ನವದೆಹಲಿ: ಅಪರಿಚಿತ ವ್ಯಕ್ತಿಯೊಬ್ಬ ಪಾಕಿಸ್ತಾನದೊಳಗೆ ತನ್ನ ಸಂಘಟನೆಯ ಸುಮಾರು 30 ಸದಸ್ಯರನ್ನು ಕೊಂದಿದ್ದಾನೆ ಎಂದು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಸದಸ್ಯನೊಬ್ಬ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾನೆ.
ಪಾಕಿಸ್ತಾನದ ಒಳಗೆಯೇ ಅಜ್ಞಾತ ವ್ಯಕ್ತಿಯೊಬ್ಬ ತನ್ನ ಸಂಘಟನೆಯ ಸುಮಾರು 30 ಮಂದಿ ಸದಸ್ಯರನ್ನು ಹತ್ಯೆ ಮಾಡಿದ್ದಾನೆ ಎಂದು ಕ್ಯಾಮೆರಾ ಮುಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾನೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದಲ್ಲಿ ಬಹಳ ಹಿಂದೆಯೇ ಲಷ್ಕರ್-ಎ-ತೈಬಾವನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ವಾದಿಸುತ್ತ ಬಂದಿದ್ದರೂ, ಲಷ್ಕರ್ ಜತೆ ನಂಟಿರುವ ಭಯೋತ್ಪಾದಕ ರಿಜ್ವಾನ್ ಹನೀಫ್ ಕಾಣಿಸಿಕೊಂಡಿರುವ ವಿಡಿಯೋ ಈಗ ಹೊರಬಿದ್ದಿದೆ.
2008ರ ಮುಂಬೈ ದಾಳಿಯಲ್ಲಿ 166 ಜನರ ಸಾವಿಗೆ ಕಾರಣವಾದ ಈ ನಿಷೇಧಿತ ಸಂಘಟನೆಯ ಹಲವು ಸದಸ್ಯರು, ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದೆಡೆ ವಿವಿಧ ಭಾಗಗಳಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಹನೀಫ್ ವಿಡಿಯೋದಲ್ಲಿ ತಿಳಿಸಿದ್ದಾನೆ. ಪೇಷಾವರ್, ಕರಾಚಿ, ರಾವಲ್ಪಿಂಡಿ, ರಾವಲಕೋಟ್ ಮತ್ತು ಮುಜಫರಾಬಾದ್ನಲ್ಲಿ ಅಜ್ಞಾತ ವ್ಯಕ್ತಿಯೊಬ್ಬನಿಂದ ಲಷ್ಕರ್-ಎ-ತೈಬಾದ 30ಕ್ಕೂ ಹೆಚ್ಚು ಉಗ್ರರು ಹತ್ಯೆಗೀಡಾಗಿದ್ದಾರೆ.
ಅಲ್-ಖೈದಾ ಮತ್ತು ತಾಲಿಬಾನ್ ಜೊತೆಗಿನ ನಂಟಿನ ಕಾರಣಕ್ಕಾಗಿ 2005ರಲ್ಲಿ ವಿಶ್ವಸಂಸ್ಥೆಯಿಂದ ನಿರ್ಬಂಧಕ್ಕೊಳಗಾಗಿರುವ ಲಷ್ಕರ್ ಸಂಘಟನೆಯ ಉಗ್ರನೊಬ್ಬ ಇಂತಹ ಹತ್ಯೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿರುವುದು ಇದೇ ಮೊದಲು.
ಈ ಹತ್ಯೆಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳೇ ನಡೆಸಿವೆ ಎಂದು ರಿಜ್ವಾನ್ ಹನೀಫ್ ವಿಡಿಯೋದಲ್ಲಿ ಆರೋಪಿಸಿದ್ದಾನೆ. ಆದರೆ ಭಾರತ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಮತ್ತೊಂದೆಡೆ ವಿಡಿಯೋದಲ್ಲಿರುವ ವ್ಯಕ್ತಿಯು ಭಾರತಕ್ಕೆ ಬೇಕಾಗಿರುವ ಹಿರಿಯ ಲಷ್ಕರ್ ಉಗ್ರನಾಗಿದ್ದು, ವಿಡಿಯೋದ ದೃಢತೆಯನ್ನು ಭಾರತೀಯ ಭದ್ರತಾ ಸಂಸ್ಥೆಗಳು ಪರಿಶೀಲಿಸಿ ಖಚಿತಪಡಿಸಿವೆ. ಈ ವಿಡಿಯೋದಲ್ಲಿ ರಿಜ್ವಾನ್ ಹನೀಫ್ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹಾಗೂ ದ್ವೇಷಪೂರಿತ ಭಾಷೆಯನ್ನು ಬಳಸಿರುವುದು ಕಂಡುಬಂದಿದೆ.
ಭಯೋತ್ಪಾದಕ ಸಂಘಟನೆಗಳು ದ್ವೇಷವನ್ನು ಹರಡಲು ಮತ್ತು ಜನರನ್ನು ಮೂಲಭೂತವಾದದತ್ತ ತಳ್ಳಲು ಧಾರ್ಮಿಕ ಭಾವನೆಗಳನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.
ಇತ್ತೀಚಿಗೆ ಪಾಕ್ ನೆಲದಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಸರಣಿ ಹತ್ಯೆ ನಡೆಯುತ್ತಿದ್ದು, ದಾಳಿಕೋರರು ಯಾರು ಎಂಬುದು ತಿಳಿದು ಬರುತ್ತಿಲ್ಲ. ಲಷ್ಕರ್ ಉಗ್ರರು ಭಾರತದ ಗುಪ್ತಚರ ಇಲಾಖೆ ಈ ದಾಳಿಗಳನ್ನು ಆಯೋಜಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.