ಬೆಂಗಳೂರು: ಬಿಡದಿ ಟೌನ್’ಶಿಪ್ ವಿಚಾರದಲ್ಲಿ ರೈತರಿಂದ ಎರಡು ಏಟು ತಿನ್ನಲೂ ಸಿದ್ದ ಎಂದು ಕೆಲವರು ಹೇಳಿದ್ದಾರೆ. ಅವರು ಮೊದಲು ಏಟು ತಿಂದು ಬರಲಿ ಆಮೇಲೆ ನಾನು ಅಲ್ಲಿಗೆ ಹೋಗುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಾತನಾಡಿದ ದೇವೇಗೌಡರು, ನಾನು ಹಿಂದೆ ಅಳುತ್ತಿದ್ದನ್ನು ಕೆಲವರು ಈಗ ಲೇವಡಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ವ್ಯವಸ್ಥೆಯನ್ನು ನೋಡಿ ನನಗೆ ಈಗ ನಗು ಬರುತ್ತಿದೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಸ್ನೇಹಿತರು ಮತ್ತು ಹಳೆಯ ಸಹೋದ್ಯೋಗಿ. ನಾವಿಬ್ಬರೂ ಜೊತೆಯಾಗಿ ಕೆಲಸವನ್ನು ಮಾಡಿದ್ದೇವೆ.
ಆದರೆ, ಇಲ್ಲಿ ನಡೆಯುತ್ತಿರುವುದನ್ನು ನೋಡಿ ನನಗೆ ಬಹಳ ದುಃಖವಾಗುತ್ತಿದೆ. ಅದೇನೋ ಸಿಎಂ ಆಗಬೇಕು ಎಂದು ಒಡಂಬಡಿಕೆ ಆಗಿದೆಯಂತೆ, ನಿಮ್ಮ ಮುಂದೆ ಮನೋರಂಜನೆ ಮಾಡುತ್ತಿದ್ದಾರೆ. ಬಿಡದಿ ರೈತರ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ಪತ್ರ ಬರೆದ ದೇವೇಗೌಡ
ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ ದೇವೇಗೌಡರು, ಅವರಿಗೆ ಪತ್ರ ಬರೆದಿದ್ದಾರೆ. "ನೀವು ನನ್ನ ಜೊತೆ ಕೆಲಸವನ್ನು ಮಾಡಿದ್ದೀರಿ. ನಿಮ್ಮ ಸಾಮಾಜಿಕ ನ್ಯಾಯದ ಮಾತಿನ ಬಗ್ಗೆ ನನಗೂ ಅರಿವಿದೆ. ಬೆಂಗಳೂರಿನ ಸುತ್ತಮುತ್ತ ಸುಮಾರು ಇಪ್ಪತ್ತು ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿದೆ ಎನ್ನುವ ಅಂಶವನ್ನು ಮುಂದಿಟ್ಟುಕೊಂಡು ತನಿಖೆ ಮಾಡಿ. ಬೆಂಗಳೂರು ಉಸ್ತುವಾರಿ ಹೊತ್ತಿರುವವರ ಒತ್ತಡಕ್ಕೆ ನೀವು ಮಣಿಯಬೇಡಿ. ಬಿಡದಿ ರೈತರ ಸಮಸ್ಯೆಯನ್ನು ಯಾರಿಂದಾದರೂ ಕೇಳಿ ತಿಳಿದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.