ಲಂಡನ್: ಭಾರತ ಮತ್ತು ಪಾಕಿಸ್ತಾನದ ನಡುವಣ ಕಾನೂನು ಹೋರಟಕ್ಕೆ ಕಾರಣವಾಗಿದ್ದ 70 ವರ್ಷಗಳ ಹಿಂದಿನ ಹೈದರಾಬಾದ್ ನಿಜಾಮ ಕಾಲದ ಪ್ರಕರಣವೊಂದರಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದ್ದು, ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ.
ಲಂಡನ್ ನ್ಯಾಷನಲ್ ವೆಸ್ಟ್ ಮಿನ್'ಸ್ಟರ್ ಬ್ಯಾಂಕ್ ನಲ್ಲಿರುವ ಹೈದರಾಬಾದ್ ನಿಜಾಮ್'ಗೆ ಸೇರಿದ 35 ದಶಲಕ್ಷ ಪೌಂಡ್ ಮೌಲ್ಯದಷ್ಟು ಸಂಪತ್ತು ನಮಗೆ ಸೇರಿದ್ದು ಎಂದು ಪಾಕಿಸ್ತಾನ ಹೇಳಿಕೊಂಡು ಬಂದಿತ್ತು. 70 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಕಾನೂನು ಸಮರ ನಡೆಸಿಕೊಂಡು ಬಂದಿದ್ದವು. ಇನ್ನೊಂದು ಕಡೆ ಉಸ್ಮಾನ್ ಅಲಿ ಖಾನ್ ವಂಶಶ್ಥರಾದ ಈಗ ಟರ್ಕಿಯಲ್ಲಿ ವಾಸವಿರುವ ಮುಕ್ರಾಮ್ ಝಾ ಮತ್ತು ಮುಫಾಕಮ್ ಝಾ ಸಹ ಇದರ ಮೇಲೆ ತಮ್ಮ ಹಕ್ಕು ಮಂಡಿಸಿದ್ದರು. ಇದೀಗ ಈ ಸಂಪತ್ತು ಭಾರತಕ್ಕೆ ಸೇರಿದ್ದು ಎಂದು ಬ್ರಿಟನ್ ಕೋರ್ಟ್ ತೀರ್ಪು ನೀಡಿದ್ದು, ಇದರಿಂದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯುಂಟಾದಂತಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಹೈದ್ರಾಬಾದ್, ಭಾರತದ ತೆಕ್ಕೆಗೆ ಬಂದಿರಲಿಲ್ಲ. ಈ ನಡುವೆ ಭಾರತ ತನ್ನ ಮೇಲೆ ದಾಳಿ ಮಾಡಬಹುದು ಎಂದೆಣಿಸಿದ್ದ ಹೈದ್ರಾಬಾದ್ ನಿಜಾಮ ಅಸಫ್ ಝಾ 1978ರಲ್ಲಿ ಬ್ರಿಟನ್ ನ ಲಂಡನ್ ಬ್ಯಾಂಕ್ ಶಾಖೆಯಲ್ಲಿ ಪಾಕಿಸ್ತಾನದ ರಾಯಭಾರಿ ಖಾತೆಗೆ 1 ದಶಲಕ್ಷ ಪೌಂಡ್ (ಅಂದಾಜು ರೂ.7 ಕೋಟಿ) ವರ್ಗಾಯಿಸಿದ್ದರು. ಆದರೆ, ಕೆಲ ದಿನಗಳ ಬಳಿಕ, ತಮಗೆ ಗೊತ್ತಿಲ್ಲದೆಯೇ ಹಣ ವರ್ಗಾವಣೆ ಆಗಿದೆ. ಹೀಗಾಗಿ ಹಣವನ್ನು ಮರಳಿ ತಮ್ಮ ಖಾತೆಗೆ ಹಾಕಬೇಕೆಂದು ಕೋರಿದ್ದರು. ಆದರೆ, ಪಾಕಿಸ್ತಾನ ಸರ್ಕಾರದ ಸಮ್ಮತಿ ಇಲ್ಲದೆಯೇ ಹಣ ಮರಳಿಸುವುದು ಸಾಧ್ಯವಿಲ್ಲ ಎಂದು ಬ್ಯಾಂಕ್ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ವಿರುದ್ಧ ಅಸಫ್ ಪ್ರಕರಣ ದಾಖಲಿಸಿದ್ದರು. ಈ ನಡುವೆ 2013ರಲ್ಲಿ ಪ್ರಕರಣಕ್ಕೆ ಮಧ್ಯಪ್ರವೇಶ ಮಾಡಿದ್ದ ಪಾಕಿಸ್ತಾನ, ನಾನು ಹೈದಬಾರಾದ್ ನಿಜಾಮರಿಗೆ ಭಾರತದ ದಾಳಿಯಿಂದ ರಕ್ಷಿಸಿಕೊಳ್ಳಲು ಶಸ್ತಾರಸ್ತ್ರ ಪೂರೈಸಿದ್ದಕ್ಕಾಗಿ ಹಣ ನಮಗೆ ರವಾನಿಸಲಾಗಿತ್ತು ಎಂದು ವಾದ ಮಾಡಿತ್ತು. ಅಲ್ಲದೇ, ಭಾರತ ಸರ್ಕಾರಕ್ಕೆ ಹೈದ್ರಾಬಾದ್ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದೆ. ಹೀಗಾಗಿ ಹಣ ಆ ದೇಶಕ್ಕೆ ನೀಡಲಾಗದು ಎಂದೆಲ್ಲಾ ವಾದ ಮಂಡಿಸಿತ್ತು.
ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ, ನಿಜಾಮರಿಗೆ ಪಾಕಿಸ್ತಾನ ಶಸ್ತ್ರಾಸ್ತ್ರ ನೀಡಿದ ಮಾಹಿತಿ ಇದೆಯಾದರೂ, ಅದೇ ಕಾರಣಕ್ಕೆ ಹಣ ಕೊಟ್ಟಿದ್ದು ಖಚಿತವಿಲ್ಲ ಎಂದು ಹೇಳಿ, ಪಾಕಿಸ್ತಾನದ ವಾದವನ್ನು ವಜಾ ಮಾಜಿ, ಹಣ ಭಾರತಕ್ಕೆ ಸೇರಬೇಕು ಎಂದು ತೀರ್ಪು ನೀಡಿದೆ.