ವಿದೇಶ

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ; ಲೆಬನಾನ್ ಕದನ ವಿರಾಮ, ಸ್ವತ್ತುಗಳ ಬಿಡುಗಡೆ ಪ್ರಮುಖ ಅಜೆಂಡಾ; Video

ಇದಕ್ಕೂ ಮುನ್ನ, ಇರಾನ್ ಪ್ರತಿನಿಧಿ ಮಂಡಳಿಯೂ ಇಂದು ಮುಂಜಾನೆ ಇಸ್ಲಾಮಾಬಾದ್‌ಗೆ ಆಗಮಿಸಿತ್ತು. ಈ ಉನ್ನತ ಮಟ್ಟದ ಮಾತುಕತೆಗಳಿಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ.

ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಒಳಗೊಂಡ ಅಮೆರಿಕಾ ಸರ್ಕಾರದ ವಿಮಾನವು ಶನಿವಾರ ಇಸ್ಲಾಮಾಬಾದ್‌ಗೆ ಆಗಮಿಸಿದ್ದು, ಮಧ್ಯಪ್ರಾಚ್ಯ ಹಾಗೂ ಜಾಗತಿಕ ಆರ್ಥಿಕತೆಯನ್ನು ತಲ್ಲಣಗೊಳಿಸಿದ ಆರು ವಾರಗಳ ಯುದ್ಧಕ್ಕೆ ಅಂತ್ಯ ಕಾಣಿಸಲು ಇರಾನ್‌ನೊಂದಿಗೆ ನಡೆಯಲಿರುವ ಮಹತ್ವದ ಮಾತುಕತೆಗಳಿಗೆ ವೇದಿಕೆ ಸಿದ್ಧವಾಗಿದೆ.

ಇದಕ್ಕೂ ಮುನ್ನ, ಇರಾನ್ ಪ್ರತಿನಿಧಿ ಮಂಡಳಿಯೂ ಇಂದು ಮುಂಜಾನೆ ಇಸ್ಲಾಮಾಬಾದ್‌ಗೆ ಆಗಮಿಸಿತ್ತು. ಈ ಉನ್ನತ ಮಟ್ಟದ ಮಾತುಕತೆಗಳಿಗೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದೆ.

ಅಮೆರಿಕಾ ತಂಡದಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಮತ್ತು ಸಲಹೆಗಾರ ಜಾರೆಡ್ ಕುಶ್ನರ್ ಇದ್ದು, ಅವರು ಅಮೆರಿಕ ಪರ ಮಾತುಕತೆಯನ್ನು ಮುನ್ನಡೆಸುತ್ತಿದ್ದಾರೆ.

ಇರಾನ್ ತಂಡವನ್ನು ಸಂಸತ್ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವ ವಹಿಸಿದ್ದು, ಅವರು ಅಮೆರಿಕಾ ಮತ್ತು ಇಸ್ರೇಲ್ ಸಂಬಂಧಿಸಿದ ಸಂಘರ್ಷಕ್ಕೆ ಅಂತ್ಯ ತರಲು ಇಸ್ಲಾಮಾಬಾದ್‌ನಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ಮಾಹಿತಿ ಪ್ರಕಾರ, ಇರಾನ್ ಪ್ರತಿನಿಧಿಗಳನ್ನು ಉಪ ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್, ರಾಷ್ಟ್ರೀಯ ಸಭೆಯ ಸ್ಪೀಕರ್ ಆಯಾಜ್ ಸಾದಿಕ್, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸಯ್ಯದ್ ಆಸಿಂ ಮುನೀರ್ ಹಾಗೂ ಗೃಹ ಸಚಿವ ಸಯ್ಯದ್ ಮೊಹ್ಸಿನ್ ರಝಾ ನಕ್ವಿ ಸ್ವಾಗತಿಸಿದರು.

ಈ ಮಾತುಕತೆಗಳು ರಚನಾತ್ಮಕವಾಗಿ ನಡೆದು ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಶಾಶ್ವತ ಪರಿಹಾರ ದೊರಕಲಿ ಎಂಬ ಆಶಯವನ್ನು ಪಾಕಿಸ್ತಾನ ಹೊಂದಿದೆ.

ಈ ನಡುವೆ, ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇರಾನ್ ಇಂದಿನ ಮಾತುಕತೆಯಲ್ಲಿ ಭಾಗವಹಿಸುವುದೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಇರಾನ್ ಮಾಧ್ಯಮಗಳ ಪ್ರಕಾರ, ಯುದ್ಧ ವಿರಾಮದ ಷರತ್ತುಗಳು ಪೂರ್ಣಗೊಂಡ ನಂತರವೇ ಮಾತುಕತೆ ಆರಂಭವಾಗಲಿದೆ.

ಘಾಲಿಬಾಫ್ ಅವರು, ಲೆಬನಾನ್‌ನಲ್ಲಿ ಯುದ್ಧ ವಿರಾಮ ಜಾರಿಗೆ ತರುವುದು ಮತ್ತು ಇರಾನ್‌ನ ಸ್ಥಗಿತಗೊಳಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡುವುದು ಎರಡು ಷರತ್ತುಗಳು ಇನ್ನೂ ಪೂರ್ತಿಯಾಗಿಲ್ಲ ಎಂದು ಹೇಳಿದ್ದಾರೆ. ಈ ಎರಡು ವಿಷಯಗಳು ಪೂರ್ಣಗೊಂಡ ನಂತರವೇ ಮಾತುಕತೆ ಆರಂಭವಾಗಬೇಕು ಎಂದು ಅವರು ಹೇಳಿದ್ದಾರೆ.

ಇಂದಿನ ಮಾತುಕತೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೆ.ಡಿ. ವ್ಯಾನ್ಸ್ , ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಇರಾನ್ ನಿಷ್ಠೆಯಿಂದ ಮಾತುಕತೆ ನಡೆಸಲು ಸಿದ್ಧವಾಗಿದ್ದರೆ, ನಾವು ಸಹ ಸಹಕರಿಸುತ್ತೇವೆ. ಆದರೆ ಮೋಸ ಮಾಡಲು ಪ್ರಯತ್ನಿಸಿದರೆ, ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಟ್ರಂಪ್ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಪ್ರತಿಕ್ರಿಯೆ ನೀಡಿ, ಇರಾನ್ ಮೇಲೆ ಟೀಕೆ ಮಾಡಿದ್ದಾರೆ. ಅವರು ಇರಾನ್ ಹಾರ್ಮುಜ್ ಜಲಸಂಧಿಯನ್ನು ಒತ್ತಡದ ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಮಾಡಿದ ಮನವಿಯ ನಂತರ ತಾತ್ಕಾಲಿಕ ಯುದ್ಧ ವಿರಾಮ ಜಾರಿಯಾಗಿದ್ದು, ಈ ಸಂವಾದ ಸಾಧ್ಯವಾಗಿದೆ.

ಇದಕ್ಕೂ ಮುನ್ನ, ಇರಾನ್ ವಿದೇಶಾಂಗ ಸಚಿವ ಅರಾಘ್ಚಿ, ಲೆಬನಾನ್‌ನಲ್ಲಿರುವ ಇರಾನ್ ರಾಯಭಾರಿಯೊಂದಿಗೆ ಮಾತನಾಡಿ, ಅಮೆರಿಕಾ ಯುದ್ಧ ವಿರಾಮದ ಬದ್ಧತೆಯನ್ನು ಪಾಲಿಸಬೇಕು ಮತ್ತು ಅದನ್ನು ಲೆಬನಾನ್‌ಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದರು.

ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಕೂಡ, ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ಯುದ್ಧ ವಿರಾಮ ಉಲ್ಲಂಘನೆಯಾಗಿದ್ದು, ಮಾತುಕತೆಗಳಿಗೆ ಧಕ್ಕೆ ತರಬಹುದು ಎಂದು ಎಚ್ಚರಿಸಿದ್ದಾರೆ.

ಇದರ ನಡುವೆ, ಇಸ್ರೇಲ್ ಮತ್ತು ಲೆಬನಾನ್ ನಡುವಿನ ನೇರ ಮಾತುಕತೆಗಳು ಮಂಗಳವಾರ ಅಮೆರಿಕಾ ರಾಜಧಾನಿಯಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಲೆಬನಾನ್ ಸರ್ಕಾರ ಹಿಜ್ಬುಲ್ಲಾ ಸಂಘಟನೆಗೆ ನಿಶಸ್ತ್ರೀಕರಣ ಮಾಡಿಸುವ ಹೊಣೆ ಹೊರುವಂತೆ ಇಸ್ರೇಲ್ ಒತ್ತಾಯಿಸುತ್ತಿದೆ.

ಇಸ್ರೇಲ್, ಇರಾನ್ ಯುದ್ಧ ವಿರಾಮವು ಹಿಜ್ಬುಲ್ಲಾ ವಿರುದ್ಧದ ತನ್ನ ಕಾರ್ಯಾಚರಣೆಗೆ ಅನ್ವಯಿಸುವುದಿಲ್ಲ ಎಂದು ಹೇಳಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಯುದ್ಧ ವಿರಾಮ ಘೋಷಿಸಿದ ದಿನವೇ, ಇಸ್ರೇಲ್ ಬೈರೂತ್ ಮೇಲೆ ಭಾರೀ ವಾಯು ದಾಳಿಗಳನ್ನು ನಡೆಸಿ 300ಕ್ಕೂ ಹೆಚ್ಚು ಜನರನ್ನು ಕೊಂದಿದೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ನಂತರದ ದಾಳಿಗಳಲ್ಲೂ ಹಲವು ಸಾವುಗಳು ಸಂಭವಿಸಿವೆ.

ಈ ಮಹತ್ವದ ಮಾತುಕತೆಗಳ ಹಿನ್ನೆಲೆ, ಇಸ್ಲಾಮಾಬಾದ್‌ನಲ್ಲಿ ಭದ್ರತೆ ಕಟ್ಟುನಿಟ್ಟಾಗಿದ್ದು, ನಗರವನ್ನು ‘ರೆಡ್ ಅಲರ್ಟ್’ಗೆ ಒಳಪಡಿಸಲಾಗಿದೆ. 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪ್ರಮುಖ ಸರ್ಕಾರಿ ಕಟ್ಟಡಗಳು ಇರುವ ‘ರೆಡ್ ಝೋನ್’ ಪ್ರದೇಶವನ್ನು ಸೇನೆ ಮತ್ತು ರೇಂಜರ್ಸ್ ಕಾವಲು ನೋಡುತ್ತಿದ್ದು, ಅನುಮತಿ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಈ ಉನ್ನತ ಮಟ್ಟದ ಮಾತುಕತೆಗಳನ್ನು ಜಗತ್ತಿನಾದ್ಯಂತ ದೇಶಗಳು ಕುತೂಹಲದಿಂದ ವೀಕ್ಷಿಸುತ್ತಿವೆ. ಇದರ ಫಲಿತಾಂಶವು ಪಶ್ಚಿಮ ಏಷ್ಯಾದ ಭದ್ರತೆ, ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಇಂದು ಸಂಧಾನ ಮಾತುಕತೆ; Video

PSL ನಲ್ಲಿ ಮತ್ತೊಂದು ಹೈಡ್ರಾಮಾ: ಇದ್ಯಾವ್ ಸೀಮೆ ಬೌಲಿಂಗ್?.. ಮೈದಾನದಲ್ಲೇ Daryl Mitchell vs Usman Tariq ಜಟಾಪಟಿ, ಇಷ್ಟಕ್ಕೂ ಆಗಿದ್ದೇನು?

SCROLL FOR NEXT