ಈ ಕಾಲದಲ್ಲಿ ಮಕ್ಕಳಿಗೆ ಪೋಷಕರೆಂದರೆ ನಿರ್ಲಕ್ಷ್ಯ. ಹೆತ್ತು-ಹೊತ್ತು, ನಾನಾ ಸಂಕಷ್ಟಗಳ ನಡುವೆಯೂ ಪೋಷಕರು ಮಕ್ಕಳಿಗೆ ಕಷ್ಟಗಳು ತಿಳಿಯದಂತೆ ಸಾಕುತ್ತಾರೆ. ಆದರೆ, ದೊಡ್ಡವರಾದ ಬಳಿಕ ವಿದೇಶಕ್ಕೆ ಹಾರುವ ಮಕ್ಕಳು, ನಂತರ ತಂದೆ-ತಾಯಿಯನ್ನು ಬಂದು ನೋಡುವುದರಿಲಿ, ಕನಿಷ್ಟ ಪಕ್ಷ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುವ ಸೌಜನ್ಯವೂ ಇಲ್ಲದಂತಿರುತ್ತಾರೆ.
ಇನ್ನು ಪೋಷಕರ ಆರೋಗ್ಯದಲ್ಲಿ ಏರು-ಪೇರಾದರಂತೂ ಹೇಳುವುದೇ ಬೇಡ, ವೃದ್ಧಾಶ್ರಾಮ, ಆಸ್ಪತ್ರೆಗೆ ಸೇರಿಸಿ ಕೈತೊಳೆದುಕೊಳ್ಳುವವರಿದ್ದಾರೆ. ಪೋಷಕರ ಸೇವೆ ಮಾಡುವ ಮಕ್ಕಳು ಬೆರಳೆಣಿಕೆಯಷ್ಟೇ. ಹಣವಿದ್ದರೂ ಕೂಡ ಜವಾಬ್ದಾರಿ ತೆಗೆದುಕೊಳ್ಳುವ ಗೋಜಿಗೆ ಮಕ್ಕಳು ಹೋಗುವುದೇ ಇಲ್ಲ.
ಆದರೆ, ಇಲ್ಲೊಬ್ಬ ಆಧುನಿಕ ಶ್ರವಣ ಕುಮಾರನಿದ್ದಾನೆ. ಶ್ರವಣ ಕುಮಾರನೆಂದರೆ ನಿಮ್ಲೆಲ್ಲರಿಗೂ ತಿಳಿದಿರಬೇಕು. ಕೈಲಾಗದ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತೊಯ್ದು ಅವರಿಗೆ ತೀರ್ಥಯಾತ್ರೆ ಮಾಡಿಸಿ ಸೇವೆ ಮಾಡಿದ ಕಥೆ. ಇದೇ ಕಥೆಯೊಂದನ್ನು ನಾವಿಲ್ಲಿ ಹೇಳಲು ಹೊರಟಿದಿದ್ದೇವೆ.
ತನ್ನ ತಾಯಿಯ ಆಸೆಯನ್ನು ಪೂರೈಸುವ ಸಲುವಾಗಿ ಇಲ್ಲೊಬ್ಬ ವ್ಯಕ್ತಿ ಹಳೆಯ ಸ್ಕೂಟರ್ ನಲ್ಲಿ ದೇಶ ಸುತ್ತಿಸಿ ತಾಯಿಯ ಇಷ್ಟಾರ್ಥ ನೆರವೇರಿಸುತ್ತಿದ್ದಾನೆ.
ಈತನ ಹೆಸರು ಡಿ.ಕೃಷ್ಣಕುಮಾರ್. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ತಾಯಿಯ ಇಷ್ಟಾರ್ಥ ಪೂರೈಸಲು ಕೈತುಂಬ ವೇತನ ಬರುತ್ತಿದ್ದ ಕೆಲಸವನ್ನು ತೊರೆಯಿದ್ದಾರೆ.
ಕೃಷ್ಣ ಕುಮಾರ್ ಅವರ ತಂದೆ ದಕ್ಷಿಣ ಮೂರ್ತಿ ಸಾವನ್ನಪ್ಪಿ ನಾಲ್ಕು ವರ್ಷವಾಗಿದ್ದು, ತಾಯಿ ಚೂಡರತ್ನ ಮೈಸೂರಿನಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಒಂದು ಬಾರಿ ಮೈಸೂರಿಗೆ ಹೋಗಿದ್ದ ಕೃಷ್ಣಕುಮಾರ್ ಬಳಿ ಚೂಡರತ್ನ ಅವರು ಹಂಪಿ, ಹಳೇಬಿಡು ನೋಡಬೇಕು ಎಂದು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ತಾಯಿಯನ್ನು ಕೇವಲ ಹಳೇಬೀಡು, ಹಂಪಿ ಮಾತ್ರವಲ್ಲ ಇಡೀ ದೇಶವನ್ನೇ ಸುತ್ತಿಸಬೇಕೆಂದು ಕೃಷ್ಣ ಕುಮಾರ್ ನಿರ್ಧರಿಸಿದ್ದಾರೆ. ಇದರಂತೆ ತಮ್ಮ ದ್ವಿಚಕ್ರ ವಾಹನದಲ್ಲಿ ತಾಯಿಯನ್ನು ಕೂರಿಸಿಕೊಂಡು ದೇಶವನ್ನು ಸುತ್ತಿಸುತ್ತಿದ್ದಾರೆ.
ಮೈಸೂರು ಮೂಲದ ಕೃಷ್ಣ ಕುಮಾರ್ ಅವರು 2018ರ ಜನವರಿ ತಿಂಗಳಿನಿಂದಲೂ ತಾಯಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿ ದೇಶ ಸುತ್ತಿಸುತ್ತಿದ್ದಾರೆ. ಈ ವರೆಗೂ 61,527 ಕಿಮೀ ವರೆಗೂ ಸಂಚರಿಸಿದ್ದು, ಈ ಸಂಚಾರ ಇನ್ನೂ ಮುಂದುವರೆದಿದೆ.
ಇದನ್ನೂ ಓದಿ: ಕಲಿಕೆಯ ತಾಣ ಸೊನ್ನ ದಾಸೋಹ ವಿರಕ್ತ ಮಠ: ಅಕ್ಷರ ಜೋಳಿಗೆ ಮೂಲಕ ಶಾಲೆಗಾಗಿ ಭೂಮಿ ಖರೀದಿ, ಶಿವಾನಂದ ಸ್ವಾಮೀಜಿ ನೇತೃತ್ವ
10 ಜನರ ಕುಟುಂಬವನ್ನು ಪೋಷಿಸಲು ಅಡುಗೆಮನೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದರಿಂದ ನನ್ನ ತಾಯಿಗೆ ಜಗತ್ತನ್ನು ನೋಡುವ ಅವಕಾಶ ಸಿಗಲಿಲ್ಲ. ಒಮ್ಮೆ ಅವರು ಹತ್ತಿರದ ದೊಡ್ಡ ದೇವಾಲಯಗಳಿಗೂ ಭೇಟಿ ನೀಡಿಲ್ಲ ಎಂದು ಹೇಳಿದಾಗ ದುಃಖವಾಗಿತ್ತು. ಹೀಗಾಗಿಯೇ ತಾಯಿಯನ್ನು ದೇಶ ಸುತ್ತಿಸಬೇಕೆಂದು ನಿರ್ಧರಿಸಿದ್ದೆ. ಬುಧವಾರ ಮಧುರೈ ತಲುಪಿದ ಕೃಷ್ಣ ಕುಮಾರ್ ಹಾಗೂ ಅವರ ತಾಯಿ, ನಂತರ ಮೀನಾಕ್ಷಿ ದೇವಸ್ಥಾನ, ಅಲಗರ್ ಕೋವಿಲ್, ತಿರುಪರಗುಂಡ್ರಂ ಮತ್ತು ಕಲ್ಲಾಗರ್ ದೇವಸ್ಥಾನಕ್ಕೆ ಭೇಟಿ ನೀಡಿದರು.
ನಮ್ಮದು ಅವಿಭಕ್ತ ಕುಟುಂಬ. "ನನ್ನ ಅಜ್ಜಿ ಮತ್ತು ಇತರ ಸಂಬಂಧಿಕರು ಕೂಡ ನಮ್ಮೊಂದಿಗೆ ಇದ್ದರು, ನನ್ನ ತಾಯಿ ಇಡೀ ದಿನ ಮನೆ ಸ್ವಚ್ಛಗೊಳಿಸಲು ಮತ್ತು ನಮಗೆ ಅಡುಗೆ ಮಾಡುತ್ತಿದ್ದರು. ನನ್ನ ತಂದೆಯ ನಿಧನದ ನಂತರ ನಾನು ಅವರನ್ನು ಬೆಂಗಳೂರಿಗೆ ಕರೆದೊಯ್ದೆ, ಒಮ್ಮೆ, ಸಾಮಾನ್ಯವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮನೆಯ ಹತ್ತಿರದಲ್ಲೇ ಇದ್ದ ಕೆಲ ದೇವಾಲಯಗಳನ್ನೂ ಕೂಡ ನಾನು ನೋಡಿಲ್ಲ ಎಂದು ಹೇಳಿದ್ದರು. ಈ ವೇಳೆ ನನಗೆ ಬಹಳ ನೋವಾಗಿತ್ತು.
ನಂತರ ಕಾರ್ಪೋರೇಟ್ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದ ನಾನು ಕೆಲಸ ತೊರೆದು, ತಾಯಿಯನ್ನು ದೇಶ ಸುತ್ತಿಸಬೇಕೆಂದು ನಿರ್ಧರಿಸಿದೆ. ಜವರಿ 14, 2018ರಿಂದ ನಮ್ಮ ಪ್ರಯಾಣ ಆರಂಭವಾಗಿತ್ತು. ಇಂದಿಗೂ 'ಮಾತೃ ಸೇವಾ ಸಂಕಲ್ಪ ಯಾತ್ರೆ' ಮುಂದುವರೆದಿದೆ. ಈ ಪ್ರಯಾಣದ ಮೂಲಕ, ನಾನು ಹೆತ್ತವರೊಂದಿಗೆ ಸಮಯ ಕಳೆಯುವ ಮತ್ತು ವೃದ್ಧಾಪ್ಯದಲ್ಲಿ ಅವರನ್ನು ನೋಡಿಕೊಳ್ಳುವ ಮಹತ್ವದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಬಯಸುತ್ತಿದ್ದೇನೆ. ಪ್ರಯಾಣಕ್ಕೆ ನನ್ನ ಮೊದಲ ಉಳಿತಾಯದ ಹಣವನ್ನು ಬಳಸುತ್ತಿದ್ದೇನೆ. ಯಾರಿಂದಲೂ ಹಣ ಸ್ವೀಕರಿಸಿ ನಾನು ಪ್ರಯಾಣಿಸುತ್ತಿಲ್ಲ ಎಂದು ಕೃಷ್ಣ ಕುಮಾರ್ ಹೇಳಿದ್ದಾರೆ.
ಈ ವೇಳೆ ಮಧ್ಯೆ ಪ್ರವೇಶಿಸಿ ಹೆಮ್ಮೆಯಿಂದ ಮಾತನಾಡಿದ ಚೂಡರತ್ನ ಅವರು, ನಾನು ಈಗ ತುಂಬಾ ತೃಪ್ತಿ ಮತ್ತು ಬಲಶಾಲಿಯಾಗಿದ್ದೇನೆ. ಈ ಪ್ರವಾಸದಲ್ಲಿ ನನಗೆ ಯಾವುದೇ ಆಯಾಸಗಳಾಗಿಲ್ಲ. ನನ್ನ ಅರ್ಧದಷ್ಟು ಜೀವನವನ್ನು ನಾಲ್ಕು ಗೋಡೆಗಳ ನಡುವೆ ಕಳೆದ ನಂತರ, ನಮ್ಮ ರಾಷ್ಟ್ರದ ಅದ್ಭುತಗಳನ್ನು ವೀಕ್ಷಿಸುವ ಈ ಅವಕಾಶವು ನನಸಾಗಿದೆ ಎಂದು ತಿಳಿಸಿದ್ದಾರೆ.