ಬೀಜಿಂಗ್: ಯುದ್ಧಕ್ಕೆ ಸಿದ್ಧ ಎಂಬ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿತನದ್ದು ಎಂದಿರುವ ಚೀನಾ ಸೇನೆ, ಯುದ್ಧದ ಕುರಿತು ಪುಕಾರು ಮಾಡುವುದನ್ನು ಮೊದಲ ನಿಲ್ಲಿಸಲಿ ಎಂದು ಗುರುವಾರ ಹೇಳಿದೆ.
ಜನರಲ್ ಬಿಪಿನ್ ರಾವತ್ ಅವರು ಇತ್ತೀಚಿಗೆ ದೇಶಕ್ಕೆ ಎದುರಾಗುವ ಆಂತರಿಕ ಅಥವಾ ಬಾಹ್ಯ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಇಂದು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೀಪಲ್ಸ್ ಲಿಬ್ರೆರೇಷನ್ ಆರ್ಮಿಯ ವಕ್ತಾರ ಕರ್ನಲ್ ವೂ ಕಿಯಾನ್ ಅವರು, ಭಾರತೀಯ ಸೇನಾ ಮುಖ್ಯಸ್ಥರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿತನದ್ದು ಎಂದಿದ್ದಾರೆ.
ಭಾರತೀಯ ಸೇನೆಯ ಉನ್ನತ ಸ್ಥಾನದಲ್ಲಿರುವವರು ಇತಿಹಾಸದಿಂದ ಪಾಠ ಕಲಿಯಬೇಕು ಮತ್ತು ಯುದ್ಧದ ಕುರಿತು ಪುಕಾರು ಮಾಡುವುದನ್ನು ನಿಲ್ಲಿಸಬೇಕು ವೂ ಹೇಳಿದ್ದಾರೆ.
ವೂ ಅವರು 1962ರ ಭಾರತ-ಚೀನಾ ಯುದ್ಧ ನೆನಪಿಸುತ್ತಾ ಐತಿಹಾಸಿಕ ಪಾಠಗಳಿಂದ ಭಾರತೀಯ ಸೇನೆ ಕಲಿಯಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.
ಈ ಮಧ್ಯೆ ಸಿಕ್ಕಿಂನ ಡೊಂಗ್ಲೊಂಗ್ ನಲ್ಲಿ ನಿಯೋಜಿಸಿರುವ ಸೇನೆಯನ್ನು ಭಾರತ ಹಿಂಪಡೆಯಬೇಕು ಎಂದು ಚೀನಾ ಮತ್ತೊಮ್ಮೆ ಗುಡುಗಿದೆ. ಈ ಪ್ರದೇಶದಿಂದ ಭಾರತೀಯ ಸೇನೆ ಹಿಂದೆ ಸರಿದರೆ ಗಡಿ ಸಮಸ್ಯೆಯನ್ನು ಅರ್ಥಪೂರ್ಣ ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದು. ಡೊಂಗ್ಲಾಂಗ್ ಪ್ರದೇಶದಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳನುಸುಳಿರುವ ಫೋಟೋಗಳು ತಮ್ಮ ಬಳಿ ಇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos