ಪ್ರಧಾನ ಸುದ್ದಿ

ಮುಂದೈತೆ ಸಂಕಟ, ಕಾದೈತೆ ನೀರಿನ ಶಾಕ್!

ನವದೆಹಲಿ: ರಾಜ್ಯದ ಮುಂದಿರುವ ಸದ್ಯದ ಬರಗಾಲಕ್ಕಿಂತ ಮತ್ತಷ್ಟು ಕಠಿಣವಾದ ದಿನಗಳು ಮುಂದೆ ಬರಲಿದೆ. ಈಗ ಮಳೆಯಾಧಾರಿತ ಪ್ರದೇಶದಲ್ಲಿ ಆವರಿಸಿರುವ ಬರಗಾಲವು ಬರುವ
ದಿನಗಳಲ್ಲಿ ನೀರಾವರಿ ಪ್ರದೇಶಗಳಿಗೂ ವ್ಯಾಪಿಸಲಿದೆ.

ಏಕೆಂದರೆ ಮಳೆ ಕೊರತೆಯಿಂದಾಗಿ ರಾಜ್ಯದ 14 ಜಲಾಶಯಗಳ ಪೈಕಿ 13 ಜಲಾಶಯಗಳಲ್ಲಿನ ನೀರಿನ ಸಂಗ್ರಹ ಕಳೆದ ಸಾಲಿನ ಸಂಗ್ರಹಕ್ಕಿಂತ ಕಡಿಮೆ ಇದೆ. ಅಷ್ಟೇ ಅಲ್ಲ, ಕಳೆದ ಹತ್ತು ವರ್ಷಗಳ ಸರಾಸರಿ ಸಂಗ್ರಹಕ್ಕಿಂತಲೂ ಕಡಿಮೆ ಇದೆ. ಆತಂಕದ ವಿಷಯ ಎಂದರೆ ನಾಲ್ಕು ಜಲಾಶಯಗಳಲ್ಲಿ ಕಳೆದ ಸಾಲಿನಲ್ಲಿ ಇದ್ದ ಸಂಗ್ರಹಕ್ಕಿಂತ ಶೇ. 50ರಷ್ಟು ಕಡಿಮೆ ಇದೆ. ಕಳೆದ ಸಾಲಿನಲ್ಲಿ ತುಂಬಿ ತುಳುಕುತಿದ್ದ (ಶೇ.100 ಸಂಗ್ರಹ ಇದ್ದ) ಐದು ಜಲಾಶಯಗಳ ಪೈಕಿ ಮೂರರಲ್ಲಿ ನೀರಿನ ಪ್ರಮಾಣ ಅರ್ಧದಷ್ಟು ತಗ್ಗಿದೆ. ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರು ಪೂರೈಸಿ, ತಮಿಳುನಾಡಿನ ದಾಹವನ್ನು ಇಂಗಿಸುವ ಕಷ್ಣರಾಜ ಸಾಗರ (ಕೆಆರ್‍ಎಸ್) ದಲ್ಲಿ ಶೇ. 55ರಷ್ಟು ಮಾತ್ರ ಸಂಗ್ರಹವಿದೆ.

ಕಳೆದ ಸಾಲಿನಲ್ಲಿ ಜಲಾಶಯ ತುಂಬಿತ್ತು. ಕೆಆರ್‍ಎಸ್‍ನಲ್ಲಿ ನೀರಿನ ಕೊರತೆಯಾದಾಗ ತಮಿಳುನಾಡಿಗೆ ಕಡ್ಡಾಯವಾಗಿ ಬಿಡಲೇಬೇಕಾದ ನೀರಿನ ಪ್ರಮಾಣ ಸರಿದೂಗಿಸುತ್ತಿದ್ದ ಹೇಮಾವತಿ, ಕಬಿನಿ ಜಲಾಶಯಗಳಲ್ಲೂ ನೀರಿನ ಸಂಗ್ರಹ ತಗ್ಗಿದೆ. ರಾಷ್ಟ್ರದ ಎಲ್ಲ 91 ಜಲಾಶಯಗಳ ಮೇಲೆ ನಿಗಾ ಇಡುವ ಕೇಂದ್ರ ಜಲ ಆಯೋಗವು ನೀರಿನ ಸಂಗ್ರಹ ಕುರಿತಂತೆ ಮಾಹಿತಿ ಪ್ರಕಟಿಸಿದೆ. ಇಲ್ಲಿ ಆಗಸ್ಟ್ 27ರ ಸಂಜೆಯವರೆಗೆ ಮಾಹಿತಿ ಲಭಿಸಿದೆ.

ವಿದ್ಯುತ್ ಹೊರೆ:
ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಶೇ.43ಕ್ಕೆ ಇಳಿದಿದೆ. ಅಂದರೆ ಜಲ ವಿದ್ಯುತ್ ಉತ್ಪಾದನೆ ಸಹಜವಾಗಿಯೇ ತಗ್ಗಲಿದ್ದು, ಉಷ್ಣ ವಿದ್ಯುತ್ ಸ್ಥಾವರಗಳನ್ನು ಅವಲಂಬಿಸಬೇಕಾಗುತ್ತದೆ. ಇಲ್ಲವೇ ಹೊರಗಿನಿಂದ ಖರೀದಿ ಮಾಡಬೇಕಾಗುತ್ತದೆ. ಲಿಂಗನಮಕ್ಕಿ ತಳ ಸೇರಿದರೆ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆ ಬೀಳುವುದು ಖಚಿತ. ವಿದ್ಯುತ್ ಉತ್ಪಾದಿಸುವ ಸೂಪ ಜಲಾಶಯದ ನೀರಿನ ಸಂಗ್ರಹವೂ ಶೇ.44ಕ್ಕೆ ಇಳಿದಿದೆ. ಹದಿನಾಲ್ಕು ಜಲಾಶಯಗಳು ಹತ್ತು ವರ್ಷಗಳ ಸರಾಸರಿ ನೀರಿನ ಸಂಗ್ರಹ ಆಗಸ್ಟ್ 27ಕ್ಕೆ ಶೇ.70.42ರಷ್ಟಿದ್ದರೆ, ಪ್ರಸಕ್ತ ಸಾಲಿನ ಸಂಗ್ರಹ ಇದೇ ದಿನ ಸರಾಸರಿ ಶೇ.55.28ಕ್ಕೆ ಇಳಿದಿದೆ.

SCROLL FOR NEXT