ತುಮಕೂರು: 17 ಜನ ಶಾಸಕರನ್ನು ಇಟ್ಕೊಂಡು ಹರೀತಿನಿ, ಹರೀತಿನಿ ಅಂದ್ರೆ ಆಗುತ್ತಾ? ಇನ್ನು ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮಾತಾಡುವುದು ಬೇಡ ಎಂದು ಮುಂದಿನ ಸರ್ಕಾರ ನಮ್ಮದೇ ಎಂದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತುಮಕೂರಿನ ಸಾರ್ಥಕ ಸೇವೆಯ ಸಮರ್ಪಣೆ ಸಮಾವೇಶದಲ್ಲಿ ಟಾಂಗ್ ಕೊಟ್ಟಿದ್ದಾರೆ.
2028 ಕ್ಕೆ ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಜನತಾದಳ ಹಾಗೂ ಬಿಜೆಪಿಯವರು ಇದನ್ನು ಬರೆದಿಟ್ಟುಕೊಳ್ಳಿ. ಜನರು ಕೂಡ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ಎಂದು ಡಿಸಿಎಂ ಹೇಳಿದ್ದಾರೆ.
ಕೊಟ್ಟ ಕುದುರೆ ಏರಲು ಆಗದ ಕುಮಾರಸ್ವಾಮಿ
ಮೊನ್ನೆ ತಾನೆ ಕುಮಾರಸ್ವಾಮಿಯವರು ಬೆಂಗಳೂರು ನಗರದಲ್ಲಿ ಬಿ ಖಾತೆಯಿಂದ ಎ ಖಾತೆ ಮಾಡಿಸಬೇಡಿ, ನಮ್ಮ ಸರ್ಕಾರ ಬಂದು ಬಿಡುತ್ತದೆ. ನೀವು ಯಾರೂ ದುಡ್ಡು ಕೊಡಲು ಹೋಗಬೇಡಿ. ನಾವು ಮಾಡುತ್ತೇವೆ ಎಂದು ಮಾತಾಡಿದ್ದಾರೆ. ಅದಕ್ಕೆ ಹಿಂದೆಯೇ ನಾನು ಉತ್ತರ ನೀಡಿದ್ದೇ. ಕೊಟ್ಟ ಕುದುರೆಯನ್ನು ಏರಲು ಆಗದವನು ವೀರನೂ ಅಲ್ಲ ಶೂರನೂ ಅಲ್ಲ.
ಅಧಿಕಾರ ಕೊಟ್ಟಾಗ ನಿಮಗೇನೂ ಮಾಡುವುದಕ್ಕೆ ಆಗಲಿಲ್ಲ. ಅಧಿಕಾರ ಇಲ್ಲದೆ ಹೋದಾಗ ಬರೀ ಹದಿನೇಳು ಜನರನ್ನು ಇಟ್ಟುಕೊಂಡು ಹರಿತೀನಿ, ಹರಿತೀನಿ, ಹರಿತೀನಿ ಅಂದ್ರೆ, ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಸಾಧ್ಯ ಇಲ್ಲ. ನಿಮ್ಮ ಶಾಸಕರು ವಿಧಾನಸಭೆಯಲ್ಲಿ ಬಡವರ ಬಗ್ಗೆ ಒಂದಿನವೂ ಮಾತಾಡಿಲ್ಲ. ನಿಮ್ಮಲ್ಲಿರುವಂತಹ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ನಿಮ್ಮ ಹತ್ತಿರ ಸಮಯ ಇಲ್ಲ. ಇನ್ನು ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮಾತಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ಇಡೀ ದೇಶಕ್ಕೆ ಒಂದು ಮಾದರಿ ಸರ್ಕಾರವನ್ನು ಕೊಟ್ಟಿದೆ, ಅದನ್ನು ಉಳಿಸಿಕೊಂಡು ಹೋಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಇರಲಿ. ಪರಿಶ್ರಮ ಇದ್ದ ಕಡೆ ಇತಿಹಾಸ ಸೃಷ್ಟಿ ಆಗುತ್ತದೆ. ನಂಬಿಕೆ ಇದ್ದ ಕಡೆ ಅದ್ಭುತಗಳು ನಡೆಯುತ್ತವೆ. ಸತ್ಯ ಇದ್ದ ಕಡೆ ಗೆಲುವು ಇದ್ದೇ ಇರುತ್ತದೆ ಎಂದು ಹೇಳಿದರು.
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದವರು ನಡೆಸಿದ ಅಧ್ಯಯನದ ಪ್ರಕಾರ, ಕರ್ನಾಟಕದ ಪಂಚ ಗ್ಯಾರಂಟಿಗಳು ಇಡೀ ವಿಶ್ವದಲ್ಲೇ ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆಯನ್ನು ತಂದಂತಹ ಕಾರ್ಯಕ್ರಮಗಳಾಗಿವೆ. ಇವು ವಿಶ್ವಕ್ಕೆ ಒಂದು ಮಾದರಿ ಎಂದರು.
ನಾವು ಅಂದು ಜನಸಾಮಾನ್ಯರ ಜೀವನ ಉಳಿಯಬೇಕು ಎಂದು ಬದ್ದತೆಯಿಂದ ಕೆಲಸ ಮಾಡಿದೆವು. ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಆದಾಯ ಪಾತಳಕ್ಕೆ ಇಳಿದಿದೆ. ಇಂತಹದಕ್ಕೆ ಸಹಾಯ ಮಾಡಬೇಕು ಅಂತಲೇ ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದೆವು. ಈಗ ವಿರೋಧ ಪಕ್ಷಗಳು ಸಹ ನಮ್ಮ ಜನಪರ ಗ್ಯಾರಂಟಿ ಮಾದರಿಯನ್ನೇ ಅನುಸರಿಸುತ್ತಿವೆ ಎಂದರು.
ಎಲ್ಲರ ಗೆಲುವಿಗೆ ಗ್ಯಾರಂಟಿಗಳು ಸ್ಪೂರ್ತಿ
ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಜೊತೆಗೆ ಬಿಜೆಪಿ ಸರ್ಕಾರ ಇರೋ ರಾಜ್ಯಗಳು, ಎಲ್ಲಾ ಸರ್ಕಾರಗಳು ಕೂಡ ನಮ್ಮ ಗ್ಯಾರಂಟಿಗಳನ್ನೇ ಅನುಸರಿಸುತ್ತಿವೆ. ಅವರ ಚುನಾವಣೆ ಜಯಕ್ಕೆ ನಮ್ಮ ಗ್ಯಾರಂಟಿಗಳೇ ಸ್ಫೂರ್ತಿಯಾಗಿವೆ. ವಿರೋಧ ಪಕ್ಷದವರು ಟೀಕೆ ಮಾಡ್ತಾರೆ. ಆ ಟೀಕೆ ನಾವು ಯಾವತ್ತೂ ತಲೆ ಕೆಡಿಸಿಕೊಳ್ಳಲ್ಲ. ಏಕೆಂದರೆ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಮಾತ್ರ ಉಳಿಯುತ್ತವೆ. ನಮ್ಮನ್ನ ಟೀಕೆ ಮಾಡುವ ವಿರೋಧ ಪಕ್ಷದವರಿಗೆ ನಮ್ಮ ಕಾರ್ಯಕ್ರಮಗಳೇ ಉತ್ತರ ಎಂದರು.