ವಿದೇಶ

ಪಾಕಿಸ್ತಾನಕ್ಕೆ ಮರ್ಮಾಘಾತ: ಸ್ವತಂತ್ರ ದೇಶ ಎಂದು ಘೋಷಿಸಿಕೊಂಡ ಬಲೂಚ್; ಮಾನ್ಯತೆಗಾಗಿ UN ಗೆ ಪತ್ರ!

ನವದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ತೆರೆಯಲು ಅವಕಾಶ ನೀಡಬೇಕೆಂದು ಅವರು ಭಾರತ ಸರ್ಕಾರವನ್ನು ಕೋರಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಬಲೂಚ್ ಬರಹಗಾರ ಮೀರ್ ಯಾರ್ ಬಲೂಚ್ ಅವರು ಪಾಕಿಸ್ತಾನದಿಂದ ಬಲೂಚಿಸ್ತಾನದ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದಾರೆ. ನವದೆಹಲಿಯಲ್ಲಿ ಬಲೂಚ್ ರಾಯಭಾರ ಕಚೇರಿಯನ್ನು ತೆರೆಯಲು ಅವಕಾಶ ನೀಡಬೇಕೆಂದು ಅವರು ಭಾರತ ಸರ್ಕಾರವನ್ನು ಕೋರಿದ್ದಾರೆ. ಬಲೂಚ್ ಜನರ ಪರವಾಗಿ ವಕಾಲತ್ತು ವಹಿಸುವವರಿಗೆ ಹೆಸರುವಾಸಿಯಾದ ಮಿರ್ ಯಾರ್ ಬಲೂಚ್, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್‌ಗಳಲ್ಲಿ ಈ ಘೋಷಣೆ ಮಾಡಿದ್ದಾರೆ. ಬಲೂಚಿಸ್ತಾನಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ಅವರು ವಿಶ್ವಸಂಸ್ಥೆಯನ್ನು ವಿನಂತಿಸಿದ್ದು ಪಾಕಿಸ್ತಾನಿ ಸೈನ್ಯವು ಆ ಪ್ರದೇಶವನ್ನು ತೊರೆಯಬೇಕೆಂದು ಒತ್ತಾಯಿಸಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಗಂಭೀರ ಸಂಘರ್ಷದ ಮಧ್ಯೆ ಮಿರ್ ಯಾರ್ ಅವರ ಈ ಹೇಳಿಕೆ ಬಂದಿದೆ. ಮೇ 7ರಂದು, ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು. ಯಾವುದೇ ಪಾಕಿಸ್ತಾನಿ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಗುರುವಾರ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಫಿರಂಗಿ ಶೆಲ್ ದಾಳಿ ನಡೆಸುವ ಮೂಲಕ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚಿಸಿತು.

ಭಾರತವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸುವ ಮೂಲಕ ಪ್ರತಿಕ್ರಿಯಿಸಿತು. ಇದು ಪಾಕಿಸ್ತಾನಿ ಯುದ್ಧ ವಿಮಾನಗಳು ಮತ್ತು ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AWACS) ವಿಮಾನವನ್ನು ಸಹ ನಾಶಪಡಿಸಿತು. 100ಕ್ಕೂ ಹೆಚ್ಚು ಅನಿಲ ಬಾವಿಗಳಿರುವ ಡೇರಾ ಬುಗ್ತಿಯಲ್ಲಿರುವ ಪಾಕಿಸ್ತಾನದ ಅನಿಲ ನಿಕ್ಷೇಪಗಳ ಮೇಲೆ ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ದಾಳಿ ಮಾಡಿದ್ದರು ಎಂದು ಮಿರ್ ಯಾರ್ ಬಲೂಚ್ ಹೇಳಿಕೊಂಡಿದ್ದಾರೆ. ಉಗ್ರ ಪೋಷಿತ ಪಾಕಿಸ್ತಾನದ ಪತನ ಹತ್ತಿರವಾಗುತ್ತಿದ್ದಂತೆ ಶೀಘ್ರದಲ್ಲೇ ಘೋಷಣೆ ಹೊರಡುವ ಸಾಧ್ಯತೆಯಿದೆ. ನಾವು ನಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದ್ದೇವೆ ಮತ್ತು ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿಯನ್ನು ಅನುಮತಿಸುವಂತೆ ಭಾರತವನ್ನು ವಿನಂತಿಸುತ್ತೇವೆ ಎಂದು ಅವರು ತಮ್ಮ ಒಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅಂತರರಾಷ್ಟ್ರೀಯ ಬೆಂಬಲವನ್ನು ಕೋರಿ ಅವರು, "ಬಲೂಚಿಸ್ತಾನ್ ಪ್ರಜಾಸತ್ತಾತ್ಮಕ ಗಣರಾಜ್ಯದ ಸ್ವಾತಂತ್ರ್ಯವನ್ನು ಗುರುತಿಸಲು ಮತ್ತು ಮಾನ್ಯತೆಯನ್ನು ಬೆಂಬಲಿಸಲು ಎಲ್ಲಾ UN ಸದಸ್ಯ ರಾಷ್ಟ್ರಗಳ ಸಭೆಯನ್ನು ಕರೆಯಲು ನಾವು ವಿಶ್ವಸಂಸ್ಥೆಯನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು. ಕರೆನ್ಸಿ ಮತ್ತು ಪಾಸ್‌ಪೋರ್ಟ್ ಮುದ್ರಣಕ್ಕಾಗಿ ಕೋಟ್ಯಂತರ ಡಾಲರ್ ಹಣವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು. ಬಲೂಚಿಸ್ತಾನಕ್ಕೆ ಶಾಂತಿಪಾಲಕರನ್ನು ತಕ್ಷಣವೇ ಕಳುಹಿಸುವಂತೆ ಮೀರ್ ಯಾರ್ ಬಲೂಚ್ ವಿಶ್ವಸಂಸ್ಥೆಯನ್ನು ವಿನಂತಿಸಿದ್ದಾರೆ. ವಿಶ್ವಸಂಸ್ಥೆಯು ತನ್ನ ಶಾಂತಿ ನಿಯೋಗವನ್ನು ತಕ್ಷಣವೇ ಬಲೂಚಿಸ್ತಾನಕ್ಕೆ ಕಳುಹಿಸಬೇಕೆಂದು ಮತ್ತು ಪಾಕಿಸ್ತಾನದ ಆಕ್ರಮಣಕಾರಿ ಪಡೆಗಳು ಬಲೂಚಿಸ್ತಾನದ ಪ್ರದೇಶಗಳು, ವಾಯುಪ್ರದೇಶ ಮತ್ತು ಸಮುದ್ರಗಳನ್ನು ಖಾಲಿ ಮಾಡುವಂತೆ ಮತ್ತು ಬಲೂಚಿಸ್ತಾನದಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳು ಮತ್ತು ಸ್ವತ್ತುಗಳನ್ನು ಬಿಡುವಂತೆ ಕೇಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ಸೇನೆ, ಗಡಿ ಪಡೆ, ಪೊಲೀಸ್, ಮಿಲಿಟರಿ ಗುಪ್ತಚರ, ಐಎಸ್‌ಐ ಮತ್ತು ನಾಗರಿಕ ಆಡಳಿತದಲ್ಲಿರುವ ಎಲ್ಲಾ ಬಲೂಚಿಸ್ತಾನೇತರ ಸಿಬ್ಬಂದಿಗಳು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯಬೇಕು ಎಂದು ಅವರು ಹೇಳಿದರು. ಬಲೂಚಿಸ್ತಾನದ ನಿಯಂತ್ರಣವನ್ನು ಶೀಘ್ರದಲ್ಲೇ ಸ್ವತಂತ್ರ ಬಲೂಚಿಸ್ತಾನ್ ರಾಜ್ಯದ ಹೊಸ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಮತ್ತು ಶೀಘ್ರದಲ್ಲೇ ಪರಿವರ್ತನಾ ಮುಕ್ತಾಯದ ಮಧ್ಯಂತರ ಸರ್ಕಾರವನ್ನು ಘೋಷಿಸಲಾಗುವುದು. ಸಂಪುಟದಲ್ಲಿ ಬಲೂಚ್ ಮಹಿಳೆಯರ ಪ್ರಾತಿನಿಧ್ಯವು ನಮ್ಮ ರಾಷ್ಟ್ರದ ಬಗೆಗಿನ ನಮ್ಮ ಬದ್ಧತೆಯ ನೆರವೇರಿಕೆಯಾಗಿದೆ" ಎಂದು ಮಿರ್ ಯಾರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

ವಿಜಯ್ ಸಿಎಂ ಆಗುತ್ತಿದ್ದಂತೆಯೇ ಆಂಧ್ರದಲ್ಲಿ ಗಂಭೀರವಾದ DCM ಪವನ್ ಕಲ್ಯಾಣ್ ! JSP ಕಾರ್ಯಕರ್ತರಿಗೆ ಖಡಕ್ ಸೂಚನೆ

SCROLL FOR NEXT