ನವದೆಹಲಿ: ಕೊರೋನಾ ವೈರಸ್ ವಿರುದ್ಧ ಭಾರತ ಕೈಗೊಂಡಿರುವ ಸಮಯೋಚಿತ ಕಠಿಣ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.
ಪ್ರಧಾನಿ ನರೇಂದ್ರ ಮೋದಿ ಏ.14 ರಂದು ಲಾಕ್ ಡೌನ್ ವಿಸ್ತರಿಸಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ, ಪ್ರಧಾನಿ ಮೋದಿ ಕೈಗೊಂಡ ನಿರ್ಣಯವನ್ನು ಭಾರತದ ಸಮಯೋಚಿತ ಕಠಿಣ ನಿರ್ಧಾರ ಎಂದು ಬಣ್ಣಿಸಿದೆ.
ಸಂಖ್ಯೆಗಳ ಲೆಕ್ಕದಲ್ಲಿ ಫಲಿತಾಂಶದ ಬಗ್ಗೆ ಮಾತನಾಡುವುದು ಈಗಲೇ ಸಾಧ್ಯವಿಲ್ಲ. ಆರು ವಾರಗಳ ರಾಷ್ಟ್ರೀಯ ಲಾಕ್ ಡೌನ್ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೊರೋನಾ ಸೋಂಕು ಪತ್ತೆ ಹಚ್ಚುವುದು, ಐಸೊಲೇಷನ್ ಗಳಂತಹ ಕ್ರಮಗಳೂ ಸಹ ದೀರ್ಘಾವಧಿಯಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ, ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಹಲವಾರು ಬೃಹತ್ ಸಮಸ್ಯೆಗಳ ನಡುವೆಯೂ ಭಾರತ ಕೊರೋನಾ ಸಾಂಕ್ರಾಮಿಕ ರೋಗ ತಡೆ ಹೋರಾಟಕ್ಕೆ ತನ್ನ ಬದ್ಧತೆ ತೋರುತ್ತಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರಿಗಳು, ಆರೋಗ್ಯ ಕಾರ್ಯಪಡೆಗೆ ಇರುವಷ್ಟೇ ಜವಾಬ್ದಾರಿ ಸಮುದಾಯಗಳಿಗೂ ಇದೆ ಎಂದು ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.