ಪರ್ತ್: ಭಾರತೀಯ ಪತ್ರಕರ್ತನ ಮೇಲೆ ಕೋಪಗೊಂಡು ವಾಗ್ವಾದ ನಡೆಸಿದ್ದ ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ ವರ್ತನೆ ಕುರಿತು ಐಸಿಸಿ ಹಾಗೂ ಬಿಸಿಸಿಐಗೆ ವರದಿ ನೀಡಲಾಗಿದೆ.
ನಮ್ಮ ಪ್ರಧಾನ ಸಂಪಾದಕರೊಂದಿಗೆ ಮಾತನಾಡಿದ ನಂತರ, ಈ ಪ್ರಕರಣದ ಕುರಿತು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರಿಗೆ ಪತ್ರ ಬರೆದಿದ್ದೇನೆ. ಇನ್ನು ವರದಿಗಾರ ಜಸ್ವಿಂದರ್ ಸಿಧು ಪ್ರಕರಣದ ಮಾಹಿತಿಯನ್ನು ಐಸಿಸಿಗೆ ನೀಡಿದ್ದಾರೆ ಎಂದು ಎಚ್ಟಿ ಕ್ರೀಡಾ ಸಂಪಾದಕರಾದ ಸುಖ್ವಂತ್ ಬಾಸ್ರಾ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಈ ಪ್ರಕರಣದ ಕುರಿತು ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಗಮನ ಕೇಂದ್ರೀಕರಿಸುವುದು ಪ್ರಮುಖ. ಅಪಾರ್ಥದಿಂದ ಈ ಪ್ರಕರಣ ಸಂಭವಿಸಿದೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಬಿಡುವುದು ಉತ್ತಮಎಂದಿದ್ದಾರೆ. ಭವಿಷ್ಯದಲ್ಲಿ ಈ ರೀತಿಯಾದ ವರ್ತನೆಗಳು ಮರುಕಳಿಸುವುದಿಲ್ಲ. ಆಟಗಾರರೊಂದಿಗೆ ಮಾತನಾಡಿಲ್ಲ. ಆದರೆ, ತಂಡದ ಆಡಳಿತ ಮಂಡಳಿ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.
ಪ್ರಕರಣದ ನಂತರ ಕೊಹ್ಲಿ ನನಗೆ ನೇರವಾಗಿ ಕ್ಷಮೆ ಕೋರಿಲ್ಲ. ಘಟನೆ ನಡೆದ ಸ್ವಲ್ಪ ಸಮಯದ ನಂತರ, `ಕೊಹ್ಲಿ ಕ್ಷಮೆಯಾಚಿಸಿದ್ದಾರೆ. ಮತ್ತೊಂದು ಪತ್ರಿಕೆಯ ವರದಿಯನ್ನು ತಪ್ಪಾಗಿ ಅರ್ಥೈಸಿಕೊಂಡು ನಿಮ್ಮ ವಿರುದ್ಧ ಕೊಹ್ಲಿ ಕೋಪಗೊಂಡಿದ್ದಾರೆ' ಎಂದು ನನ್ನ ಸ್ನೇಹಿತ ಬಂದು ತಿಳಿಸಿದರು. ಆದರೆ, ಕೊಹ್ಲಿ ನನಗೆ ನೇರವಾಗಿ ಕ್ಷಮೆ ಕೋರಿಲ್ಲ ಎಂದು ಪ್ರಕರಣದ ಕೇಂದ್ರ ಬಿಂದುವಾಗಿರುವ ಪತ್ರಕರ್ತ ಜಸ್ವಿಂದರ್ ಸಿಧು ಪ್ರತಿಕ್ರಿಯಿಸಿದ್ದಾರೆ.