ಪ್ರಧಾನ ಸುದ್ದಿ

ಶ್ರೀಶೈಲಂ ಅರಣ್ಯದಲ್ಲಿ ಬೃಹತ್ ಯುರೇನಿಯಮ್ ನಿಕ್ಷೇಪ ಪತ್ತೆ ಹಚ್ಚಿದ ಒಸ್ಮಾನಿಯಾ ವಿವಿ

Guruprasad Narayana

ಒಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಅಣು ಖನಿಜ ನಿರ್ದೇಶನಾಲಯ ಹೈದರಬಾದಿನಿಂದ ನಡೆಸಿದ ಜಂಟಿ ಸಂಶೋಧನೆಯಲ್ಲಿ, ಶ್ರೀಶೈಲಂ ಅರಣ್ಯದಲ್ಲಿ ಬೃಹತ್ ಮೊತ್ತದ ಯುರೇನಿಯಮ್ ಅದಿರು ಗಣಿಯನ್ನು ಪತ್ತೆಹಚ್ಚಿದೆ.

ಆಂಧ್ರ ಪ್ರದೇಶದ ಕಡಪ ಬಳಿಯ ಶ್ರೀಶೈಲಂ ಅರಣ್ಯದಲ್ಲಿ ಪತ್ತೆ ಹಚ್ಚಲಾಗಿರುವ ಈ ಯುರೇನಿಯಮ್ ನಿಕ್ಷೇಪದಿಂದ ಭಾರತದಲ್ಲಿ ಅಣುವಿಕಿರಣ ಕೇಂದ್ರಗಳಿಗೆ ಹೆಚ್ಚಿನ ಶಕ್ತಿ ತುಂಬಲಿದೆ. ಕಡಪ ಪ್ರದೇಶದ ಈ ಗಣಿ ನಿಕ್ಷೇಪ ತೆಲಂಗಾಣ ರಾಜ್ಯಕ್ಕೂ ಹಬ್ಬಿದೆ. ಈ ವಿರಳ ಖನಿಜದ ಗುಣಮಟ್ಟ ಉತ್ತಮವಾಗಿದ್ದು, ಆಸ್ಟ್ರೇಲಿಯಾ, ಕೆನಡಾ ಯುರೇನಿಯಮ್ ಖನಿಜ ಗುಣಮಟ್ಟಕ್ಕೆ ಹೋಲಿಸಬಹುದಾಗಿದೆ.

ತೆಲಂಗಾಣ ಮತ್ತು ಆಂಧ್ರದಲ್ಲಿ ಅಣು ಖನಿಜ ನಿರ್ದೇಶನಾಲಯ ಇದೆ ಮೊದಲ ಬಾರಿಗೆ ಯುರೇನಿಯಮ್ ನಿಕ್ಷೇಪ ಕಂಡುಹಿಡಿದದ್ದೇನಲ್ಲ. ಈ ಹಿಂದೆ ಮಹಬುಬ್ ನಗರ, ನಲಗೊಂದ, ಗುಂಟೂರುಗಳಲ್ಲೂ ಯುರೇನಿಯಮ್ ನಿಕ್ಷೇಪ ಪತ್ತೆ ಹಚ್ಚಿತ್ತು. ಅಧಿಕಾರಿಗಳ ಪ್ರಕಾರ ಈಗ ಕಡಪದಲ್ಲಿ ಪತ್ತೆ ಹಚ್ಚಲಾಗಿರುವ ನಿಕ್ಷೇಪದಲ್ಲೇ ೭ ಲಕ್ಷ ಟನ್ ಯುರೇನಿಯಮ್ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತು ತೆಲಂಗಾಣ ಪ್ರದೇಶದಲ್ಲಿ ೧ ಲಕ್ಷ ಟನ್ ಇದೆ ಎನ್ನಾಲಗಿದ್ದು ಎರಡನ್ನು ಸೇರಿಸಿದರೆ ಭಾರತದ ಒಟ್ಟು ಯುರೇನಿಯಮ್ ನಿಕ್ಷೇಪದ ೨೫% ಭಾಗ ಇದು.

ಶ್ರೀಕಾಕುಲಂ ನಲ್ಲಿ ಯೋಜಿಸಲಾಗಿರುವ ಅಣುಶಕ್ತಿ ಕೇಂದ್ರಕ್ಕೆ ಶ್ರೀಶೈಲಂ ನಿಕ್ಷೇಪವೇ ಬಹುತೇಕ ಯುರೇನಿಯಮ್ ಒದಗಿಸಲಿದೆ ಎನ್ನಲಾಗಿದೆ. ಆದರೆ ಪರಿಸರವಾದಿಗಳು ಈಗಾಗಲೇ ಶ್ರೀಕಾಕುಲಂ ನಲ್ಲಿ ಯೋಜಿಸಲಾಗಿರುವ ಅಣುಶಕ್ತಿ ಕೇಂದ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈಗ ಯುರೇನಿಯಮ್ ನಿಕ್ಷೇಪದ ಪತ್ತೆ ಈ ಪ್ರತಿಭಟನೆಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.

SCROLL FOR NEXT