ಬೆಂಗಳೂರು: ಕೇರಳದಲ್ಲಿ ತೀವ್ರ ಲಾಬಿ ಮತ್ತು ಆಂತರಿಕ ಒತ್ತಡದ ನಡುವೆ ಸಿಎಂ ಆಯ್ಕೆ ಕಗ್ಗಂಟನ್ನು ಬಗೆಹರಿಸಿದ ಕಾಂಗ್ರೆಸ್ ಹೈಕಮಾಂಡ್ ಗೆ ಈಗ ನೆರೆಯ ಕರ್ನಾಟಕ ಮುಂದಿನ ಸವಾಲು ಆಗಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬವಾದ ಮೇ 15 ರಂದು ಮುಖ್ಯಮಂತ್ರಿ ಪಟ್ಟ ಸಿಗುವ ವಿಶ್ವಾಸದಲ್ಲಿ ಅವರ ಅಭಿಮಾನಿಗಳಿದ್ದರು. ಆದರೆ, ಈ ನಿರೀಕ್ಷೆಯೂ ಹುಸಿಯಾಗಿದ್ದು, ಯಾವಾಗ ಸಿಡಿದ್ದೇಳುತ್ತಾರೋ ಗೊತ್ತಿಲ್ಲ.
ನವೆಂಬರ್ನಲ್ಲಿ ಪ್ರಮುಖ ಚರ್ಚೆಯೊಂದು ನಡೆದಿತ್ತು. ಸಂಭಾವ್ಯ ನಾಯಕತ್ವ ಬದಲಾವಣೆ ಬಗ್ಗೆಗಿನ ಊಹಾಪೋಹಗಳು ರಾಜ್ಯ ಘಟಕದಲ್ಲಿ ಅನಿಶ್ಚಿತತೆಗೆ ಕಾರಣವಾಗಿತ್ತು. ಆ ಸಮಯದಲ್ಲಿ, ಕಾಂಗ್ರೆಸ್ ಹೈಕಮಾಂಡ್ ನಿರ್ಣಾಯಕ ಪರಿಹಾರಕ್ಕೆ ಬರದೆ ಬಿಕ್ಕಟ್ಟನ್ನು ತಡೆಯುವಲ್ಲಿ ಯಶಸ್ವಿಯಾಗಿತ್ತು.
ಈಗ ಕೇರಳದ ಸಮಸ್ಯೆ ಹೆಚ್ಚಾಗಿ ಇತ್ಯರ್ಥವಾಗಿರುವುದರಿಂದ ಪಕ್ಷದೊಳಗಿನ ಗಮನವು ಕರ್ನಾಟಕದತ್ತ ತಿರುಗಿದೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಗದ್ದುಗೆ ಗುದ್ದಾಟ ಮತ್ತೊಮ್ಮೆ ತೀವ್ರಗೊಳ್ಳುವ ನಿರೀಕ್ಷೆಯಿದೆ.
ಸಿದ್ದರಾಮಯ್ಯ ಸಂಪುಟ ಪುನರ್ ರಚನೆ ಮತ್ತು ಖಾಲಿ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಒತ್ತಾಯಿಸುತ್ತಿದ್ದರೂ, ಶಿವಕುಮಾರ್ ಈ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಸಿದ್ದರಾಮಯ್ಯ ಆಡಳಿತ ಮತ್ತು ಶಾಸಕಾಂಗ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸುವಲ್ಲಿ ಯಶಸ್ವಿಯಾದರೆ, ಸಚಿವ ಸಂಪುಟ ಪುನರ್ ರಚನೆಯು ಶಿವಕುಮಾರ್ ಅವರ ನಾಯಕತ್ವ ಆಶಯವನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ.
ಇದೇ ವೇಳೆ ಸಿದ್ದರಾಮಯ್ಯ ಬಣವು ಕಾಯುವ ಆಟವಾಡುತ್ತಿದೆ ಎನ್ನಲಾಗುತ್ತಿದೆ. ಆದರೆ ಶಿವಕುಮಾರ್ ಬಣ ಈ ಹಿಂದೆ ಮಾಡಿಕೊಂಡ ಅಧಿಕಾರ ಹಂಚಿಕೆ ಒಪ್ಪಂದವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಹೇಳುತ್ತಲೇ ಬಂದಿದೆ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನಗಳನ್ನು ಬಯಸುವ ಹಲವಾರು ಕಾಂಗ್ರೆಸ್ ಶಾಸಕರು ಪಕ್ಷದ ನಾಯಕತ್ವದ ಮೇಲೆ ಮತ್ತಷ್ಟು ಒತ್ತಡ ಹೇರುತ್ತಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ, ಸರ್ಕಾರದ ಸ್ಥಿರತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ನಿರೀಕ್ಷೆಯಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯ ಹೊರಗೆ ಮತ್ತು ರಾಜ್ಯದ ಹಲವಾರು ಭಾಗಗಳಲ್ಲಿ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಪೋಸ್ಟರ್ಗಳು ಕಾಣಿಸಿಕೊಂಡಿದ್ದು, ಕೆಲವು ಪೋಸ್ಟರ್ಗಳು ಅವರನ್ನು "ಕರ್ನಾಟಕದ ಮುಂದಿನ ಮುಖ್ಯಮಂತ್ರಿ" ಎಂದು ಉಲ್ಲೇಖಿಸಿವೆ. ಮೈಸೂರಿನಲ್ಲಿಯೂ ಶಿವಕುಮಾರ್ ಅವರ ಬೆಂಬಲಿಗರು ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಿ ಹುಟ್ಟುಹಬ್ಬದ ಕೇಕ್ ಅನ್ನು ಕತ್ತರಿಸಿದ್ದಾರೆ. ಒಟ್ಟಾರೇ ರಾಜ್ಯದಲ್ಲಿ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಹೈಕಮಾಂಡ್ ಮುಂದಾಗುವ ಸಾಧ್ಯತೆಯಿದೆ.