಾನದಲ್ಲಿಯೂ ಕೊಟ್ಟಿಲ್ಲ. ಇಂತಹ ಮುಖ್ಯಮಂತ್ರಿಯಾಗಿದ್ದು, ಇಂತಹ ಸರ್ಕಾರ ಇದ್ದಿದ್ದು ದುರಂತ. ಕರ್ನಾಟಕದಲ್ಲಿ ಈ ಸರ್ಕಾರ ಹೋಗಬೇಕಿದೆ. ಈ ಸರ್ಕಾರ ಹೋದ ಮೇಲೆ ಭ್ರಷ್ಟ ಮಾಜಿ ಸಿಎಂ ಮಗ ಬರಬಾರದು. ಅದರ ಚಿಂತೆ ನಮಗೆ. ಅವನು ಮಹಾ ಭ್ರಷ್ಟ, ಇವರೂ ಸಹ ಭ್ರಷ್ಟರಾಗಿದ್ದಾರೆ.. ಎನು ಮಾಡಬೇಕು? ಎಂದು ಹೆಸರು ಹೇಳದೆ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.