ರಷ್ಯಾದ ಮಿಲಿಟರಿ ಸಮವಸ್ತ್ರ ಧರಿಸಿರುವ ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಫೋಟೋ TNIE
ವಿದೇಶ

ವಿವಿ ಪ್ರವೇಶ, ನೌಕರಿಯ ಆಮಿಷವೊಡ್ಡಿ ಯುಕ್ರೇನ್ ವಿರುದ್ಧದ ಯುದ್ಧರಂಗಕ್ಕೆ ಭಾರತೀಯರ ಸಾಗಣೆ: ಸಿಬಿಐ

ವಿಶ್ವವಿದ್ಯಾಲಯ ಪ್ರವೇಶ, ನೌಕರಿಯ ಆಮಿಷಗಳನ್ನೊಡ್ಡಿ ಯುಕ್ರೇನ್ ವಿರುದ್ಧದ ಯುದ್ಧರಂಗಕ್ಕೆ ಭಾರತೀಯರನ್ನು ಸಾಗಣೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ.

ನವದೆಹಲಿ: ವಿಶ್ವವಿದ್ಯಾಲಯ ಪ್ರವೇಶ, ನೌಕರಿಯ ಆಮಿಷಗಳನ್ನೊಡ್ಡಿ ಯುಕ್ರೇನ್ ವಿರುದ್ಧದ ಯುದ್ಧರಂಗಕ್ಕೆ ಭಾರತೀಯರನ್ನು ಸಾಗಣೆ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ. ರಷ್ಯಾ-ಯುಕ್ರೇನ್ ಕದನರಂಗಕ್ಕೆ ಭಾರತೀಯರನ್ನು ಸಾಗಣೆ ಮಾಡಿರುವವರ ಮೇಲೆ ಕಣ್ಣಿಡಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಏಜೆಂಟರು ರಷ್ಯಾಕ್ಕೆ ಆಗಮಿಸುವ ಭಾರತೀಯರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡರು ಮತ್ತು ಸಶಸ್ತ್ರ ಪಡೆಗಳೊಂದಿಗೆ ಹೋರಾಡುವಂತೆ ಒತ್ತಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಜಾಲವನ್ನು ಸಿಬಿಐ ಗುರುವಾರ ಭೇದಿಸಿತ್ತು. ರಾಜಸ್ಥಾನದ ನಿವಾಸಿ ಕ್ರಿಸ್ಟಿನಾ ಮತ್ತು ಮೊಯಿನುದ್ದೀನ್ ಚಿಪ್ಪಾ ಅವರು ರಷ್ಯಾದಲ್ಲಿ ನೆಲೆಸಿದ್ದಾರೆ ಮತ್ತು ಅಲ್ಲಿ ಲಾಭದಾಯಕ ಉದ್ಯೋಗಾವಕಾಶಗಳನ್ನು ನೀಡುವ ಮೂಲಕ ಭಾರತೀಯ ಯುವಕರನ್ನು ರಷ್ಯಾಕ್ಕೆ ಸಾಗಿಸಲು ಅನುಕೂಲ ಮಾಡಿಕೊಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ಸಂಸ್ಥೆಯ ಎಫ್‌ಐಆರ್‌ನಲ್ಲಿ 17 ಇತರ ವೀಸಾ ಸಲಹಾ ಕಂಪನಿಗಳು, ಅವುಗಳ ಮಾಲೀಕರು ಮತ್ತು ಭಾರತದಾದ್ಯಂತ ಹರಡಿರುವ ಏಜೆಂಟ್‌ಗಳನ್ನು ಪಟ್ಟಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಸಂಸ್ಥೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ತಮ್ಮ ಏಜೆಂಟರ ಮೂಲಕ ರಷ್ಯಾದ ಸೇನೆಗೆ ಸಂಬಂಧಪಟ್ಟ ಉದ್ಯೋಗ, ಸೆಕ್ಯೂರಿಟಿ ಗಾರ್ಡ್, ಸಹಾಯಕರು, ಉತ್ತಮ ಜೀವನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಉದ್ಯೋಗಗಳನ್ನು ಪಡೆಯುವ ನೆಪದಲ್ಲಿ ಭಾರತೀಯ ಪ್ರಜೆಗಳನ್ನು ರಷ್ಯಾಕ್ಕೆ ಕಳ್ಳಸಾಗಣೆ ಮಾಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ರಿಯಾಯತಿ ಶುಲ್ಕಗಳು ಮತ್ತು ವೀಸಾ ವಿಸ್ತರಣೆಗಳನ್ನು ನೀಡುವ ಮೂಲಕ ಸರ್ಕಾರಿ ಅಥವಾ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಬದಲಾಗಿ ರಷ್ಯಾದಲ್ಲಿರುವ ಸಂಶಯಾಸ್ಪದ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಒದಗಿಸುವ ಮೂಲಕ ಏಜೆಂಟರು ವಿದ್ಯಾರ್ಥಿಗಳನ್ನು ವಂಚಿಸಿದರು, ಅಂತಿಮವಾಗಿ ಅವರು ಸ್ಥಳೀಯ ಏಜೆಂಟರ ಬಳಿ ಸಿಲುಕಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಈ ಆಕಾಂಕ್ಷಿಗಳು ರಷ್ಯಾವನ್ನು ತಲುಪಿದ ನಂತರ, ಅವರ ಪಾಸ್‌ಪೋರ್ಟ್‌ಗಳನ್ನು ಅಲ್ಲಿನ ಏಜೆಂಟರು ವಶಪಡಿಸಿಕೊಂಡರು ಮತ್ತು ಯುದ್ಧ ಪಾತ್ರದ ತರಬೇತಿಯ ನಂತರ ಅವರನ್ನು ಸಶಸ್ತ್ರ ಪಡೆಗಳಿಗೆ ಸೇರಲು ಒತ್ತಾಯಿಸಲಾಯಿತು.

"ಅವರಿಗೆ ಯುದ್ಧದ ಪಾತ್ರಗಳಲ್ಲಿ ತರಬೇತಿ ನೀಡಲಾಯಿತು ಮತ್ತು ರಷ್ಯಾದ ಸೈನ್ಯದ ಸಮವಸ್ತ್ರಗಳು ಮತ್ತು ಬ್ಯಾಚ್‌ಗಳನ್ನು ಒದಗಿಸಲಾಯಿತು. ನಂತರ, ಈ ಭಾರತೀಯ ಪ್ರಜೆಗಳನ್ನು ಅವರ ಇಚ್ಛೆಗೆ ವಿರುದ್ಧವಾಗಿ ರಷ್ಯಾ-ಉಕ್ರೇನ್ ಯುದ್ಧ ವಲಯದ ಮುಂಭಾಗದ ನೆಲೆಗಳಲ್ಲಿ ನಿಯೋಜಿಸಲಾಗುತ್ತಿದೆ ಮತ್ತು ಅವರ ಜೀವವನ್ನು ಗಂಭೀರ ಅಪಾಯಕ್ಕೆ ಸಿಲುಕಿಸಲಾಗುತ್ತಿದೆ" ಎಂದು ಸಿಬಿಐ ಎಫ್‌ಐಆರ್‌ ಹೇಳಿದೆ.

ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ದೆಹಲಿ, ತಿರುವನಂತಪುರಂ, ಮುಂಬೈ, ಅಂಬಾಲಾ, ಚಂಡೀಗಢ, ಮಧುರೈ ಮತ್ತು ಚೆನ್ನೈನ 13 ಸ್ಥಳಗಳಲ್ಲಿ ದೇಶಾದ್ಯಂತ ಶೋಧ ನಡೆಸಿತು. "ಈ ಏಜೆಂಟರ ಮಾನವ ಕಳ್ಳಸಾಗಣೆ ಜಾಲವು ದೇಶಾದ್ಯಂತ ಹಲವಾರು ರಾಜ್ಯಗಳಲ್ಲಿ ಹರಡಿದೆ ಮತ್ತು ಅವರು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ವಕ್ತಾರರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT