ವಿದೇಶ

ಸಂಸತ್ತಿನ ಹಠಾತ್ ವಿಸರ್ಜನೆಗೆ ಕಾರಣ ಕೊಡಿ: ಪ್ರಧಾನಿ ಒಲಿಗೆ ನೇಪಾಳ ಸುಪ್ರೀಂ ಕೋರ್ಟ್ ನೋಟೀಸ್

Raghavendra Adiga

ಕಠ್ಮಂಡು: ಸಂಸತ್ತನ್ನು ಹಠಾತ್ತನೆ ವಿಸರ್ಜಿಸುವ ನಿರ್ಧಾರಕ್ಕೆ ಸಂಬಂಧಿಸಿಲಿಖಿತ ಸ್ಪಷ್ಟೀಕರಣವನ್ನು ನೀಡುವಂತೆ ಕೋರಿ ನೇಪಾಳದ ಸುಪ್ರೀಂ ಕೋರ್ಟ್ ಪ್ರಧಾನಿ ಕೆ ಪಿ ಶರ್ಮಾ ಒಲಿ ನೇತೃತ್ವದ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದೆ.

275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನ್ನು ವಿಸರ್ಜಿಸುವ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ಼ ಚೋಳೇಂದ್ರ ಶುಮ್ಶರ್ ರಾಣಾ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠ ಪ್ರಾಥಮಿಕ ವಿಚಾರಣೆಯ ನಂತರ ಈ ನೋಟಿಸ್ ನೀಡಿದೆ ಎಂದು ಮೈ ರಿಪಬ್ಲಿಕ ಪತ್ರಿಕೆ ವರದಿ ಮಾಡಿದೆ.

ಎಲ್ಲಾ ರಿಟ್ ಅರ್ಜಿಗಳಲ್ಲಿ ಒಲಿಯವರನ್ನು ಪ್ರತಿವಾದಿಗಳನ್ನಾಗಿ ಮಾಡಿರುವುದರಿಂದ ನ್ಯಾಯಮಂಡಳಿ ಪ್ರಧಾನ ಮಂತ್ರಿ ಕಚೇರಿ ಮತ್ತು ಮಂತ್ರಿ ಮಂಡಳಿ ಮತ್ತು ರಾಷ್ಟ್ರಪತಿಗಳ ಕಚೇರಿಯಿಂದ ಲಿಖಿತ ಸ್ಪಷ್ಟೀಕರಣವನ್ನು ಕೋರಿದೆ

ಸದನವನ್ನು ವಿಸರ್ಜಿಸಲು ಸರ್ಕಾರ ಮಾಡಿದ ಶಿಫಾರಸುಗಳ ಮೂಲ ಪ್ರತಿಯನ್ನು ಮತ್ತು ಸರ್ಕಾರದ ಶಿಫಾರಸುಗಳನ್ನು ದೃಢಪಡಿಸಲು ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯಕ್ಕೆ ಒದಗಿಸುವಂತೆ ನೋಟೀಸ್ ನಲ್ಲಿ ಹೇಳಿದೆ.

ಬುಧವಾರ, ಮುಖ್ಯ ನ್ಯಾಯಮೂರ್ತಿ ರಾಣಾ ಅವರ ಏಕ ಪೀಠವು ಎಲ್ಲಾ ರಿಟ್ ಅರ್ಜಿಗಳನ್ನು ಸಾಂವಿಧಾನಿಕ ಪೀಠಕ್ಕೆ ರವಾನಿಸಿತು. ಸಂಸತ್ತನ್ನು ವಿಸರ್ಜಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಒಟ್ಟಾರೆ 13 ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಲಾಗಿದೆ.

ಏತನ್ಮಧ್ಯೆ, ಪಕ್ಷದ ಮೇಲೆ ಹಿಡಿತ ಸಾಧಿಸಲು ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಎರಡು ಬಣಗಳ ನಡುವೆ ತೀವ್ರವಾದ ಹೋರಾಟದ ನಡುವೆ  ಪ್ರಧಾನಿ ಒಲಿ ಶುಕ್ರವಾರ ಸಂಜೆ ಕ್ಯಾಬಿನೆಟ್ ಸಭೆ ಕರೆದಿದ್ದಾರೆ.ಪ್ರಚಂಡ ನೇತೃತ್ವದ ಬಣದ ಏಳು ಮಂತ್ರಿಗಳ ರಾಜೀನಾಮೆಯ ನಂತರ ಓಲಿ ಅವರು ಸಂಪುಟವನ್ನು ಪುನರ್ರಚಿಸುವ ಸಾಧ್ಯತೆಯಿದೆ ಎಂದು ಪ್ರಧಾನಿ ಕಚೇರಿಯ ಆಪ್ತ ಮೂಲವನ್ನು ಉಲ್ಲೇಖಿಸಿ ಪತ್ರಿಕೆ ತಿಳಿಸಿದೆ. ಒಲಿ ನೇತೃತ್ವದ ಕ್ಯಾಬಿನೆಟ್ ಈಗ ಸಚಿವರು ಮತ್ತು ರಾಜ್ಯ ಸಚಿವರು ಸೇರಿದಂತೆ 18 ಸದಸ್ಯರನ್ನು ಹೊಂದಿದೆ.

ಪ್ರಧಾನಿ ಓಲಿಯನ್ನು ಪಕ್ಷದ ಸಂಸದೀಯ ನಾಯಕ ಮತ್ತು ಅಧ್ಯಕ್ಷರ ಹುದ್ದೆಗಳಿಂದ ಉಚ್ಚಾಟಿಸಿದ ನಂತರ ನೇಪಾಳ ಕಮ್ಯುನಿಸ್ಟ್ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪ ಕಮಲ್ ದಹಲ್ ಅವರನ್ನು  ಚೀನಾದ ರಾಯಭಾರಿ ಹೂ ಯಾಂಕಿ ಅವರು ಗುರುವಾರ ಭೇಟಿಯಾದರು. ಗುರುವಾರ ತಮ್ಮ ಆಪ್ತ ಕೇಂದ್ರ ಸಮಿತಿ ಸದಸ್ಯರ ಸಭೆಯಲ್ಲಿ ಓಲಿ ಪ್ರಚಂಡ ಅವರನ್ನು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕುವುದಾಗಿ ಘೋಷಿಸಿದರು. ಇದಕ್ಕೂ ಮೊದಲು, ಆಡಳಿತ ಪಕ್ಷದ ಪ್ರಚಂಡ ನೇತೃತ್ವದ ಬಣವು ಅವರನ್ನು ಹೊಸ ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಿತ್ತು.

SCROLL FOR NEXT