ವಿದೇಶ

ಟರ್ಕಿ ಭೂಕಂಪ: ಅವಶೇಷಗಳಡಿ ಸಿಲುಕಿದ್ದ ಬೆಂಗಳೂರು ಮೂಲದ ಟೆಕಿ ಮೃತದೇಹ ಪತ್ತೆ

Nagaraja AB

ಮಾಲತ್ಯ: ಶತಮಾನದಲ್ಲಿಯೇ ಅತ್ಯಂತ ಭೀಕರವಾದ ವಿನಾಶಕಾರಿ ಭೂಕಂಪದಿಂದ ಟರ್ಕಿ ಹಾಗೂ ಸಿರಿಯಾ ನಲುಗಿದ್ದು, ಅಪಾರ ಪ್ರಮಾಣದ ಜೀವ ಹಾಗೂ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.

ಭೂಕಂಪದಿಂದಾಗಿ ಇಲ್ಲಿಯವರೆಗೂ ಸುಮಾರು 25,000ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದು, ಅನೇಕ ಕಟ್ಟಡಗಳು ಧ್ವಂಸಗೊಂಡಿವೆ.  ಹಲವು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ಮಧ್ಯೆ ಫೆಬ್ರವರಿ 6 ರಿಂದ  ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕಿ ಮೃತದೇಹ ಇಂದು ಪತ್ತೆಯಾಗಿದೆ. ಮಾಲತ್ಯದಲ್ಲಿ ಹೋಟೆಲ್ ವೊಂದರ ಅವಶೇಷಗಳಡಿ ಸಿಲುಕಿದ್ದ ಟೆಕಿ ವಿಜಯ್ ಕುಮಾರ್ ಅವರ ಮೃತದೇಹವನ್ನು ಹೊರಗೆ ತರಲಾಗಿದೆ ಎಂದು ಟರ್ಕಿಯಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳು ತಿಳಿಸಿದ್ದಾರೆ. 

ಉತ್ತರಾಖಂಡ್ ರಾಜ್ಯದ 'ಡೆಹ್ರಾಡೂನ್‌ ಕಂಪನಿಯೊಂದರಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್, ಉತ್ತಮ ಎಂಜಿನಿಯರ್ ಆಗಿದ್ದರು. ಜನವರಿ 25ರಂದು ಟರ್ಕಿಗೆ ಹೋಗಿದ್ದರು. ಟರ್ಕಿಯಿಂದ ಫೆ. 5ರಂದು ಕುಟುಂಬದವರಿಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ್ದರು ಎನ್ನಲಾಗಿದೆ. 

ಟರ್ಕಿಯಲ್ಲಿ ಆಪರೇಷನ್ ದೋಸ್ತ್ ಮುಂದುವರೆದಿದ್ದು, ಭಾರತೀಯ ಸೈನಿಕರು ಜನರಿಗೆ ವೈದ್ಯಕೀಯ ನೆರವು ಮತ್ತು ಪರಿಹಾರ ಕ್ರಮ ಕೈಗೊಂಡಿದ್ದಾರೆ. 13 ವೈದ್ಯರು, ಜನರಲ್ ಸರ್ಜನ್, ಸಾಮುದಾಯಿಕ ವೈದ್ಯಕೀಯ ತಜ್ಞರು, ಸೇರಿದಂತೆ 99 ಸದಸ್ಯರ ತಂಡ ಭೂಕಂಪ ಪೀಡಿತ ಟರ್ಕಿಯಲ್ಲಿ ಜನರಿಗೆ ಅಗತ್ಯ ವೈದ್ಯಕೀಯ ನೆರವು ನೀಡುತ್ತಿದ್ದಾರೆ. 

SCROLL FOR NEXT