ವಿದೇಶ

ಕೋವಿಡ್ -19 ಆರ್ಥಿಕ ಸಂಕಷ್ಟದಿಂದ ಹೊರಬರಲು ಕಲ್ಲಿದ್ದಲು ಹರಾಜು ಉತ್ತಮವಲ್ಲ: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ

Sumana Upadhyaya

ಯುನೈಟೆಡ್ ನೇಷನ್ಸ್: ವಾಣಿಜ್ಯ ಗಣಿಗಾರಿಕೆಗೆ ಕಲ್ಲಿದ್ದಲು ಘಟಕಗಳ ಹರಾಜು ಪ್ರಕ್ರಿಯೆಯನ್ನು ಭಾರತ ಆರಂಭಿಸಿದ ವಾರದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಕೋವಿಡ್-19 ಪುನಶ್ಚೇತನ ಯೋಜನೆಯಲ್ಲಿ ಕಲ್ಲಿದ್ದಲನ್ನು ಯಾವುದೇ ದೇಶ ಸೇರಿಸುವುದರಲ್ಲಿ ಅರ್ಥವಿಲ್ಲ. ಅದರ ಬದಲು ಮಾಲಿನ್ಯ ರಹಿತ ಇಂಧನ ಮೂಲಗಳಲ್ಲಿ ದೇಶಗಳು ಹೂಡಿಕೆ ಮಾಡಬೇಕೆಂದು ಹೇಳಿದ್ದಾರೆ.

ಕೋವಿಡ್-19ಗೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆ ಪ್ರತಿಕ್ರಿಯೆ ಬಗ್ಗೆ ಗುಟೆರೆಸ್ ನಿನ್ನೆ ದಾಖಲೆಗಳನ್ನು ಮಂಡನೆ ಮಾಡಿದರು. ಅದರಲ್ಲಿ ಕಳೆದ ಮೂರು ತಿಂಗಳಲ್ಲಿ ಕೋವಿಡ್-19ಗೆ ಸಂಬಂಧಪಟ್ಟಂತೆ ವಿಶ್ವಸಂಸ್ಥೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ಇರುವುದು ಮಾತ್ರವಲ್ಲದೆ ಅದರಿಂದ ಹೊರಬರಲು ಮುಂದಿನ ದಿನಗಳಲ್ಲಿನ ನೀಲನಕ್ಷೆಯನ್ನು ಸಹ ಸೂಚಿಸಲಾಗಿದೆ.

ನಾವು ಈ ಹಿಂದೆ ಇದ್ದ ಪರಿಸ್ಥಿತಿಗೆ ಪುನಃ ಹಿಂತಿರುಗಲು ಸಾಧ್ಯವಿಲ್ಲ ಬಿಕ್ಕಟ್ಟನ್ನು ಉಲ್ಬಣಗೊಳಿಸಿದ ವ್ಯವಸ್ಥೆಗಳನ್ನು ಮರುಸೃಷ್ಟಿಸಬಹುದು. ಇನ್ನು ಮುಂದೆ ಹೆಚ್ಚು ಸುಸ್ಥಿರ, ಅಂತರ್ಗತ, ಲಿಂಗ-ಸಮಾನ ಸಮಾಜ ಮತ್ತು ಆರ್ಥಿಕತೆಯನ್ನು ನಿರ್ಮಿಸಬೇಕಾಗಿದೆ ಎಂದು ನಿನ್ನೆ ವರ್ಚುವಲ್ ಸಭೆಯಲ್ಲಿ ತಿಳಿಸಿದರು.

ಯಾವುದೇ ದೇಶವು ಕೋವಿಡ್ -19 ಸಮಸ್ಯೆಗಳಿಂದ ಹೊರಬರಲು ಇರುವ ಯೋಜನೆಗಳಲ್ಲಿ ಕಲ್ಲಿದ್ದಲನ್ನು ಸೇರಿಸುವುದು ಉತ್ತಮವಲ್ಲ. ಕಲುಷಿತಗೊಳ್ಳದ, ಹೊರಸೂಸುವಿಕೆಗೆ ಕಾರಣವಾಗದ, ಯೋಗ್ಯವಾದ ಉದ್ಯೋಗಗಳನ್ನು ಸೃಷ್ಟಿಸುವ, ಹಣವನ್ನು ಉಳಿಸುವ ಶಕ್ತಿ ಮೂಲಗಳಲ್ಲಿ ಹೂಡಿಕೆ ಮಾಡುವ ಸಮಯವಿದು ಎಂದಿದ್ದಾರೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳು ತಮ್ಮ ಮಾತುಗಳಲ್ಲಿ ಭಾರತದ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಕೂಡ ಇತ್ತೀಚೆಗೆ ಪ್ರಧಾನಿ ಮೋದಿ ಕಲ್ಲಿದ್ದಲು ಗಣಿ ನಿಕ್ಷೇಪ ಹರಾಜು ಪ್ರಕ್ರಿಯೆ ಆರಂಭಿಸುವ ಯೋಜನೆ ಘೋಷಣೆ ಮಾಡಿದ್ದನ್ನೇ ಪ್ರಸ್ತಾಪಿಸಿದರು ಎನ್ನಲಾಗುತ್ತಿದೆ.

ಕೋವಿಡ್ -19 ಆರ್ಥಿಕ ನಷ್ಟದಿಂದ ಹೊರಬರಲು ಭಾರತ ಕಂಡುಕೊಂಡಿರುವ ಈ ಮಾರ್ಗವನ್ನು ಬೇರೆ ದೇಶಗಳು ಸಹ ಅನುಸರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT