ಸಿಯೊಲ್(ದಕ್ಷಿಣ ಕೊರಿಯಾ):ಭಯೋತ್ಪಾದನೆ ಮತ್ತು ಮೂಲಭೂತೀಕರಣ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗಿದ್ದು ಸಮಾನ ಮನಸ್ಕ ದೇಶಗಳು ಒಟ್ಟಾಗಿ ಭಯೋತ್ಪಾದನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೈಜೋಡಿಸಿ ಕೆಲಸ ಮಾಡುವ ಸಮಯ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದಕ್ಷಿಣ ಕೊರಿಯಾ ಸರ್ಕಾರದಿಂದ ಸಿಯೊಲ್ ಶಾಂತಿ ಪುರಸ್ಕಾರ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಸಮಾರಂಭದಲ್ಲಿ ಮಾತನಾಡಿ, ಈ ಪುರಸ್ಕಾರ ನನಗೆ ವೈಯಕ್ತಿಕವಾಗಿ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಬೇಕಾದ್ದು. ಕಳೆದ 5 ವರ್ಷಗಳಲ್ಲಿ ಭಾರತ ಮಾಡಿರುವ ಸಾಧನೆಗೆ ದೇಶದ 1.3 ಶತಕೋಟಿ ಜನರ ಕೌಶಲ್ಯವೇ ಕಾರಣವಾಗಿದೆ ಎಂದು ಸ್ಮರಿಸಿಕೊಂಡರು.
ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಆಚರಿಸಿಕೊಳ್ಳುತ್ತಿರುವ ವರ್ಷ ಈ ಪ್ರಶಸ್ತಿ ಸಿಕ್ಕಿರುವುದು ನನಗೆ ನಿಜಕ್ಕೂ ಖುಷಿಯಾಗಿದೆ ಎಂದರು.
ದಕ್ಷಿಣಾ ಕೊರಿಯಾದಂತೆ ಭಾರತ ಕೂಡ ವಿಭಜನೆ ಮತ್ತು ಗಡಿ ಭಯೋತ್ಪಾದನೆಗೆ ಸಿಕ್ಕಿ ಅನೇಕ ನೋವು ಮತ್ತು ತೊಂದರೆಗಳನ್ನು ಅನುಭವಿಸಿದೆ. ಶಾಂತಿ ಅಭಿವೃದ್ಧಿಯತ್ತ ನಾವು ನಡೆಸುತ್ತಿರುವ ಪಯಣಕ್ಕೆ ಗಡಿ ಭಾಗದ ಭಯೋತ್ಪಾಜನೆಗಳು ಅಡ್ಡಿಯನ್ನುಂಟುಮಾಡುತ್ತವೆ. ಇದನ್ನು ಹೋಗಲಾಡಿಸಲು ಎಲ್ಲಾ ದೇಶಗಳು ಒಟ್ಟಾಗಿ ಸೇರಿ ಭಯೋತ್ಪಾದನೆಯ ಜಾಲವನ್ನು ತೊಲಗಿಸಬೇಕು. ಹಾಗಾದರೆ ಮಾತ್ರ ನಾವು ದ್ವೇಷದ ಜಾಗದಲ್ಲಿ ಸಾಮರಸ್ಯ ಕಾಣಲು ಸಾಧ್ಯ ಎಂದರು.