ಕ್ರೀಡೆ

ಇಂದಿನಿಂದ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿ

Srinivas Rao BV

ಬೆಂಗಳೂರು: ಅಮೆಚ್ಯೂರ್ ಕಬಡ್ಡಿ ಫೌಂಡೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ಅಮೆಚ್ಯೂರ್ ಕಬಡ್ಡಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ 63ನೇ ಹಿರಿಯರ ರಾಷ್ಟ್ರೀಯ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಚಾಂಪಿಯನ್‍ಶಿಪ್ ಮಂಗಳವಾರದಿಂದ ಆರಂಭವಾಗಲಿದೆ.
ಮಲ್ಲೇಶ್ವರಂ ಮೈದಾನದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ 1200ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಿರಿಮೆ ಹೊಂದಿರುವ ಕ್ರೀಡಾಳುಗಳು ಭಾಗವಹಿಸುತ್ತಿದ್ದು, 33 ರಾಜ್ಯಗಳ ತಂಡಗಳು ಪಾಲ್ಗೊಳ್ಳುತ್ತಿವೆ.
ಅದಕ್ಕಾಗಿ ಮಲ್ಲೇಶ್ವರಂನ ಆಟದ ಮೈದಾನವನ್ನು ಕಬಡ್ಡಿ ಅಖಾಡವನ್ನಾಗಿ ಪರಿವರ್ತಿಸಲಾಗಿದೆ. ಇಡೀ ಟೂರ್ನಿಯು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಳುಗಳಿಗೆ ಮತ್ತು ಅಧಿಕಾರಿಗಳಿಗೆ ಉತ್ಕೃಷ್ಟವಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಸಿಂಥೆಟಿಕ್ ಮ್ಯಾಟ್ ಅಳವಡಿಸಲಾಗಿದ್ದು, 25 ಸಾವಿರ ಪ್ರೇಕ್ಷಕರಿಗೆ ಪಂದ್ಯಗಳನ್ನು ವೀಕ್ಷಿಸಲು ಅನುಕೂಲ ಮಾಡಿಕೊಡಲಾಗಿದೆ.
ಮಳೆಯಿಂದ ರಕ್ಷಣೆಗೆ ಛಾವಣಿ ಹಾಕಿಸಲಾಗುತ್ತಿದೆ. ಪಂದ್ಯಗಳಿಗಾಗಿ ಆರು ಅಖಾಡಗಳು ಸಿದ್ಧವಾಗಿವೆ. ಟೂರ್ನಿಯು ಲೀಗ್, ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಒಟ್ಟು 6 ಗುಂಪುಗಳನ್ನಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ ಲೀಗ್ ಮಾದರಿಯ ಪಂದ್ಯಗಳು ನಡೆಯಲಿವೆ. ಪ್ರತಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರುವ ಅಗ್ರ 2 ತಂಡಗಳು ಪ್ರೀ ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಇಡಲಿವೆ. ಅಲ್ಲಿಂದ ಮುಂದಕ್ಕೆ ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮೂಲಕ ಅಗ್ರ ಎರಡು ತಂಡಗಳು ಫೈನಲ್‍ ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಚಾಂಪಿಯನ್ ತಂಡವು ರೂ. 3 ಲಕ್ಷ ಬಹುಮಾನ ಹಾಗೂ ಪಾರಿತೋಷಕಕ್ಕೆ ಭಾಜನವಾಗಲಿದೆ.

SCROLL FOR NEXT