ಶೃಂಗೇರಿ  
ಪ್ರವಾಸ

ಆಧ್ಯಾತ್ಮದ ಆಲಯ, ಪ್ರಕೃತಿಯ ಅದ್ಭುತ ಸಂಗಮ: ಶೃಂಗೇರಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಏಕೆ?

ಶೃಂಗೇರಿಯ ಪ್ರಮುಖ ಆಕರ್ಷಣೆಯೆಂದರೆ ಕ್ರಿ.ಶ. 1338ರಲ್ಲಿ ನಿರ್ಮಿಸಲಾದ ವಿದ್ಯಾಶಂಕರ ದೇವಾಲಯ. ಇದು ಭಾರತದ ಅತ್ಯಂತ ವಿಶಿಷ್ಟವಾದ ದೇವಾಲಯಗಳಲ್ಲಿ ಒಂದಾಗಿದೆ.

ಕರ್ನಾಟಕದ ಮಲೆನಾಡಿನ ಹಸಿರಿನಲ್ಲಿನೆಲೆಸಿರುವ ಶೃಂಗೇರಿ ರಾಜ್ಯದ ಅತ್ಯಂತ ಪವಿತ್ರ ಹಾಗೂ ಶಾಂತ ಪ್ರವಾಸಿ ತಾಣಗಳಲ್ಲಿ ಒಂದು, ಪಶ್ಚಿಮಘಟ್ಟಗಳ ಅರಣ್ಯ, ತುಂಗಾ ನದಿಯ ತೀರ ಮತ್ತು ವೇದಘೋಷಗಳ ಮಧ್ಯೆ ಬೆಳೆದ ಈ ಪವಿತ್ರ ಕ್ಷೇತ್ರ ಕರ್ನಾಟಕದ ಆಧ್ಯಾತ್ಮಿಕ ಸ್ಥಳವಾಗಿದೆ.

ಧಾರ್ಮಿಕತೆ, ಇತಿಹಾಸ ಮತ್ತು ಪ್ರಕೃತಿಯ ಸೊಬಗು ಒಂದೇ ಕಡೆ ಸೇರುವ ಅಪರೂಪದ ತಾಣವೇ ಶೃಂಗೇರಿ. ಪಾರಂಪರಿಕ ಗ್ರಂಥವಾದ ಮಾಧವೀಯ ಶಂಕರ ವಿಜಯಂ ಪ್ರಕಾರ, ಆದಿ ಶಂಕರಾಚಾರ್ಯರು ಕ್ರಿ.ಶ. 8ನೇ ಶತಮಾನದಲ್ಲಿ ಶೃಂಗೇರಿ ಶಾರದಾ ಪೀಠವನ್ನು ಸ್ಥಾಪಿಸಿದರು. ದಕ್ಷಿಣಾಮ್ನಾಯ ಪೀಠಗಳಲ್ಲಿ ಮೊದಲನೆಯದಾಗಿ ಇದನ್ನು ಪರಿಗಣಿಸಲಾಗುತ್ತದೆ.

ಧಾರ್ಮಿಕ ಯಾತ್ರೆಗಳ ವೇಳೆ ಭಕ್ತರು ಈ ಸ್ಥಳವನ್ನು ಆಯ್ಕೆಮಾಡಲು ಒಂದು ಪ್ರಸಿದ್ಧ ಕತೆ ಇದೆ. ಒಂದು ದಿನ ಶಂಕರಾಚಾರ್ಯರು ಇಲ್ಲಿ ನಡೆದು ಹೋಗುವಾಗ ಬಿಸಿಲಿನಿಂದ ಬಳಲುತ್ತಿದ್ದ ಒಂದು ಗರ್ಭಿಣಿ ಕಪ್ಪೆಯನ್ನು ಒಂದು ನಾಗರಹಾವು ತನ್ನ ಹೆಡೆಯಿಂದ ನೆರಳು ನೀಡಿ ರಕ್ಷಿಸುತ್ತಿರುವ ದೃಶ್ಯ ಕಂಡರು.

ಪ್ರಕೃತಿಯಲ್ಲಿಯೇ ಇರುವ ಶಾಂತಿ ಮತ್ತು ಸಹಜ ಸಹಾನುಭೂತಿಯ ಸಂಕೇತವೆಂದು ಇದನ್ನು ಭಾವಿಸಿ, ಅವರು ಇಲ್ಲಿ ಪೀಠವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿಯೇ ಅವರು ಶ್ರೀಚಕ್ರದ ಮೇಲೆ ಶ್ರೀಗಂಧ ಮರದಿಂದ ನಿರ್ಮಿಸಿದ ಶಾರದಾಂಬಾ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು.

ಶೃಂಗೇರಿ

ವಿದ್ಯಾಶಂಕರ ದೇವಾಲಯದ ಅದ್ಭುತ

ಶೃಂಗೇರಿಯ ಪ್ರಮುಖ ಆಕರ್ಷಣೆಯೆಂದರೆ ಕ್ರಿ.ಶ. 1338ರಲ್ಲಿ ನಿರ್ಮಿಸಲಾದ ವಿದ್ಯಾಶಂಕರ ದೇವಾಲಯ. ಇದು ಭಾರತದ ಅತ್ಯಂತ ವಿಶಿಷ್ಟವಾದ ದೇವಾಲಯಗಳಲ್ಲಿ ಒಂದಾಗಿದೆ.

ದೇವಾಲಯದ ಒಳಭಾಗದಲ್ಲಿ 12 ರಾಶಿಗಳನ್ನು ಪ್ರತಿನಿಧಿಸುವ 12 ಕಂಬಗಳು ಇವೆ. ಈ ದೇವಾಲಯದ ವಿನ್ಯಾಸವು ನಿಖರವಾಗಿದೆ, ಪ್ರತಿ ತಿಂಗಳ ಪ್ರಾರಂಭದಲ್ಲಿ ಬೆಳಗಿನ ಮೊದಲ ಸೂರ್ಯಕಿರಣಗಳು ಆ ತಿಂಗಳಿಗೆ ಹೊಂದುವ ರಾಶಿಯ ಕಂಬದ ಮೇಲೆ ಬೀಳುವಂತೆ ನಿರ್ಮಿಸಲಾಗಿದೆ. ಹೊಯ್ಸಳರ ಶಿಲ್ಪಕಲೆ ಮತ್ತು ವಿಜಯನಗರ ಸಾಮ್ರಾಜ್ಯದ ಗ್ರಾನೈಟ್ ಶೈಲಿ ಎರಡನ್ನೂ ಮಿಶ್ರಣ ಮಾಡಿದ ಅದ್ಭುತ ವಾಸ್ತುಶಿಲ್ಪ ಇಲ್ಲಿದೆ.

ತುಂಗಾ ನದಿ ಮತ್ತು ಪ್ರಕೃತಿ ಸೌಂದರ್ಯ

ಶೃಂಗೇರಿ ಪಟ್ಟಣದ ಮಧ್ಯೆ ಹರಿಯುವ ತುಂಗಾ ನದಿ ಈ ಪ್ರದೇಶದ ಜೀವನಾಡಿಯಾಗಿದೆ. ದೇವಾಲಯದ ಬಳಿ ಮೀನುಗಾರಿಕೆಗೆ ಕಟ್ಟುನಿಟ್ಟಿನ ನಿಷೇಧವಿದೆ. ಇಲ್ಲಿ ಇರುವ ಮೀನುಗಳು ಮನುಷ್ಯರನ್ನು ನೋಡಿದರೆ ಭಯಪಡುವುದಿಲ್ಲ; ಯಾತ್ರಿಕರು ಅಕ್ಕಿ ಅಥವಾ ಪೊಂಗಲ್ ಹಾಕಿದರೆ ಕೈಯಿಂದಲೇ ತಿಂದು ಹೋಗುತ್ತವೆ.

ಇದಲ್ಲದೆ, ಶೃಂಗೇರಿಯ ಸುತ್ತಮುತ್ತಲೂ ಹಲವು ಪ್ರಕೃತಿ ತಾಣಗಳಿವೆ. ಶೃಂಗೇರಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಸಿರಿಮನೆ ಜಲಪಾತ ಪ್ರವಾಸಿಗರನ್ನು ಸೆಳೆಯುವ ಸುಂದರ ಸ್ಥಳವಾಗಿದೆ.

ಹಾಗೆಯೇ “ದಕ್ಷಿಣ ಭಾರತದ ಚೆರಾಪುಂಜಿ” ಎಂದು ಕರೆಯಲ್ಪಡುವ ಅಗುಂಭೆ ಕೂಡ ಇಲ್ಲಿಂದ ಸುಮಾರು 25 ಕಿಮೀ ದೂರದಲ್ಲಿದೆ.

ಆಧ್ಯಾತ್ಮಿಕ ಅನುಭವದ ಕೇಂದ್ರ

ಶೃಂಗೇರಿಯಲ್ಲಿ ಪ್ರತಿದಿನ ನಡೆಯುವ ವೇದಪಾಠ, ಪೂಜೆಗಳು ಮತ್ತು ಅನ್ನದಾನ ಸಾವಿರಾರು ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುತ್ತವೆ. ದೇವಸ್ಥಾನದ ಭೋಜನ ಮಂದಿರಗಳಲ್ಲಿ ಪ್ರತಿದಿನ ಸಾವಿರಾರು ಜನರಿಗೆ ಉಚಿತ ಅನ್ನದಾನ ನೀಡಲಾಗುತ್ತದೆ.

ಶೃಂಗೇರಿ ವಿಶೇಷ ಏಕೆ..?

ಶಾಂತ ವಾತಾವರಣ, ಪರಂಪರೆ, ಪ್ರಕೃತಿ ಸೌಂದರ್ಯ ಮತ್ತು ಆಧ್ಯಾತ್ಮಿಕತೆ—ಈ ನಾಲ್ಕು ಅಂಶಗಳ ಸಮನ್ವಯವೇ ಶೃಂಗೇರಿಯನ್ನು ಕರ್ನಾಟಕದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿಸಿದೆ. ವ್ಯಾಪಾರೀಕರಣದ ಗದ್ದಲದಿಂದ ದೂರವಿರುವ ಈ ಸ್ಥಳ, ಮನಸ್ಸಿಗೆ ಶಾಂತಿ ನೀಡುವ ಅಪರೂಪದ ಧಾರ್ಮಿಕ ಕೇಂದ್ರವಾಗಿದೆ. ಒಟ್ಟಾರೆ ಶೃಂಗೇರಿ ಕೇವಲ ಒಂದು ಪ್ರವಾಸಿ ತಾಣವಲ್ಲ; ಅದು ಸಂಸ್ಕೃತಿ, ಭಕ್ತಿ ಮತ್ತು ಪ್ರಕೃತಿಯ ಜೀವಂತ ಸಂಕೇತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತೀಯ ನೌಕಾಪಡೆ ಅತಿಥಿ 'ಐರಿಸ್ ದೇನಾ' ಯುದ್ಧನೌಕೆಯನ್ನು ಅಮೆರಿಕ ಹೊಡೆದುರುಳಿಸಿದೆ: ಇರಾನ್

ಇರಾನ್‌ನೊಂದಿಗಿನ ಯುದ್ಧ: ಇಸ್ರೇಲ್‌ಗೆ ಭಾರಿ ಆರ್ಥಿಕ ನಷ್ಟ, ವಾರಕ್ಕೆ $ 3 ಬಿಲಿಯನ್ ವೆಚ್ಚ!

T20 ವಿಶ್ವಕಪ್ 2026, 2ನೇ ಸೆಮಿಫೈನಲ್: ಪಿಚ್ ನೋಡಿ ಖುಷಿ ಪಟ್ಟ ಇಂಗ್ಲೆಂಡ್, ಭಾರತಕ್ಕೆ ಆತಂಕ! ಟಾಸ್ ಗೆದ್ದೋನೆ ಬಾಸ್

'ಇದು ನನ್ನ ಮನದ ಆಸೆ': ಸಿಎಂ ಹುದ್ದೆ ತೊರೆದು ರಾಜ್ಯಸಭೆ ಪ್ರವೇಶ ಖಚಿತಪಡಿಸಿದ Nitish Kumar

ವಿಧಾನಸಭೆ ಚುನಾವಣೆಗೂ ಮುನ್ನ ಅಸ್ಸಾಂನ ಮೂವರು ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿ ಸೇರ್ಪಡೆ

SCROLL FOR NEXT