ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಆದಿಯಾಲಾ ಜೈಲಿನಲ್ಲಿ ಬಂಧನದಲ್ಲಿರುವ ವೇಳೆ ಅವರ ದೃಷ್ಟಿಗೆ ಗಂಭೀರವಾಗಿ ಹಾನಿಯಾಗಿದ್ದು, ಆರೋಗ್ಯ ಸ್ಥಿತಿ ಹದಗೆಟ್ಟಿದೆ ಹಾಗೂ ದೀರ್ಘಕಾಲ ಏಕಾಂಗ ಬಂಧನಕ್ಕೆ ಒಳಗಾಗಿದ್ದಾರೆ ಎಂದು ನ್ಯಾಯಾಲಯ ನೇಮಿಸಿದ ವಕೀಲರ ವರದಿ ತಿಳಿಸಿದೆ. ಇಮ್ರಾನ್ ಖಾನ್ ವಿರುದ್ಧ ಉದ್ದೇಶಪೂರ್ವಕ, ಅಮಾನವೀಯ ಮತ್ತು ಅಕ್ರಮ ವರ್ತನೆ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ನೇಮಿಸಿದ ಅಮಿಕಸ್ ಕ್ಯೂರಿಯೆ ಸಲ್ಮಾನ್ ಸಫ್ದರ್ ತಯಾರಿಸಿದ ವಿವರವಾದ ವರದಿ, ಮಾಧ್ಯಮಗಳಿಗೆ ಲಭ್ಯವಾಗಿದ್ದು, ಜೈಲು ಅಧಿಕಾರಿಗಳು ಹಲವು ತಿಂಗಳುಗಳಿಂದ ನೀಡಲಾದ ವೈದ್ಯಕೀಯ ವರದಿಯನ್ನು ನಿರ್ಲಕ್ಷಿಸಿದ ಪರಿಣಾಮ, ಇಮ್ರಾನ್ ಖಾನ್ ಅವರ ಬಲ ಕಣ್ಣಿನ ದೃಷ್ಟಿ ಸುಮಾರು 85 ಶೇಕಡಾದಷ್ಟು ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿಯನ್ನು ಕಾರಾಗೃಹದಲ್ಲಿ ಏಕಾಂಗಿಯಾಗಿ ಇರಿಸಿ, ಸಮಯಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡದೆ, ಕುಟುಂಬ ಸದಸ್ಯರನ್ನು ಭೇಟಿಯಾಗಲು ಅವಕಾಶ ನೀಡದೇ, ಕಾನೂನು ಸಲಹೆಗಾರರ ಸಂಪರ್ಕದಿಂದಲೂ ದೂರವಿಟ್ಟಿರುವ ಗಂಭೀರ ಪರಿಸ್ಥಿತಿಯನ್ನು ಇದು ತೋರಿಸುತ್ತದೆ. ಈ ಪರಿಸ್ಥಿತಿಗೆ ಪಾಕಿಸ್ತಾನದ ‘ಡೀಪ್ ಸ್ಟೇಟ್’ ಮತ್ತು ಸೇನೆ ಕಾರಣವೆಂದು ಟೀಕಾಕಾರರು ಆರೋಪಿಸಿದ್ದಾರೆ.
ವರದಿ ಪ್ರಕಾರ, ಇಮ್ರಾನ್ ಖಾನ್ ಅವರು ಅಮಿಕಸ್ ಕ್ಯೂರಿಯೆಗೆ ಸುಮಾರು ಮೂರ್ನಾಲ್ಕು ತಿಂಗಳುಗಳ ಹಿಂದೆ, ಎರಡೂ ಕಣ್ಣುಗಳಲ್ಲಿ ಸಾಮಾನ್ಯ 6x6 ದೃಷ್ಟಿ ಇತ್ತು ಎಂದು ತಿಳಿಸಿದ್ದಾರೆ. ಬಳಿಕ ಅವರಿಗೆ ನಿರಂತರವಾಗಿ ಮಸುಕಾದ ಮತ್ತು ಸ್ಪಷ್ಟವಾಗದ ದೃಷ್ಟಿ ಸಮಸ್ಯೆ ಆರಂಭವಾಗಿದ್ದು, ಅದನ್ನು ಆಗಿನ ಜೈಲು ಅಧೀಕ್ಷಕರಿಗೆ ಹಲವು ಬಾರಿ ತಿಳಿಸಿದ್ದರೂ, ಜೈಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ಹೇಳಿದೆ.
ಇದರಿಂದಾಗಿ ಇಂದು ಇಮ್ರಾನ್ ಖಾನ್ ಅವರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಬಲ ಕಣ್ಣಿನ ದೃಷ್ಟಿ ಏಕಾಏಕಿ ಸಂಪೂರ್ಣವಾಗಿ ಕಳೆದುಹೋಗಿದೆ ಎಂದು ವರದಿ ಹೇಳುತ್ತದೆ. ಪಿಐಎಂಎಸ್ ಆಸ್ಪತ್ರೆಯಿಂದ ನೇತ್ರ ತಜ್ಞರನ್ನು ಕರೆಯಲಾಯಿತು. ಪರೀಕ್ಷೆಯಲ್ಲಿ ಬ್ಲಡ್ ಕ್ಲಾಟ್ ಉಂಟಾಗಿ “ಗಂಭೀರ ಹಾನಿ” ಆಗಿರುವುದು ಕಂಡುಬಂದಿದ್ದು, ಇಂಜೆಕ್ಷನ್ ಮತ್ತು ಚಿಕಿತ್ಸೆಯ ಬಳಿಕವೂ ಅವರ ಬಲ ಕಣ್ಣಿನಲ್ಲಿ ಶೇಕಡಾ 15ರಷ್ಟು ಮಾತ್ರ ದೃಷ್ಟಿ ಉಳಿದಿದೆ.
ಸಫ್ದರ್ ಅವರು ಜೈಲು ಭೇಟಿ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರನ್ನು ಸ್ವತಃ ಪರಿಶೀಲಿಸಿದ್ದು, ಅವರಲ್ಲಿ ಸ್ಪಷ್ಟವಾದ ದೈಹಿಕ ಮತ್ತು ಮಾನಸಿಕ ಅನಾರೋಗ್ಯ ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.