ಕ್ರೀಡೆ

ಪೋಲಿಯೋ ವಿರುದ್ಧ ಹೋರಾಡಿ ಪ್ಯಾರಾಲಿಂಪಿಕ್ ಪದಕ ಗೆದ್ದ ವರುಣ್ ಸಿಂಗ್ ಭಾಟಿ ಯಶೋಗಾಥೆ

Raghavendra Adiga

ನವದೆಹಲಿ: ವರುಣ್ ಸಿಂಗ್ ಭಾಟಿ ಚಿಕ್ಕ ವಯಸ್ಸಿನಲ್ಲಿಯೇ ಪೋಲಿಯೊದಿಂದ ಬಳಲುತ್ತಿದ್ದ.  ಆದರೆ ಅವನಲ್ಲಿನ ಉತ್ಸಾಹ, ಧೈರ್ಯ, ಸಾಹಸಗಳು ಅವನನ್ನಿಂದು  ಕ್ರೀಡಾ ಜಗತ್ತಿನಲ್ಲಿ ಸಾಕಷ್ಟು ಎತ್ತರಕ್ಕೇರುವಂತೆ ಮಾಡಿದೆ.  ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಸ್ಕ್ವಾಷ್ ಆಟಗಾರ ಸೌರವ್ ಘೋಸಾಲ್ ಆಯೋಜಿಸಿದ್ದ "ದಿ ಫಿನಿಶ್ ಲೈನ್" ನ ಆರನೇ ಎಪಿಸೋಡ್ ನಲ್ಲಿ , 25 ವರ್ಷ ವಯಸ್ಸಿನವರುಣ್ ಸಿಂಗ್  ತಮ್ಮ ಅಂಗವೈಕಲ್ಯವನ್ನು ಹೇಗೆ ಮೆಟ್ಟಿ ನಿಂತರು? 2016 ರಲ್ಲಿ ಪ್ಯಾರಾಲಿಂಪಿಕ್ ಕಂಚಿನ ಪದಕ ವಿಜೇತರಾದರು ಎಂದು ವಿವರಿಸಿದ್ದಾರೆ,

ತನ್ನ ಮೊದಲ ಪ್ಯಾರಾಲಿಂಪಿಕ್ಸ್‌ಗಾಗಿ ರಿಯೊಗೆ ತೆರಳಿದ್ದ ವರುಣ್  ಭಾರತಕ್ಕಾಗಿ ಪದಕ ಗೆದ್ದಾಗ ತನಗೆ ಹೇಗೆ ಅನಿಸಿತು ಎಂದು ಹೇಳಿಕೊಂಡಿದ್ದಾರೆ.

"ಒಲಿಂಪಿಕ್ ಕ್ರೀಡಾಂಗಣದಲ್ಲಿ ಸ್ಪರ್ಧಿಸುವುದು 2012 ರಿಂದ ನನ್ನ ಕನಸಾಗಿತ್ತು. ಅಲ್ಲಿಯೇ ಅತ್ಯುತ್ತಮ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ. ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಯಾವುದೇ ಕ್ರೀಡಾಪಟುವಿಗೆ ವೇದಿಕೆಯಾಗಿದೆ.  ಆ ಕ್ಷಣಕ್ಕಾಗಿ ನಾವು ನಮ್ಮ ಇಡೀ ಜೀವನದುದ್ದಕ್ಕೂ ತರಬೇತಿ ಪಡೆಯುತ್ತೇವೆ. ಪ್ಯಾರಾಲಿಂಪಿಕ್ಸ್ 2016 ನನ್ನ ನೆಚ್ಚಿನ ಪಂದ್ಯಾವಳಿ ಮತ್ತು ಅದು ನಾನು ಪದಕ ಗೆದ್ದ ಕಾರಣಕ್ಕಲ್ಲ  ಆದರೆ ನಾನು ಅಲ್ಲಿದ್ದಾಗ, ನಾನು ತುಂಬಾ ಶಾಂತಿಯನ್ನು ಅನುಭವಿಸಿದೆ. ಉದ್ವಿಗ್ನನಾಗಿರಲಿಲ್ಲ. ಸ್ಪರ್ಧೆಯಲ್ಲಿ ನಾನು ಬಯಸಿದಂತೆ ನಾನು ಪ್ರದರ್ಶನ ನೀಡಿದ್ದೇನೆ. ಆ ಪಂದ್ಯಾವಳಿಯ ನೆನಪುಗಳು ನನ್ನ ಮನಸ್ಸಿನಲ್ಲಿ ಇನ್ನೂ ತಾಜಾವಾಗಿವೆ, 

ಯಾರೊಬ್ಬರು ತಾವೇನಾದರೂ ಸಾಧಿಸಬೇಕಾಗಿದ್ದರೆ ಮೊದಲು ವ್ಯಕ್ತಿಯ ಮನಸ್ಸಿನಲ್ಲಿ ಗುರಿ ಸ್ಪಷ್ಟವಾಗಿರಬೇಕು ಎಂದು ಹೈ ಜಂಪರ್ ವರುಣ್ ಹೇಳಿದ್ದಾರೆ.

"ನಾನು ನನ್ನ ಸಾಮರ್ಥ್ಯಗಳ ಮೇಲೆ ಹೆಚ್ಚು ಗಮನಹರಿಸಿದ್ದೇನೆ ಮತ್ತು ನನ್ನ ಋಣಾತ್ಮಕ  ಅಂಶಗಳ ಮೇಲಲ್ಲ. ನಾನು ಸಕಾರಾತ್ಮಕವಾಗಿರಲು ಇಷ್ಟಪಡುತ್ತೇನೆ. ಯಾರಾದರೂ ಏನನ್ನಾದರೂ ಸಾಧಿಸಲು ಬಯಸಿದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ಗುರಿ ಸ್ಪಷ್ಟವಾಗಿರಬೇಕು. ನಿಮಗೆ ಗುರಿ ಇಲ್ಲದಿದ್ದರೆ ನಿಮಗೆ ಮೊದಲ ಹೆಜ್ಜೆ ಇಡಲು ಸಾಧ್ಯವಾಗುವುದಿಲ್ಲ ಮತ್ತು ಎಲ್ಲವೂ ಮೊದಲ ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಹೈಜಂಪ್ ಹೊರತುಪಡಿಸಿ ಬೇರೆ ಏನನ್ನೂ ಮಾಡಲು ನಾನು ಬಯಸಲಿಲ್ಲ, ಹಾಗಾಗಿ ನಾನು ಹೇಗೆ ಉತ್ತಮವಾದದ್ದನ್ನು ಸಾಧಿಸಬಹುದು ಎಂಬ ಬಗ್ಗೆ ಯೋಚಿಸುತ್ತಲೇ ಇದ್ದೆ. ನನ್ನ ತಪ್ಪುಗಳಿಂದ ನಾನು ಕಲಿತಿದ್ದೇನೆ. ತಪ್ಪುಗಳಿಂದ ಒಬ್ಬರು ಸಾಕಷ್ಟು ಪಾಠಗಳನ್ನು ಕಲಿಯಲು ಸಾಧ್ಯವಿದೆ.

ಆಗಸ್ಟ್ 28 ರಂದು ಭಾರತದ ಏಕೈಕ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರೊಂದಿಗೆ ಮೊದಲ ಅತಿಥಿಯಾಗಿ ಪ್ರಾರಂಭವಾದ ಈ ಸರಣಿಯನ್ನು ಭಾರತದ ಪ್ರಮುಖ ಕ್ರೀಡಾ ಮಾರುಕಟ್ಟೆ ಸಂಸ್ಥೆ ಬೇಸ್‌ಲೈನ್ ವೆಂಚರ್ಸ್ನಿರ್ಮಾಣ ಮಾಡಿದೆ.

ಅಕ್ಟೋಬರ್ 2 ರ ಶುಕ್ರವಾರ ಸಂಜೆ 6 ಗಂಟೆಗೆ ಬೇಸ್‌ಲೈನ್ ವೆಂಚರ್ಸ್‌ನ ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳಲ್ಲಿ "ದಿ ಫಿನಿಶ್ ಲೈನ್" ನ ಆರನೇ ಸಂಚಿಕೆ ಪ್ರಸಾರವಾಗಲಿದೆ.

ದಿ ಫಿನಿಶ್ ಲೈನ್‌ನ ಮೊದಲ ಸೀಜನ್ ನಲ್ಲಿ ಎಂಟು ಭಾಗಗಳಿದ್ದು , ಇದರಲ್ಲಿ ಪ್ರತಿಯೊಂದು ಕಂತುಗಳಲ್ಲಿ ಭಾರತೀಯ ಕ್ರೀಡೆಗಳಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಮರುಸೃಷ್ಟಿ ಮಾಡುವುದಕ್ಕಾಗಿ ಒಬ್ಬ ಕ್ರೀಡಾ ಸಾಧಕರನ್ನು ಆಹ್ವಾನಿಸಲಾಗುತ್ತದೆ. ಅಭಿನವ್ ಬಿಂದ್ರಾ, ವಿಶ್ವನಾಥನ್ ಆನಂದ್, ದಿನೇಶ್ ಕಾರ್ತಿಕ್, ಪಂಕಜ್ ಅಡ್ವಾಣಿ, ಸ್ಮೃತಿ ಮಂಧಾನ, ಲಿಯಾಂಡರ್ ಪೇಸ್, ​​ಪರುಲ್ ಪರ್ಮಾರ್ ಮತ್ತು ವರುಣ್ ಸಿಂಗ್ ಭಾಟಿ    ಈ ಎಂಟು ಮಂದಿ ಸಾಧಕರಾಗಿದ್ದಾರೆ.

SCROLL FOR NEXT