ಟೆಲ್ ಅವೀವ್: ಎರಡು ದಿನಗಳ ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಗುರುವಾರ ಗಾಜಾ ಶಾಂತಿ ಉಪಕ್ರಮಕ್ಕೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದು, "ಸಂಘರ್ಷಕ್ಕೆ ಮಾನವೀಯತೆ ಎಂದಿಗೂ ಬಲಿಯಾಗಬಾರದು" ಎಂದು ಪ್ರತಿಪಾದಿಸಿದ್ದಾರೆ.
ಜೆರುಸಲೆಮ್ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತದ ಭದ್ರತಾ ಹಿತಾಸಕ್ತಿಗಳು, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ನಿಕಟ ಸಂಬಂಧ ಹೊಂದಿವೆ ಎಂದು ಹೇಳಿದರು. ಅಲ್ಲದೆ ಗಾಜಾದಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.
ಭಾರತದ ನಿಲುವು ಸ್ಪಷ್ಟವಾಗಿದೆ
ಮಾನವೀಯತೆಯು ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು. ಗಾಜಾ ಶಾಂತಿ ಯೋಜನೆಯ ಮೂಲಕ ಶಾಂತಿಯ ಹಾದಿಯನ್ನು ಸೃಷ್ಟಿಸಲಾಗಿದೆ. ಭಾರತವು ಈ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸಿದೆ ಎಂದು ಮೋದಿ ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಭವಿಷ್ಯದಲ್ಲಿಯೂ ಸಹ, ನಾವು ಎಲ್ಲಾ ದೇಶಗಳೊಂದಿಗೆ ಮಾತುಕತೆ ಮತ್ತು ಸಹಕಾರವನ್ನು ಮುಂದುವರಿಸುತ್ತೇವೆ" ಎಂದು ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ತಮ್ಮ ನಿಲುವನ್ನು ಒತ್ತಿ ಹೇಳಿದ ಇಬ್ಬರೂ ನಾಯಕರು, "ಯಾವುದೇ ರೂಪದಲ್ಲಿ, ಯಾವುದೇ ಅಭಿವ್ಯಕ್ತಿಯಲ್ಲಿ" ಅದಕ್ಕೆ ಸ್ಥಾನವಿಲ್ಲ ಎಂದು ಘೋಷಿಸಿದರು. ಭಯೋತ್ಪಾದನೆ ಮತ್ತು ಅದರ ಬೆಂಬಲಿಗರನ್ನು ಎದುರಿಸುವಲ್ಲಿ ಭಾರತ ಮತ್ತು ಇಸ್ರೇಲ್ ನಿರಂತರವಾಗಿ "ಹೆಗಲಿಗೆ ಹೆಗಲು" ಕೊಟ್ಟು ನಿಂತಿವೆ ಮತ್ತು ಅದನ್ನು ಮುಂದುವರಿಸುತ್ತವೆ ಎಂದು ಮೋದಿ ಹೇಳಿದರು.
ಇಸ್ರೇಲ್ ಹಾಗೂ ಭಾರತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರದಲ್ಲೇ ಅಂತಿಮ ರೂಪ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮೋದಿ,
ತಂತ್ರಜ್ಞಾನ ವರ್ಗಾವಣೆಯನ್ನು ಸಕ್ರಿಯಗೊಳಿಸುವ ಚೌಕಟ್ಟು ಒಳಗೊಂಡಂತೆ ಜಂಟಿ ಅಭಿವೃದ್ಧಿ ಮತ್ತು ಮಿಲಿಟರಿ ಹಾರ್ಡ್ವೇರ್ನ ಜಂಟಿ ಉತ್ಪಾದನೆಯ ಮೂಲಕ ಸಹಯೋಗವನ್ನು ಮತ್ತಷ್ಟು ವಿಸ್ತರಿಸಲು ಎರಡೂ ದೇಶಗಳು ಒಪ್ಪಿಕೊಂಡಿ ಎಂದರು ತಿಳಿಸಿದ್ದಾರೆ.