ಹಾಗಂದುಕೊಳ್ಳುವುದೇ ತಪ್ಪು. ನಾನು ಎಲ್ಲ ಸಂದರ್ಭದಲ್ಲೂ ಸರಿಯಾದುದನ್ನೇ ಮಾಡಿರುತ್ತೇನೆ. ಯಾವತ್ತೂ ತಪ್ಪು ಮಾಡುವುದೇ ಇಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ. ಯಾರಿಗೂ ತೊಂದರೆ ಕೊಟ್ಟಿಲ್ಲ. ಆದರೂ ನನಗೇ ಎಲ್ಲರೂ ಅನ್ಯಾಯ ಮಾಡುತ್ತಾರೆ. ನನ್ನ ಪಾಡಿಗೆ ನಾನಿದ್ದರೂ ನನಗೇ ತೊಂದರೆ ಕೊಡುತ್ತಾರೆ. ಅವರಿಗೆಲ್ಲ ನನ್ನ ಕಂಡರೆ ದ್ವೇಷ....ಹೀಗೆ ಏನೇನೋ. ಯಾರನ್ನೇ ಕೇಳಿ ನೋಡಿ. ಎಲ್ಲರೂ ಇದನ್ನೇ ಹೇಳುತ್ತಾರೆ. ಯಾವತ್ತೂ, ಏನೇ ಆದರೂ, ಎಂಥದ್ದೇ ಸಂದರ್ಭದಲ್ಲೂ ನಾನು ತಪ್ಪು ಮಾಡಿದ್ದೇನೆ. ನನ್ನಿಂದ ಪ್ರಮಾದ ಆಗಿಹೋಗಿದೆ. ಅವರು ಹಾಗೆ ವರ್ತಿಸಲು ನನ್ನ ಅಹಿತ ಮಾತೇ ಕಾರಣ. ನನ್ನ ಸ್ವಭಾವ ಸರಿ ಇಲ್ಲ. ನಾನೂ ತಿದ್ದಿಕೊಳ್ಳುವುದು ಇದೆ. ಹೀಗೆ ಯಾರೊಬ್ಬರೂ ಹೇಳುವುದನ್ನು ಕೇಳಿಯೇ ಇಲ್ಲ. ಹಾಗಾದರೆ ಈ ಸಮಾಜದಲ್ಲಿ ಯಾರದ್ದೂ ತಪ್ಪು ಇರುವುದೇ ಇಲ್ಲ. ಎಲ್ಲರೂ ಸರಿಯನ್ನೇ ಮಾಡಿರುತ್ತಾರೆ. ಹಾಗಾದರೆ ತಪ್ಪು ಯಾರದ್ದು? ಅಷ್ಟಕ್ಕೂ ಸಮಸ್ಯೆಗಳು, ವೈಮನಸ್ಯ ಹುಟ್ಟುವುದಾದರೂ ಏತಕ್ಕೆ? ಎಲ್ಲ ಸಂದರ್ಭದಲ್ಲೂ ಸನ್ನಿವೇಶವನ್ನು ನಾವು ನಮ್ಮ ಮೂಗಿನ ನೇರಕ್ಕೇ ವ್ಯಾಖ್ಯಾನಿಸಿಕೊಂಡಿರುತ್ತೇವೆ. ಎಲ್ಲ ಸಂದರ್ಭದಲ್ಲೂ ಲಾಭ ನನಗೇ ದಕ್ಕಬೇಕು. ಅದು ಯಾವುದೇ ರೀತಿಯದ್ದಾಗಿರಲಿ, ಅಂತಿಮ ಜಯ ಎಂಬುದು ನನಗೇ ಮೀಸಲಾಗಿರಬೇಕು. ಎಲ್ಲರೂ ನನ್ನ ಮಾತನ್ನೇ ಕೇಳಬೇಕು. ನನ್ನನ್ನೇ ಹೊಗಳಬೇಕು. ನನ್ನನ್ನೇ ಎಲ್ಲರೂ ಓಲೈಸಬೇಕು. ಹೀಗೆ ಬೇಕುಗಳ ಬಯಕೆಗೆ ಮಿತಿಯೇ ಇರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಡೆದಾಗ ಇನ್ನೊಬ್ಬರ ಮೇಲೆ ಆರೋಪ, ಅಸಮಾಧಾನ, ಆಕ್ರೋಶ ಹೀಗೆ ಎಲ್ಲವೂ ಹುಟ್ಟಿಕೊಳ್ಳುತ್ತದೆ. ಒಂದು ನೆನಪಿಟ್ಟುಕೊಳ್ಳಿ ನಿಮಗೆ ನಿಮ್ಮ ಹಿತ ಹೇಗೆ ಮುಖ್ಯವಾಗಿರುತ್ತದೋ ಇತರರಿಗೂ ಅವರವರ ಹಿತ ಮುಖ್ಯವಾಗಿರುತ್ತದೆ. ಅದಕ್ಕೆ ತಕ್ಕಂತೆಯೇ ಎಲ್ಲರೂ ಯೋಚಿಸುತ್ತಿರುತ್ತಾರೆ. ಇನ್ನೂ ಮುಖ್ಯವಾದುದೆಂದರೆ ಎಲ್ಲರೂ ಎಲ್ಲ ಸನ್ನಿವೇಶದಲ್ಲೂ ಸರಿಯಾಗಿಯೇ ಇರುತ್ತಾರೆ ಎಂಬುದು ಭ್ರಮೆ. ಇತರರ ಸ್ಥಾನದಲ್ಲಿ ನಿಂತು ಯೋಚಿಸುವುದನ್ನು ರೂಢಿಸಿಕೊಂಡರೆ ಯಾರೂ ಕೆಟ್ಟವರಾಗಿ ಕಾಣುವುದೇ ಇಲ್ಲ.
-ಸಹನೆ