ಮೊಜ್ತಾಬಾ ಖಮೇನಿ-ಡೊನಾಲ್ಡ್ ಟ್ರಂಪ್ online desk
ವಿದೇಶ

'ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಕೆಲಸ ಮುಗಿಸುತ್ತೇವೆ'; ಖಮೇನಿ ಅಂತ್ಯಕ್ರಿಯೆ ನಡುವೆಯೇ ಇರಾನ್‌ಗೆ ಟ್ರಂಪ್ ಎಚ್ಚರಿಕೆ

9.1 ಕೋಟಿ ಜನರ ಮೇಲೆ ಪರಿಣಾಮ ಬೀರಲು ನಾನು ಬಯಸುವುದಿಲ್ಲ. ಬೇಕಾದರೆ ಅವರ ಸೇತುವೆಗಳನ್ನು ಒಂದು ಗಂಟೆಯಲ್ಲೇ ಧ್ವಂಸಗೊಳಿಸಬಹುದು. ಆದರೆ, ನಾವು ಶಾಂತಿಯುತ ಪರಿಹಾರವನ್ನೇ ಬಯಸುತ್ತೇವೆ.

ವಾಷಿಂಗ್ಟನ್: ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆ ನಡೆಯುತ್ತಿರುವ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮತ್ತೊಮ್ಮೆ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ಸೋಮವಾರ ಮಾತನಾಡಿದ ಟ್ರಂಪ್, "ನಾವು ಒಂದು ರೀತಿಯಲ್ಲಿ ಗೆಲ್ಲುತ್ತೇವೆ. ಇರಾನ್ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲವಾದರೆ ಉಳಿದ ಕೆಲಸವನ್ನು ನಾವು ಪೂರ್ಣಗೊಳಿಸುತ್ತೇವೆ. ಆ ಕೆಲಸವನ್ನು ಮುಗಿಸುವುದು ನಮಗೆ ಕಷ್ಟವೇನಲ್ಲ. ಆದರೂ ಯುದ್ಧಕ್ಕಿಂತ ಒಪ್ಪಂದವೇ ನನಗೆ ಇಷ್ಟ" ಎಂದು ಹೇಳಿದ್ದಾರೆ.

"9.1 ಕೋಟಿ ಜನರ ಮೇಲೆ ಪರಿಣಾಮ ಬೀರಲು ನಾನು ಬಯಸುವುದಿಲ್ಲ. ಬೇಕಾದರೆ ಅವರ ಸೇತುವೆಗಳನ್ನು ಒಂದು ಗಂಟೆಯಲ್ಲೇ ಧ್ವಂಸಗೊಳಿಸಬಹುದು. ಆದರೆ, ನಾವು ಶಾಂತಿಯುತ ಪರಿಹಾರವನ್ನೇ ಬಯಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಇರಾನ್‌ನ ಅಣ್ವಸ್ತ್ರ ಹೊಂದುವ ಯೋಜನೆಯನ್ನು ಉಲ್ಲೇಖಿಸಿದ ಅವರು, "ಇರಾನ್‌ಗೆ ಯಾವುದೇ ಪರಮಾಣು ಶಸ್ತ್ರಾಸ್ತ್ರ ಇರಲು ಅವಕಾಶ ನೀಡುವುದಿಲ್ಲ. ಯುರೇನಿಯಂ ಸಂವರ್ಧಿತ ವಸ್ತು ಸೇರಿದಂತೆ ಪರಮಾಣು ಸಾಮಗ್ರಿಯನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ, ಇರಾನ್‌ನಲ್ಲಿ ಆಡಳಿತ ಬದಲಾವಣೆ (Regime Change) ನಮ್ಮ ಉದ್ದೇಶವಲ್ಲ ಎಂದೂ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಶಾಂತಿ ಒಪ್ಪಂದದ ಬಳಿಕ ಕದನ ವಿರಾಮ ಜಾರಿಯಲ್ಲಿದ್ದರೂ, ಟ್ರಂಪ್ ಇರಾನ್ ವಿರುದ್ಧ ಕಠಿಣ ಹೇಳಿಕೆಗಳನ್ನು ಮುಂದುವರಿಸಿದ್ದಾರೆ.

ಜುಲೈ 3ರಂದು ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಇರಾನ್‌ನ ಉನ್ನತ ನಾಯಕರು ಹಾಗೂ ಧಾರ್ಮಿಕ ಮುಖಂಡರು ಒಂದೇ ಸ್ಥಳದಲ್ಲಿ ಸೇರಿದ್ದಾಗ, "ಒಂದೇ ದಾಳಿಯಲ್ಲಿ ಎಲ್ಲರನ್ನೂ ಗುರಿಯಾಗಿಸಬಹುದಿತ್ತು. ಆದರೆ, ಮಾತುಕತೆ ನಡೆಸಲು ಯಾರೂ ಉಳಿಯುವುದಿಲ್ಲ ಎಂಬ ಕಾರಣಕ್ಕೆ ನಾವು ಹಾಗೆ ಮಾಡಲಿಲ್ಲ" ಎಂದು ಹೇಳಿದ್ದರು.

ಅಲ್ಲದೆ, ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಟ್ರಂಪ್, "ಅವರು ಅಳುತ್ತಿರುವುದು ನಿಜವೇ, ಇಲ್ಲವೇ ನಕಲಿ ಕಣ್ಣೀರೋ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದ್ದರು.

ಈ ನಡುವೆ ಟ್ರಂಪ್ ಅವರ ಹೇಳಿಕೆಗಳಿಗೆ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದೆ. ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ತನ್ನ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, "ಅಮೆರಿಕಕ್ಕೆ ನಾಗರಿಕತೆ ಇಲ್ಲ, ಇತಿಹಾಸ ಇಲ್ಲ, ಗೌರವವೂ ಇಲ್ಲ. ಆದ್ದರಿಂದ ಖಮೇನಿ ಅವರ ನಿಧನಕ್ಕೆ ಜನರು ತೋರಿದ ಶೋಕವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಕಿಡಿಕಾರಿದೆ.

"ವ್ಯಕ್ತಿಗಳನ್ನು ಕೊಲ್ಲಬಹುದು, ಆದರೆ, ಅವರ ಆದರ್ಶಗಳನ್ನು ಕೊಲ್ಲಲು ಸಾಧ್ಯವಿಲ್ಲ. ನೀವು ಖಮೇನಿ ಅವರನ್ನು ಹತ್ಯೆ ಮಾಡಿರಬಹುದು, ಆದರೆ, ಅವರ ಚಿಂತನೆಗಳ ಪರಿಮಳವನ್ನು ವಿಶ್ವದಾದ್ಯಂತ ಹರಡಿದ್ದೀರಿ" ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ: ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ; ಹಡಗಿನಲ್ಲಿ ಭಾರೀ ಬೆಂಕಿ, ತನಿಖೆ ಆರಂಭ

2/3 ಬಹುಮತಕ್ಕಾಗಿ SIR ದುರುಪಯೋಗ, ಸಂವಿಧಾನ ಬದಲಿಸುವ ಸಂಚು: BJP ವಿರುದ್ಧ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ

ವಾರಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸುರಂಗ ಕುಸಿತ; ಮಳೆಯಲ್ಲಿ ಕೊಚ್ಚಿಹೋದ 7 ಸಾವಿರ ಕೋಟಿ!

AIನಲ್ಲಿ Microsoft ಶತಕೋಟಿ ಡಾಲರ್ ಹೂಡಿಕೆ ಬೆನ್ನಲ್ಲೇ 4,800 ಉದ್ಯೋಗಿಗಳ ಕೆಲಸಕ್ಕೆ ಕುತ್ತು!

ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ: ಸಿಂಧೂ ನದಿ ನೀರು ಬಿಡದಿದ್ದರೇ... ಭಾರತಕ್ಕೆ ಯುದ್ಧದ ಬೆದರಿಕೆ ಹಾಕಿದ ಬಿಲಾವಲ್ ಭುಟ್ಟೋ!